ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಪರೀಕ್ಷೆ ಮಾರ್ಗಸೂಚಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ನಾಳೆ ರೈಲ್ವೆ ಇಲಾಖೆಯ ಆರ್ ಆರ್ ಬಿ ಪರೀಕ್ಷೆಗಳು ನಡೆಯಲಿವೆ.
ಆದರೆ, ಈ ಪರೀಕ್ಷಾ ನಿಬಂಧನೆಗಳಲ್ಲಿ ನಮೂದಿಸಿದಂತೆ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಯಾವುದೇ ಧಾರ್ಮಿಕ ಸಂಕೇತದ ವಸ್ತುಗಳನ್ನು ಧರಿಸುವಂತಿಲ್ಲ ಅಂತಾ ಉಲ್ಲೇಖಿಸಲಾಗಿದೆ. ಹೀಗಾಗಿ ಮಹಿಳೆಯರು ಮಂಗಳಸೂತ್ರ ಧರಿಸುವಂತಿಲ್ಲ ಅಂತಲೂ ಸ್ಪಷ್ಟವಾಗಿ ಹೇಳಲಾಗಿದೆ. ಈ ನಡೆ ದೇಶದೆಲ್ಲೆಡೆ ಈಗ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲಾ ಇದನ್ನು ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ. ವಿಶ್ವ ಹಿಂದೂ ಪರಿಷತ್ ಇಂದು ಹೋರಾಟಕ್ಕೂ ಕರೆ ನೀಡಿದೆ.
ಹಾಗಂತ ಇದು ಕೇವಲ ಮಂಗಳಸೂತ್ರಕ್ಕೆ ಸೀಮಿತವಾ? ಇಲ್ಲಾ, ಧಾರ್ಮಿಕ ಸಂಕೇತವಾದ ಬ್ರಾಹ್ಮಣರ ಜನಿವಾರ, ವೀರಶೈವರು ಧರಿಸುವ ಕರಡಿಗೆಗೂ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಇದರ ನಡುವೆಯೇ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ನಾಳಿನ ಪರೀಕ್ಷೆಗೂ ಮುನ್ನ ನಿಯಮಗಳಲ್ಲಿ ಬದಲಾವಣೆ ಆಗಲಿದೆಯಾ? ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.