ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ಗೆ ಇಂದು ಅದೃಷ್ಟ ಪರೀಕ್ಷೆಯಾಗಿದೆ. ಪರಪ್ಪನ ಅಗ್ರಹಾರದಲ್ಲೇ ಉಳಿಯುತ್ತಾರೆಯೇ ಅಥವಾ ಬಳ್ಳಾರಿ ಜೈಲಿಗೆ ಹೋಗುತ್ತಾರೆಯೇ ಎನ್ನುವುದು ಇಂದು (ಮಂಗಳವಾರ) ಕೋರ್ಟ್ ನಲ್ಲಿ ತೀರ್ಮಾನವಾಗಲಿದೆ. ಇತ್ತ, ಎ1 ಆರೋಪಿ ಪವಿತ್ರಗೌಡ ಜಾಮೀನು ಭವಿಷ್ಯ ಕೂಡ ತೀರ್ಮಾನವಾಗಲಿದೆ.
ಭದ್ರತಾ ದೃಷ್ಟಿಯಿಂದ ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂದು ಸರ್ಕಾರಿ ಪರ ವಕೀಲರು ಮಾಡಿರುವ ಮನವಿ ಅರ್ಜಿ ವಿಚಾರಣೆ ನಡೆಸಲಿದೆ. ಈಗಾಗಲೇ ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದು, ಟ್ರಯಲ್ ಅತೀ ಶೀಘ್ರದಲ್ಲೇ ಪ್ರಾರಂಭ ಆಗುತ್ತಾ ಇದೆ. ಹೀಗಾಗಿ, ಆರೋಪಿಯನ್ನು ಪದೇ ಪದೇ ಬಳ್ಳಾರಿಯಿಂದ ಕರೆತರಲು ಸಾಧ್ಯವಿಲ್ಲ.
ಜೊತೆಗೆ ಆರೋಪಿ ತಾಯಿಗೆ ಕ್ಯಾನ್ಸರ್ ಮಾರಕ ಕಾಯಿಲೆ ಇದ್ದು, ಬಳ್ಳಾರಿಗೆ ಪ್ರಯಣ ಮಾಡಲು ಕಷ್ಟ. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರಿಸುವಂತೆ ಮನವಿ ಮಾಡಿದ್ದಾರೆ. ಇಂದು ವಾದ ಮಂಡನೆ ಮಾಡಲಿರುವ ಸರ್ಕಾರಿ ಪರ ವಕೀಲರು ಯಾವ ಅಂಶವನ್ನು ಮುಂದಿಡಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ.
ಇನ್ನು, ಪವಿತ್ರಗೌಡಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಜೈಲಿಗೆ ಕಳುಹಿಸಿದೆ. ಆದರೆ, ಜೈಲಿಗೆ ಹೋದ ನಾಲ್ಕನೇ ದಿನಕ್ಕೆ ಮತ್ತೆ ಸೆಷನ್ಸ್ ಕೋರ್ಟ್ ಜಾಮೀನಿಗೆ ಪವಿತ್ರಾ ಗೌಡ ಅರ್ಜಿ ಹಾಕಿದ್ದರು. ಬಿಎನ್ಎಸ್ಎಸ್ ಅಲ್ಲಿ ವಿಚಾರಣೆ ನಡೆಸುವ ಬದಲು ಸಿಆರ್ಪಿಸಿನಲ್ಲಿ ವಿಚಾರಣೆ ನಡೆಸುತ್ತಾಇದ್ದಾರೆ.
ಹೀಗಾಗಿ ತಾಂತ್ರಿಕ ಕಾರಣಗಳಿಂದ ಜಾಮೀನು ಮಂಜೂರು ಮಾಡಬೇಕೆಂದು ಪವಿತ್ರಗೌಡ ಪರ ವಕೀಲರು ವಾದ ಮಂಡನೆ ಮಾಡಿಸಿದ್ದಾರೆ. ಇತ್ತ ಸರ್ಕಾರಿ ಪರ ವಕೀಲರು ಕಾನೂನಿನ ಅವಕಾಶದ ಬಗ್ಗೆ ವಾದ ಮಂಡನೆ ಮಾಡಿದ್ದು, ವಾದ – ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ. ಇಂದು ಕೋರ್ಟ್ ಏನು ಆದೇಶ ನೀಡಲಿದೆ ಎಂದು ಕುತೂಹಲ ಮೂಡಿಸಿದೆ.