ಮೈಸೂರು: ಪಬ್ ಒಂದರಲ್ಲಿ ನಡೆದ ಗಲಾಟೆ ಒಬ್ಬನ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಮೈಸೂರು ನಗರದ ವಿಜಯನಗರ ಎರಡನೇ ಹಂತದಲ್ಲಿರುವ ಪರ್ಪಲ್ ಹೆಜ್ ರೆಸ್ಟೋರೆಂಟ್ನಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ.
ಗಲಾಟೆಯಲ್ಲಿ ಗೋಕುಲಂ ನಿವಾಸಿ 32 ವರ್ಷದ ನಿಶಾಂತ್ ಮೃತಪಟ್ಟಿದ್ದು, ಆತ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ನಿಶಾಂತ್ ತನ್ನ ಸ್ನೇಹಿತರಾದ ಸಂದೀಪ್ ಮತ್ತು ದೀಕ್ಷಿತ್ ಜೊತೆ ಪಬ್ನಲ್ಲಿ ಪಾರ್ಟಿ ಮುಗಿಸಿ ಹೊರಬರುತ್ತಿದ್ದ. ಈ ವೇಳೆ ರಾಕಿ ಎಂಬಾತ ಹಾಗೂ ಅವನ ಸ್ನೇಹಿತರು ಎದುರಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ ಎನ್ನಲಾಗಿದೆ. ಗಲಾಟೆಯ ಮಧ್ಯೆ ನಿಶಾಂತ್ ಪಬ್ನ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ನಿಶಾಂತ್ನ್ನು ಉದ್ದೇಶಪೂರ್ವಕವಾಗಿ ಮಹಡಿಯಿಂದ ತಳ್ಳಿಹಾಕಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ – ನಾಲ್ವರು ದುರ್ಮರಣ



















