ಬೆಂಗಳೂರು: ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಯುವಕರನ್ನು ಹಲ್ಲೆ ಮಾಡಿ ಸುಲಿಗೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಗಾಂಜಾ ಗುಂಗಿನಲ್ಲಿದ್ದ ಗ್ಯಾಂಗ್ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ಸುಲಿಗೆ ಮಾಡಿದೆ. ಹಲ್ಲೆ ಮಾಡುವ ಪುಂಡರ ಪುಂಡಾಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಐದಕ್ಕೂ ಹೆಚ್ಚು ಜನರ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು ಅಮಾಯಕ ಹುಡುಗರ ಮೇಲೆ ಸಿಕ್ಕ ಸಿಕ್ಕ ಹಾಗೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಏ. 15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಪಾಳ್ಯ ಬಸ್ ಸ್ಟಾಪ್ ನಲ್ಲಿರುವ ನಂದಿನಿ ಭೂತ್ ಹತ್ತಿರ ಈ ಘಟನೆ ನಡೆದಿದೆ.
ಉತ್ತರ ಪ್ರದೇಶ, ಬಿಹಾರ ಮೂಲದ ಯುವಕರು ಐಸ್ ಕ್ಯಾಂಡಿ ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಅವರ ಬಳಿ ಗಾಂಜಾ ಗುಂಗಿನಲ್ಲಿ ಹೋಗಿದ್ದ ಪುಂಡರು, ಹಣ ಕೇಳಿದ್ದಾರೆ. ಕೊಡದಿದ್ದಾಗ ಏಕಾಏಕಿ ಅಟ್ಟಾಡಿಸಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದಾರೆ.
ಈ ವೇಳೆ ನಂದಿನಿ ಭೂತ್ ಮಾಲೀಕ ಕೂಡ ಆರೋಪಿಗಳನ್ನು ತಡೆದಿದ್ದಾರೆ. ಆದರೆ, ಕ್ಯಾರೆ ಅನ್ನದೆ ಮನಬಂದಂತೆ ದೊಣ್ಣೆಗಳಿಂದ ಹಲ್ಲೆ ನೆಡಸಿದ್ದಾರೆ. ಕೂಡಲೇ ನಂದಿನಿ ಬೂತ್ ಮಾಲೀಕ ಜಗದೀಶ್, ಪೊಲೀಸರಿಗೆ ಕರೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೊಬೈಲ್ ಹಾಗೂ ಹಣ ಕಿತ್ತು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.