ತುಮಕೂರು: ಹತ್ತು ಸಾವಿರ ಕೊಡ್ತೀನಿ ಬಾ ಎಂದು ಯುವತಿಯನ್ನು ಮಂಚಕ್ಕೆ ಕರೆದ ಪ್ರಾಂಶುಪಾಲನನ್ನು ತುಮಕೂರು ಮಹಿಳಾ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿ ಪ್ರಾಂಶುಪಾಲನನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಆರೋಪಿ ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇದಕ್ಕೂ ಮುನ್ನ 2019ರಲ್ಲಿ ತುಮಕೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾದ್ಯಾಪಕನಾಗಿದ್ದ. ಈ ಸಮಯದಲ್ಲಿ ಆರೋಪಿ ವಿದ್ಯಾರ್ಥಿನಿಯೊಬ್ಬಳ ನಂಬರ್ ಪಡೆದು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ.
ಸಂತ್ರಸ್ತೆ ಕಾಲೇಜು ಬಿಟ್ಟರೂ, ಯೋಗೇಶ್ ಸಂದೇಶ ಕಳುಹಿಸುವುದನ್ನು ಬಿಟ್ಟಿರಲಿಲ್ಲ. ಇದರಿಂದ ಸಂತ್ರಸ್ತೆ ಬೇಸತ್ತು ಆತನ ನಂಬರ್ ಬ್ಲಾಕ್ ಮಾಡಿದ್ದಳು. ಇದಾದ ಬಳಿಕ ಒಂದು ವರ್ಷದಿಂದ ಸೈಲೆಂಟ್ ಆಗಿದ್ದ ಯೋಗೇಶ್, ಜು.22 ರಂದು ರಸ್ತೆಯಲ್ಲಿ ಯುವತಿಯನ್ನು ಕಂಡು, ಮತ್ತೊಂದು ನಂಬರ್ನಿಂದ ಸಂದೇಶ ಕಳುಹಿಸಿ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ಈ ಬಾರಿ ನನಗೆ ನೀನು ಬೇಕು, 10 ಸಾವಿರ ಹಣ ಕೊಡುತ್ತೇನೆಂದು ಪೀಡಿಸಿದ್ದ.
ಈ ವಿಚಾರವನ್ನು ಸಂತ್ರಸ್ತೆ ತಂದೆಗೆ ತಿಳಿಸಿದ್ದಳು. ಬಳಿಕ ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಲೈಂಗಿಕ ಕಿರುಕುಳ ಹಾಗೂ ಅಟ್ರಾಸಿಟಿ ಕೇಸ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.