ಹರಿಯುವ ನದಿಗೆ ಧರ್ಮವಿದೆಯಾ? ಜಾತಿಯಿದೆಯಾ.ಬೆಳಕು ನೀಡುವ ಸೂರ್ಯನದ್ದು ಯಾವ ಧರ್ಮ? ಬೀಸುವ , ಬೀಸೋ ಗಾಳಿಯದ್ದು ಅದ್ಯಾವ ಕುಲ?.ನಮ್ಮನ್ನೆಲ್ಲಾ ಹೊತ್ತು ನಿಂತಿರುವ ಭೂಮಿ ಯಾವ ಮತವನ್ನು ಪ್ರತಿನಿಧಿಸುತ್ತೆ. ಧರ್ಮ ಯುದ್ಧವೆನ್ನಿ ಇಲ್ಲಾ ಜಿಹಾದ್ ಎನ್ನಿ. ಆದರೆ, ಇದರ ಹಿಂದಿನ ಕೌರ್ಯಕ್ಕೆ ಮಾತ್ರ ಎಂದಿಗೂ ಕ್ಷಮೆಯಿಲ್ಲ. ಪ್ರಕೃತಿಯೇ ಧರ್ಮವನ್ನ ನೋಡದೆ ಎಲ್ಲವನ್ನೂ ನೀಡುತ್ತಿದ್ದಾಗ, ಇನ್ನು ಅದೆಲ್ಲವನ್ನೂ ಉಚಿತವಾಗಿ ಪಡೆದು ನಾವು ಜೀವಿಸುತ್ತಿದ್ದಾಗ ಇನ್ನೆಲ್ಲಿಯ ಧರ್ಮ? ಇನ್ನೆಲ್ಲಿಯ ಜಾತಿ? ದ್ವೇಷದ ಕುಲುಮೆಯಲ್ಲಿ, ಧರ್ಮದ ಕೂಪದಲ್ಲಿ ಬೆಂದವರ ರಣರೌದ್ರಾವತಾರ ಅವರ ಬಂದೂಕಿನಿಂದ ಸಿಡಿದ ಗುಂಡು ಯಾವೊಂದು ಧರ್ಮ ನೋಡದೆ ಎದೆ ಸೀಳಬಹುದು. ಮೊನ್ನೆ ಪಹಲ್ಗಾಮ್ ನಲ್ಲಿ ಧರ್ಮದ ಹೆಸರಿನಲ್ಲಿ ನಡೆದ ರಕ್ತದ ಓಕಳಿ ಒಂದೆಡೆಯಾದ್ರೆ ಅಲ್ಲೇ ಅರಳಿದ ಮಾನವೀಯ ಮೌಲ್ಯಗಳ ಭಂಡಾರ ಮತ್ತೊಂದೆಡೆ.
ಪುಟಾಣಿ ಪಾಲಿಗೆ ಜೀವದಾತನಾದ ಮುಸ್ಲಿಂ ಯುವಕ
ಆ ಪುಟಾಣಿ ತನ್ನ ಹೆತ್ತವರೊಟ್ಟಿಗೆ ಪಹಲ್ಗಾಮ್ ಗೆ ಬಂದಿದ್ಲು. ಬೈಸರನ್ ವ್ಯಾಲಿಯ ಸ್ವಚ್ಛಂದ ಪರಿಸರದಲ್ಲಿ ಆಟದಲ್ಲಿ ಆ ಬಾಲಕಿ ಮುಳುಗಿದ್ಲು. ಹೆತ್ತವರು ಅಲ್ಲೇ ಎಲ್ಲೋ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಲ್ಲಿ ಬ್ಯುಸಿಯಾಗಿದ್ರು. ಅಷ್ಟೇ ನೋಡ ನೋಡುತ್ತಿದ್ದಂತೆ ದಟ್ಟ ಕಾಡಿನಿಂದ ನುಗ್ಗಿ ಬಂದಿದ್ದ ಉಗ್ರರು ಯದ್ವಾತದ್ವಾ ಗುಂಡಿನ ದಾಳಿ ಶುರುವಿಟ್ಟುಕೊಂಡಿದ್ರು. ಅಲ್ಲಿದ್ದವರೆಲ್ಲಾ ಎಲ್ಲೆಂದರಲ್ಲಿ ಓಡೋದಕ್ಕೆ ಶುರುಮಾಡಿದ್ದಾರೆ. ದಿಕ್ಕು ತಪ್ಪಿದ ಆ ಬಾಲಕಿ ಉಗ್ರರ ತೆಕ್ಕೆಗೆ ಜಾರಿದ್ಲು.
ಬಿಜೆಪಿ ಯುವ ಮೋರ್ಚಾ ಸದಸ್ಯನ ಮಗಳು ಬಚಾವ್
ಅರವಿಂದ್ ಅಗರ್ವಾಲ್, ಚತ್ತೀಸ್ ಗಡದ ಬಿಜೆಪಿ ಯುವ ಮೋರ್ಚಾದ ಸದಸ್ಯ. ಹೆಂಡತಿ ಮಗಳು ಹಾಗೂ ಕುಟುಂಬದ 11 ಸದ್ಯರೊಟ್ಟಿಗೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ರು. ಇದೇ ವೇಳೆ ನಡೆದ ಉಗ್ರರ ದಾಳಿಯಿಂದ ಕುಟುಂಬ ಪಾರಾದ್ರೂ, ಮಗಳು ಮಾತ್ರ ಜಿಹಾದಿಗಳ ಮುಷ್ಠಿಯಲ್ಲಿ ಸಿಲುಕಿದ್ಲು.. ಇನ್ನೇನು ಆ ಕಂದಮ್ಮನ ಎದೆಗೆ ಗುಂಡಿಕ್ಕಬೇಕು ಎನ್ನುವಷ್ಟರಲ್ಲೇ ಎಂಟ್ರಿ ಕೊಟ್ಟಿದ್ದ ಸ್ಥಳೀಯ ಮುಸ್ಲಿಂ ಯುವಕ ನಜಾಕತ್ ಅಲಿ, ಆಕೆ ನನ್ನ ಮಗಳು ಅಂದಿದ್ದ. ಅಷ್ಟೇ ಪುಟಾಣಿಯನ್ನ ಅಲ್ಲೇ ಕೆಳಗಿಳಿಸಿದ್ದ ಉಗ್ರರು ಮುಂದೆ ಸಾಗಿದ್ರು.
ಮಗಳ ಜೀವ ಉಳಿಸಿದವನಿಗೆ ಅಭಿನಂದನೆ ಪತ್ರ
ಉಗ್ರರ ಅಟ್ಟಹಾಸಕ್ಕೆ ಪ್ರಾಣತೆರಬೇಕಿದ್ದ ಬಾಲಕಿ ಇಂದು ಜೀವಂತವಾಗಿ, ಸುರಕ್ಷಿತವಾಗಿದ್ದಾಳೆ. ಆದ್ರೆ ಅಂದು ಜೀವ ಉಳಿದ ಆತುರದಲ್ಲಿ ಪಹಲ್ಗಾಮ್ ನಿಂದ ತರಾತುರಿಯಲ್ಲೇ ವಾಪಸ್ ಆಗಿದ್ದ ಅಗರ್ವಾಲ್ ಇದೀಗ ಜೀವ ರಕ್ಷಿಸಿದ ನಜಾಕತ್ ಗೆ ಧನ್ಯವಾದ ಸಲ್ಲಿಸಿ ಪತ್ರ ಬರೆದಿದ್ದಾನೆ. ಅಂದು ನಿಮಗೆ ಅಭಿನಂದಿಸಲಾಗಲಿಲ್ಲ. ಆದ್ರೆ ನನ್ನ ಮಗಳ ಪ್ರಾಣ ರಕ್ಷಿಸಿದ ನಿಮಗೆ ಕೋಟಿ ಕೋಟಿ ಅಭಿನಂದನೆ ಎಂದಿದ್ದಾರೆ. ಅಷ್ಟಕ್ಕೂ ಈ ನಜಾಕತ್ ಬೇರಾರು ಎಲ್ಲ, ಉಗ್ರರ ದಾಳಿಗೆ ಪ್ರಾಣಬಿಟ್ಟ ಏಕೈಕ ಕಾಶ್ಮೀರಿಯ ಸಹೋದರ. ಒಟ್ನಲ್ಲಿ ಜವರಾಯನ ಕಣ್ಣಲ್ಲಿಲ್ಲದ ಧರ್ಮ, ಇಂಥಾ ಕಟುಕರ ಕೈಯಲ್ಲಿ ಸಿಕ್ಕಿ ನಲುಗುವಂತಾಗಿರೋದು ದುರಾದೃಷ್ಠವೇ ಸರಿ.



















