ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಜೀವನ ಶೈಲಿ ಜೈಲಿನಲ್ಲಿ ಬದಲಾಗಲಿದೆ.
ಈಗಾಗಲೇ ಪ್ರಜ್ವಲ್ ಕಳೆದ 14 ತಿಂಗಳುಗಳಿಂದಲೂ ಜೈಲಿನಲ್ಲಿದ್ದಾರೆ. ಈಗ ಪ್ರಜ್ವಲ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. 15528 ನಂಬರ್ ನೀಡಲಾಗಿದ್ದು, ಇಂದು ಪ್ರಜ್ವಲ್ ಗೆ ಜೈಲು ಸಿಬ್ಬಂದಿ ಬಿಳಿ ವಸ್ತ್ರ ನೀಡಲಿದೆ. ಅಲ್ಲದೇ, ಜೈಲು ನಿಯಮಾವಳಿ ಅನುಸಾರ ಜೈಲು ಆಧೀಕ್ಷಕರು ನೀಡುವ ಕೆಲಸ ಮಾಡಿಕೊಂಡಿರಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಸಜಾಬಂಧಿ ಕೈದಿಗಳ ಬ್ಯಾರಕ್ ಗೆ ಪ್ರಜ್ವಲ್ ರನ್ನು ಶಿಫ್ಟ್ ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಜಾಬಂಧಿಯಾಗಿ ತಡರಾತ್ರಿವರೆಗೂ ನಿದ್ದೆ ಮಾಡದ ಪ್ರಜ್ವಲ್ ರೇವಣ್ಣ, ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ಸುಮ್ಮನೆ ಕುಳಿತುಕೊಂಡಿದ್ದರು ಎನ್ನಲಾಗಿದೆ. ಪ್ರಜ್ವಲ್ ರೇವಣ್ಣನಿಗೆ ಅವಲಕ್ಕಿ ಉಪ್ಪಿಟ್ಟು ತಿಂಡಿ ನೀಡಿದ್ದಾರೆ. ಕಡ್ಡಾಯ ಜೈಲಿನೊಳಗೆ 8 ಗಂಟೆ ಕೆಲಸ ಮಾಡಬೇಕು. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಗಳನ್ನ ಚಾಚು ತಪ್ಪದೆ ಪಾಲಿಸಬೇಕು.
ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲದೇ, ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಪಾವತಿ ಮಾಡಲಾಗುತ್ತೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂ. ಸಂಬಳ ನೀಡಲಾಗುತ್ತೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ.



















