ಇಸ್ಲಾಮಾಬಾದ್: ಭಯೋತ್ಪಾದಕರ ಪೋಷಣೆ, ಉಗ್ರ ಸಂಘಟನೆಗಳಿಗೆ ಪ್ರಚೋದನೆ, ಅಸಮರ್ಥ ನಾಯಕತ್ವ, ಮಿಲಿಟರಿ ಉಪಟಳದಿಂದ ಪಾಕಿಸ್ತಾನವು ಆರ್ಥಿಕವಾಗಿ, ರಾಜಕೀಯವಾಗಿ ದಿವಾಳಿಯಾಗಿದೆ. ಜಾಗತಿಕ ಸಂಸ್ಥೆಗಳ ಎದುರು ಸಾಲಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಪರಿಸ್ಥಿತಿ ಇಷ್ಟೊಂದು ಹದಗೆಟ್ಟರೂ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತವನ್ನು ಅಭಿವೃದ್ಧಿಯಲ್ಲಿ ಹಿಂದಿಕುತ್ತೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶೆಹಬಾಜ್ ಷರೀಫ್ ಅವರು ಇಂತಹ ಅತ್ಯುತ್ಸಾಹದ ಮಾತುಗಳನ್ನು ಆಡಿದ್ದಾರೆ. “ಪಾಕಿಸ್ತಾನದ ಪರಿಸ್ಥಿತಿಯನ್ನು ಸುಧಾರಿಸಲು ನಾವು ಹಗಲು ರಾತ್ರಿ ದುಡಿಯೋಣ. ದೇವರು ನಮ್ಮ ಜತೆಗೆ ಇದ್ದಾನೆ. ಅಭಿವೃದ್ಧಿಯಲ್ಲಿ ನಾವು ಖಂಡಿತವಾಗಿಯೂ ಭಾರತವನ್ನು ಮಣಿಸುತ್ತೇವೆ. ಇಲ್ಲದಿದ್ದರೆ ನನ್ನ ಹೆಸರೇ ಶೆಹಬಾಜ್ ಷರೀಫ್ ಅಲ್ಲ” ಎಂದು ಹೇಳಿದ್ದಾರೆ. ಇವರ ಹೇಳಿಕೆಯ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಶೆಹಬಾಜ್ ಷರೀಫ್ ಅವರ ಅತ್ಯುತ್ಸಾಹದ ವೀಡಿಯೋ ಭಾರಿ ವೈರಲ್ ಆಗುತ್ತಲೇ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಪಂದ್ಯವನ್ನು ಗೆಲ್ಲಲು ಆಗದವರು, ಜಗತ್ತಿನ ಸಂಸ್ಥೆಗಳ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತವರು ಭಾರತವನ್ನು ಅಭಿವೃದ್ಧಿಯಲ್ಲಿ ಸೋಲಿಸುತ್ತಾರಂತೆ ಎಂದು ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನವು ಸಾಲದಿಂದ ಬಳಲುತ್ತಿದೆ. ಹಣದುಬ್ಬರ ಏರಿಕೆಯಾಗಿ ಜನ ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ. ವಿದೇಶಿ ವಿನಿಮಯ ಮೀಸಲೂ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲೂ ಶೆಹಬಾಜ್ ಷರೀಫ್ ಅವರು ನೀಡಿದ ಹೇಳಿಕೆಯು ನಗೆಪಾಟಲಿಗೀಡಾಗಿದೆ.