ನವದೆಹಲಿ: ಅದೆಷ್ಟೋ ಪರ್ವತಾರೋಹಿಗಳ ಕನಸಿನ ಶಿಖರವಾಗಿರುವ ಅಲಾಸ್ಕಾದ ಮೌಂಟ್ ಮೆಕಿನ್ಲಿ (ಡೆನಾಲಿ) ಶಿಖರವು, ಹಲವರನ್ನು ಬಲಿ ಪಡೆದಿರುವ ಮತ್ತು ಪಡೆಯುತ್ತಿಯುವ ಅಪಾಯಗಳ ಆಗರವೂ ಹೌದು. ಈ ಘನೀಕೃತ ಹಿಮಗಳ ನಡುವಿನ ಎತ್ತರದಲ್ಲಿ, ಭಾರತದ ಹೆಮ್ಮೆಯ ಪರ್ವತಾರೋಹಿ ಮತ್ತು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಶೇಖ್ ಹಸನ್ ಖಾನ್ ಅವರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮರಿಗೆ ಗೌರವ ಸಲ್ಲಿಸಲೆಂದು ಅವರು ಕೈಗೊಂಡಿರುವ ಮಹತ್ವಾಕಾಂಕ್ಷೆಯ “ಆಪರೇಷನ್ ಸಿಂದೂರ ಗೌರವ” ಯೋಜನೆಯ ಕೊನೆಯ ಹಂತದಲ್ಲಿ ಈ ಅನಿರೀಕ್ಷಿತ ದುರ್ಘಟನೆ ಸಂಭವಿಸಿದೆ.
ಕೇರಳ ಮೂಲದ ಶೇಖ್ ಹಸನ್ ಖಾನ್, 20,310 ಅಡಿ ಎತ್ತರದ ಡೆನಾಲಿ ಶಿಖರದ ತುದಿಗೆ ಸಮೀಪಿಸುತ್ತಿದ್ದಾಗ, ಅನಿರೀಕ್ಷಿತವಾಗಿ ಹವಾಮಾನವು ಉಗ್ರ ಸ್ವರೂಪ ತಾಳಿದೆ. ಮೈನಸ್ ಡಿಗ್ರಿ ತಾಪಮಾನ, ದೇಹವನ್ನು ನಡುಗಿಸುವ ಶೀತಗಾಳಿಗಳು ಮತ್ತು ಮಂಜು ಅಕ್ಷರಶಃ ಜೀವ ಹಿಂಡುತ್ತಿವೆ. ಶಿಖರದ ಅತ್ಯಂತ ಕಡಿದಾದ ಮತ್ತು ಅಪಾಯಕಾರಿ ವಲಯದಲ್ಲಿ ಅವರು ಸಿಕ್ಕಿಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅವರೊಂದಿಗೆ, ಇತರ ಮೂವರು ವಿದೇಶಿ ಪರ್ವತಾರೋಹಿಗಳೂ ಇದೇ ರೀತಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಭಾರತದ ಸೇನಾನಿಯ ರಕ್ಷಣೆಗೆ ಜಗತ್ತಿನ ಪ್ರಾರ್ಥನೆ
ಅಲಾಸ್ಕಾ ಪಾರ್ಕ್ ರೇಂಜರ್ಸ್ ತಂಡವು ಈಗಾಗಲೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಹೆಲಿಕಾಪ್ಟರ್ಗಳ ಮೂಲಕ ಶೇಖ್ ಹಸನ್ ಖಾನ್ ಮತ್ತು ಇತರರನ್ನು ರಕ್ಷಿಸಲು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿವೆ. ಆದರೆ, ಪ್ರಕೃತಿಯ ಅಪಾರ ಶಕ್ತಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯುಂಟುಮಾಡುತ್ತಿದೆ. ಮಂಜು ಮುಸುಕಿದ ವಾತಾವರಣ, ನಿರಂತರ ಬಿರುಗಾಳಿಗಳು ಹೆಲಿಕಾಪ್ಟರ್ಗಳ ಹಾರಾಟವನ್ನು ಕಷ್ಟಕರವಾಗಿಸಿವೆ. ರಕ್ಷಣಾ ತಂಡಗಳು ತಮ್ಮ ಜೀವದ ಹಂಗು ತೊರೆದು ಸಾಹಸಮಯವಾಗಿ ಕಾರ್ಯ ನಿರ್ವಹಿಸುತ್ತಿವೆಯಾದರೂ ಅವರ ಪ್ರಯತ್ನ ಇನ್ನೂ ಯಶ ಕಂಡಿಲ್ಲ.
ಭಾರತದಲ್ಲಿ, ಶೇಖ್ ಹಸನ್ ಖಾನ್ ಅವರ ಕುಟುಂಬ, ರಕ್ಷಣಾ ಅಧಿಕಾರಿಗಳು ಮತ್ತು ದೇಶದಾದ್ಯಂತ ಇರುವ ಅವರ ಅಭಿಮಾನಿಗಳು ಅವರ ಸುರಕ್ಷಿತ ಮರಳುವಿಕೆಗಾಗಿ ಕಾಯುತ್ತಿದ್ದಾರೆ. ಒಬ್ಬ ಸೈನಿಕ ದೇಶಕ್ಕಾಗಿ ನಿಲ್ಲುವಂತೆ, ಇಡೀ ದೇಶ ಈಗ ಆ ಸೈನಿಕನ ರಕ್ಷಣೆಗಾಗಿ ಪ್ರಾರ್ಥಿಸುತ್ತಿದೆ.
“ಆಪರೇಷನ್ ಸಿಂಧೂರ್ ಗೌರವ”: ಹುತಾತ್ಮರಿಗೊಂದು ಧೀರ ನಮನ
ಶೇಖ್ ಹಸನ್ ಖಾನ್ ಕೇವಲ ಪರ್ವತಾರೋಹಿಯಲ್ಲ, ಬದಲಿಗೆ ದೇಶಭಕ್ತಿಯಿಂದ ತುಂಬಿದ ಹೃದಯ ಹೊಂದಿರುವ ಮಾಜಿ ಸೈನಿಕ. ಅವರು ತಮ್ಮ ಈ ಸಾಹಸಕ್ಕೆ “ಆಪರೇಷನ್ ಸಿಂದೂರ ಗೌರವ” ಎಂಬ ಹೆಸರಿಟ್ಟಿದ್ದರು. ಭಾರತದ ಎಂಟು ರಾಜ್ಯಗಳ ಅತ್ಯುನ್ನತ ಶಿಖರಗಳನ್ನು ಏರುವ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಶಸ್ತ್ರ ಪಡೆಗಳ ವೀರರಿಗೆ ಗೌರವ ಸಲ್ಲಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಈಗಾಗಲೇ ಮೌಂಟ್ ಎವರೆಸ್ಟ್ ಸೇರಿದಂತೆ ಹಲವು ಅಪಾಯಕಾರಿ ಶಿಖರಗಳನ್ನು ಏರಿ ತಮ್ಮ ಧೈರ್ಯ ಮತ್ತು ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದರು.
ಈ ಮಹಾನ್ ಯೋಜನೆಯಲ್ಲಿ, ಅವರು ಈಗಾಗಲೇ ಭಾರತದ ಏಳು ರಾಜ್ಯಗಳ ಅತಿ ಎತ್ತರದ ಶಿಖರಗಳನ್ನು ಯಶಸ್ವಿಯಾಗಿ ಏರಿದ್ದರು. ಮೌಂಟ್ ಮೆಕಿನ್ಲಿ ಅವರ ಎಂಟನೇ ಮತ್ತು ಅಂತಿಮ ಶಿಖರವಾಗಿತ್ತು. ತಮ್ಮ ಈ ಪವಿತ್ರ ಧ್ಯೇಯವನ್ನು ಪೂರೈಸುವ ಅಂಚಿನಲ್ಲಿದ್ದಾಗ, ಅವರು ಪ್ರಕೃತಿಯ ಕ್ರೂರತೆಗೆ ಸಿಲುಕಿದ್ದಾರೆ. ಅವರು ಸುರಕ್ಷಿತವಾಗಿ ಮರಳಲಿ ಎಂದು ದೇಶ ಆಶಿಸುತ್ತಿದೆ.