ಬೆಳಗಾವಿ : ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ. ವಿವಾಹಿತಯೊಬ್ಬಳ ಜೊತೆ ಯುವಕನೊಬ್ಬ ಓಡಿ ಹೋದ ಹಿನ್ನೆಲೆ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಯುವಕನ ಮನೆ ಧ್ವಂಸಗೊಳಿಸಿದ ಘಟನೆ ಬೆಳಗಾವಿಯ ಭರಮ್ಯಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕಳೆದ ವರ್ಷ ಬಸಪ್ಪ ನಾಯಕ ಜೊತೆ ನಾಗವ್ವ ವಿವಾಹವಾಗಿದ್ದರು. ಬಸಪ್ಪ ಮತ್ತು ಯಲ್ಲಪ್ಪ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಮೂವರು ಬೆಳಗಾವಿಯ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಯಲ್ಲಪ್ಪ ಹಾಗೂ ನಾಗವ್ವ ನಡುವೆ ಸಲುಗೆ ಬೆಳೆದಿತ್ತು. ಎರಡು ದಿನಗಳ ಹಿಂದೆ ಯಲ್ಲಪ್ಪ, ತನ್ನ ಸ್ನೇಹಿತನ ಪತ್ನಿ ನಾಗವ್ವ ಜೊತೆ ಓಡಿಹೋಗಿದ್ದಾಳೆ.
ಯುವಕನ ಜೊತೆ ನಾಗವ್ವ ಪರಾರಿಯಾಗಿದ್ದರಿಂದ ಆಕ್ರೋಶಗೊಂಡ ಆಕೆಯ ಪೋಷಕರು ಮತ್ತು ಪತಿಯ ಕಡೆಯವರು ಯಲ್ಲಪ್ಪನ ಮನೆಯನ್ನು ಧ್ವಂಸಗೊಳಿಸಿದ್ದಾರೆ. ತಳವಾರ, ಜಂಬೆ, ಕುಡಗೋಲು ಹಾಗೂ ಬಡಿಗೆಗಳ ಸಮೇತ ಸುಮಾರು 200ಕ್ಕೂ ಅಧಿಕ ಜನರ ಗುಂಪು ಭರಮ್ಯಾನಟ್ಟಿ ಗ್ರಾಮದಲ್ಲಿರುವ ಯಲ್ಲಪ್ಪನ ಮನೆಗೆ ನುಗ್ಗಿ, ಅಟ್ಟಹಾಸ ಮೆರೆದಿದ್ದಾರೆ. ಅಲ್ಲದೇ ಮನೆಯಲ್ಲಿದ್ದ ಯಲ್ಲಪ್ಪನ ಕುಟುಂಬಸ್ಥರನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದು, ಆದರೆ ಪೋಷಕರು ಪರಾರಿಯಾಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ದುಷ್ಕರ್ಮಿಗಳ ಗುಂಪು, ಮನೆಯ ಹಂಚುಗಳನ್ನು ಪುಡಿಪುಡಿ ಮಾಡಿ, ಅಲ್ಮಾರಿ, ಟಿವಿ ಸೇರಿದಂತೆ ಮನೆಯಲ್ಲಿದ್ದ ಪ್ರತಿಯೊಂದು ವಸ್ತುವನ್ನೂ ಧ್ವಂಸಗೊಳಿಸಿದೆ. ದಾಳಿಯ ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಕೊಟ್ಟಿಗೆಯಲ್ಲಿದ್ದ 25 ಕುರಿಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಸಂತ್ರಸ್ತ ಕುಟುಂಬವು ತಮಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ದಾಳಿ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಅವರ ಮೊರೆ ಹೋಗಿದೆ.
ಇದನ್ನೂ ಓದಿ : ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಎದುರು ಕಾಮುಕನ ಅಸಭ್ಯ ವರ್ತನೆ – ವಿಡಿಯೋ ಹಂಚಿಕೊಂಡು ನಟಿ ಆಕ್ರೋಶ!


















