ಮುಜಾಫ್ಫರ್ನಗರ್: 2022ರಲ್ಲಿ ನಡೆದ ಭೀಕರ ಕಾರು ಅಪಘಾತದ ವೇಳೆ ಕ್ರಿಕೆಟರ್ ರಿಷಭ್ ಪಂತ್ ಅವರ ಜೀವ ಉಳಿಸಿದ್ದ ಉತ್ತರಪ್ರದೇಶದ 25 ವರ್ಷದ ಯುವಕ ರಜತ್ ಕುಮಾರ್, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉತ್ತರಪ್ರದೇಶದ ಮುಜಾಫ್ಫರ್ನಗರ್ ಜಿಲ್ಲೆಯ ಬುಚ್ಚಾ ಬಸ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಪ್ರೇಯಸಿಯ ಜತೆಗೂಡಿ ರಜತ್ ವಿಷ ಸೇವಿಸಿದ್ದು, ಪ್ರೇಯಸಿ ಸಾವನ್ನಪ್ಪಿದ್ದಾಳೆ. ರಜತ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
25 ವರ್ಷದ ರಜತ್ 21 ವರ್ಷದ ಮನು ಕಶ್ಯಪ್ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಗೆ ಕುಟುಂಬ ಸದಸ್ಯರ ಒಪ್ಪದ ಕಾರಣ ಈ ಜೋಡಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿತು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿರುವ ಕಾರಣ ಮದುವೆಗೆ ಎರಡೂ ಕುಟುಂಬದವರು ನಿರಾಕರಿಸಿ, ಬೇರೆ ಸಂಬಂಧ ಹುಡುಕಲಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ರಜತ್ ಮತ್ತು ಮನು ಇಬ್ಬರೂ ಒಟ್ಟಿಗೆ ವಿಷ ಸೇವಿಸಿದ್ದು, ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನು ಆಸ್ಪತ್ರೆಯಲ್ಲಿ ಅಸುನೀಗಿದರೆ, ರಜತ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ರಜತ್ ನನ್ನ ಮಗಳನ್ನು ಅಪಹರಣ ಮಾಡಿ, ಅವಳಿಗೆ ವಿಷ ಕುಡಿಸಿದ್ದಾನೆ ಎಂದು ಮನು ಕಶ್ಯಪ್ ತಾಯಿ ಆರೋಪಿಸಿದ್ದಾರೆ.
2022ರ ಡಿಸೆಂಬರ್ನಲ್ಲಿ ದೆಹಲಿಯಿಂದ ಉತ್ತರಾಖಂಡಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟರ್ ರಿಷಭ್ ಪಂತ್ ಅವರ ಮರ್ಸಿಡೀಸ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಅದೇ ಹೆದ್ದಾರಿ ಬದಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಜತ್ ಹಾಗೂ ಸ್ಥಳೀಯ ನಿಶು ಕುಮಾರ್ ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿ, ಸಮಯಪ್ರಜ್ಞೆ ಮೆರೆದು ರಿಷಭ್ರನ್ನು ಪ್ರಾಣಾಪಾಯದಿಂದ ಕಾಪಾಡಿದ್ದರು. ಹೊತ್ತಿ ಉರಿಯುತ್ತಿದ್ದ ಕಾರಿನಿಂದ ರಿಷಭ್ರನ್ನು ಹೊರಗೆಳೆದು, ತುರ್ತು ವೈದ್ಯಕೀಯ ನೆರವಿಗೆ ವ್ಯವಸ್ಥೆ ಮಾಡಿದ್ದರು. ಈ ಇಬ್ಬರು ಯುವಕರ ಕಾರ್ಯಕ್ಕೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ನಂತರದಲ್ಲಿ ರಿಷಭ್ ಪಂತ್ ಅವರೂ ತಮ್ಮ ಪ್ರಾಣ ರಕ್ಷಿಸಿದ್ದಕ್ಕೆ ಗೌರವಾರ್ಥವಾಗಿ ರಜತ್ ಹಾಗೂ ನಿಶುಕುಮಾರ್ಗೆ ಸ್ಕೂಟರ್ಗಳನ್ನು ಉಡುಗೊರೆಯಾಗಿ ನೀಡಿದ್ದರು.