ಢಾಕಾ: ಅರಾಜಕತೆ, ಗಲಭೆ, ಹಿಂಸಾಚಾರ, ಇಸ್ಲಾಮಿಕ್ ಮೂಲಭೂತವಾದಿಗಳ ಅಟ್ಟಹಾಸದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ನಲುಗಿಹೋಗುತ್ತಿದ್ದಾರೆ. ಹಿಂದೂ ದೇವಾಲಯಗಳ ಧ್ವಂಸ, ಮನೆಗಳಿಗೆ ನುಗ್ಗಿ ಹಲ್ಲೆ, ಅತ್ಯಾಚಾರ, ಹತ್ಯೆ ಪ್ರಕರಣಗಳು ಮುಂದುವರಿದಿವೆ. ಇದಕ್ಕೆ ನಿದರ್ಶನ ಎಂಬಂತೆ, ಬಾಂಗ್ಲಾದೇಶದ ದಿನಾಜ್ ಪುರದಲ್ಲಿ ಹಿಂದೂ ಮುಖಂಡರೊಬ್ಬರನ್ನು ಅಪಹರಿಸಿ, ಭೀಕರವಾಗಿ ಹತ್ಯೆ ಮಾಡಲಾಗಿದೆ.
ಭಬೇಶ್ ಚಂದ್ರ ರಾಯ್ ಎಂಬ 58 ವರ್ಷದ ಹಿಂದೂ ಮುಖಂಡನನ್ನು ಮೂಲಭೂತವಾದಿಗಳು ಹತ್ಯೆ ಮಾಡಿದ್ದಾರೆ. ರಾಯ್ ಅವರು ಬಾಂಗ್ಲಾದೇಶ ಪೂಜಾ ಉದ್ಜಾಪನ ಪರಿಷತ್ ಮುಖಂಡರಾಗಿದ್ದು, ಇವರನ್ನು ಮನೆಯಿಂದ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಾಯ್ ಅವರ ಪತ್ನಿಯು ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಜ್ ಪುರ ಜಿಲ್ಲೆಯ ಬಸುದೇಬ್ ಪುರ ಗ್ರಾಮದಲ್ಲಿ ವಾಸವಾಗಿರುವ ಭಬೇಶ್ ಚಂದ್ರ ರಾಯ್ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿದ್ದಾರೆ. ರಾಯ್ ಅವರು ಮನೆಯಲ್ಲಿರುವುದನ್ನು ದೃಢಪಡಿಸಿಕೊಂಡ ದುಷ್ಕರ್ಮಿಗಳು, ಕರೆ ಮಾಡಿದ ಅರ್ಧ ಗಂಟೆಯಲ್ಲೇ ಮನೆಗೆ ನುಗ್ಗಿದ್ದಾರೆ. “ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ರಾಯ್ ಅವರನ್ನು ಅಪಹರಣ ಮಾಡಿದ್ದಾರೆ. ನರಬರಿ ಎಂಬ ಗ್ರಾಮಕ್ಕೆ ಕರೆದೊಯ್ದು, ಅಲ್ಲಿ ಹತ್ಯೆ ಮಾಡಿದ್ದಾರೆ” ಎಂದು ರಾಯ್ ಅವರ ಪತ್ನಿ ಶಾಂತನಾ ತಿಳಿಸಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಆಗಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆರಂಭಿಸಿದ ಪ್ರತಿಭಟನೆಯು ಹಿಂದೂ ವಿರೋಧಿ ದಂಗೆಯಾಗಿ ಬದಲಾಗಿದೆ. ಕಳೆದ ವರ್ಷದಿಂದ ಇದುವರೆಗೆ ಸಾವಿರಾರು ಹಿಂದೂಗಳನ್ನು ಕೊಲೆ ಮಾಡಲಾಗಿದೆ. ನೂರಾರು ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ. ಇದರ ಕುರಿತು ಭಾರತ ಸರ್ಕಾರವು ಆತಂಕ ವ್ಯಕ್ತಪಡಿಸಿದೆ.



















