ಕಾಬೂಲ್ : ಅಫ್ಘಾನಿಸ್ತಾನದ ವಿದೇಶಾಂಗ ಸಚಿವರು ಇತ್ತ ಇದೇ ಮೊದಲ ಬಾರಿಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿರುವಂತೆಯೇ ಪಾಕಿಸ್ತಾನವು ಕಾಬೂಲ್ ಮೇಲೆ ವಾಯುದಾಳಿ ನಡೆಸಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥನನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದ್ದು, ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಹೆಚ್ಚುತ್ತಿರುವ ಬಾಂಧವ್ಯವು ಪಾಕಿಸ್ತಾನವನ್ನು ಕಳವಳಕ್ಕೆ ದೂಡಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಗುರುವಾರ ರಾತ್ರಿ ಕಾಬೂಲ್ನಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ವಾಯುದಾಳಿ ನಡೆಸಿವೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಶಿಬಿರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. 2018ರಿಂದ ಟಿಟಿಪಿ ಮುಖ್ಯಸ್ಥನಾಗಿರುವ ನೂರ್ ವಾಲಿ ಮೆಹಸೂದ್ನನ್ನು ಹತ್ಯೆ ಮಾಡುವುದು ದಾಳಿಯ ಪ್ರಮುಖ ಉದ್ದೇಶವಾಗಿತ್ತು. ಆದರೆ, ದಾಳಿಯ ನಂತರ ಆಡಿಯೋ ಸಂದೇಶ ಬಿಡುಗಡೆ ಮಾಡಿರುವ ಮೆಹಸೂದ್, ತಾನು ಸುರಕ್ಷಿತವಾಗಿರುವುದಾಗಿ ಹೇಳಿಕೊಂಡಿದ್ದಾನೆ. ಪಾಕಿಸ್ತಾನ ಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಟಿಟಿಪಿ, ಇತ್ತೀಚೆಗೆ ಅಕ್ಟೋಬರ್ 8ರಂದು ನಡೆಸಿದ ದಾಳಿಯಲ್ಲಿ 11 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದರು.
ಈ ವಾಯುದಾಳಿಗೆ ಕೇವಲ 24 ಗಂಟೆಗಳ ಮೊದಲು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘನ್ ತಾಲಿಬಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದರು. “ಎಲ್ಲವೂ ಸಾಕು. ಪಾಕಿಸ್ತಾನದ ಮೇಲೆ ದಾಳಿ ಮಾಡಲು ಉಗ್ರರು ಅಫ್ಘಾನಿಸ್ತಾನದ ನೆಲವನ್ನು ಬಳಸುವುದನ್ನು ಇನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು. “60 ಲಕ್ಷ ಆಫ್ಘನ್ ನಿರಾಶ್ರಿತರಿಗೆ ಆತಿಥ್ಯ ನೀಡಿದ್ದಕ್ಕೆ ನಾವು ನಮ್ಮ ರಕ್ತದಿಂದ ಬೆಲೆ ತೆರುತ್ತಿದ್ದೇವೆ. ಈ ಭಯೋತ್ಪಾದನೆ ಮತ್ತು ಕೊಲೆಗಳ ಚಕ್ರವನ್ನು ಕೊನೆಗಾಣಿಸಲು ಅಫ್ಘಾನಿಸ್ತಾನದ ಅತಿಥಿಗಳು ತಮ್ಮ ಮನೆಗಳಿಗೆ ಮರಳುವ ಸಮಯ ಬಂದಿದೆ” ಎಂದು ಅವರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದರು.
ಭಾರತ-ಆಫ್ಘನ್ ಬಾಂಧವ್ಯ : ಅಫ್ಘನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಆರು ದಿನಗಳ ಭಾರತ ಪ್ರವಾಸದಲ್ಲಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. 2021ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಉಭಯ ದೇಶಗಳ ನಡುವೆ ನಡೆಯುತ್ತಿರುವ ಅತ್ಯುನ್ನತ ಮಟ್ಟದ ಸಂವಾದ ಇದಾಗಿದೆ. ಭಾರತವು ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಗುರುತಿಸದಿದ್ದರೂ, ಮಾನವೀಯ ನೆರವು ನೀಡುವ ಮೂಲಕ ಸಂಬಂಧವನ್ನು ಮುಂದುವರಿಸಿದೆ. ಪಾಕಿಸ್ತಾನದೊಂದಿಗೆ ತಾಲಿಬಾನ್ನ ಸಂಬಂಧ ಹದಗೆಟ್ಟಿರುವ ಹೊತ್ತಲ್ಲೇ, ಭಾರತದೊಂದಿಗಿನ ಈ ಹೊಸ ಸ್ನೇಹವು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದ್ದು, ಅದರ ಪರಿಣಾಮವೇ ಈ ವಾಯುದಾಳಿ ಎಂದು ವಿಶ್ಲೇಷಿಸಲಾಗುತ್ತಿದೆ.



















