ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ಹೊಸ ಪರ್ವಕ್ಕೆ ನಾಂದಿಹಾಡಿ, ಮುಖ್ಯಮಂತ್ರಿ ಗಾದಿಗೆ ಏರಿರುವ ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಜೋಸೆಫ್ ವಿಜಯ್ ವಿರುದ್ಧ ಪ್ರತಿಪಕ್ಷ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದೆ. ವಿಜಯ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಇನ್ನು ನಾಲ್ಕರಿಂದ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಮರಳಲಿದ್ದಾರೆ ಎಂದು ಡಿಎಂಕೆ ಹಿರಿಯ ನಾಯಕ ಹಾಗೂ ತಿರುಚಂದೂರು ಶಾಸಕ ಭವಿಷ್ಯ ನುಡಿದಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಎಂಕೆ ನಾಯಕ ಅನಿತಾ ರಾಧಾಕೃಷ್ಣನ್, ಟಿವಿಕೆ ಸರ್ಕಾರದ ಅಸ್ತಿತ್ವವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಇದೇ ವೇಳೆ ಟಿವಿಕೆ ಪಕ್ಷದ ಹಿರಿಯ ನಾಯಕ ಮತ್ತು ವಿಲ್ಲಿವಾಕ್ಕಂ ಶಾಸಕ ಆದವ್ ಅರ್ಜುನ ಅವರಿಗೆ ಮುಖಾಮುಖಿ ಚುನಾವಣೆಗೆ ಬರುವಂತೆ ಸವಾಲು ಹಾಕಿದ್ದಾರೆ. “ಈ ಸರ್ಕಾರ ಬದುಕುವುದು ಇನ್ನು ಕೇವಲ ನಾಲ್ಕು ತಿಂಗಳು ಮಾತ್ರ. ಆದವ್ ಅರ್ಜುನ ಅವರಿಗೆ ಧೈರ್ಯವಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಾನು ಕೂಡ ನೀಡುತ್ತೇನೆ. ನಮ್ಮಿಬ್ಬರ ನಡುವಿನ ಶಕ್ತಿ ಪ್ರದರ್ಶನ ತಿರುಚಂದೂರಿನಲ್ಲಿ ನಡೆಯಲಿ, ಅದು ನಮ್ಮ ಭದ್ರಕೋಟೆ, ಅಲ್ಲಿ ಯಾರೇ ಬಂದರೂ ನಾವು ಧೂಳೀಪಟ ಮಾಡುತ್ತೇವೆ” ಎಂದು ರಾಧಾಕೃಷ್ಣನ್ ಆಕ್ರೋಶ ಹೊರಹಾಕಿದ್ದಾರೆ. ಕಳೆದ 25 ವರ್ಷಗಳಿಂದ ತಿರುಚಂದೂರು ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತಾ ಬಂದಿರುವ ರಾಧಾಕೃಷ್ಣನ್ ಅವರಿಗೆ ಈ ಕ್ಷೇತ್ರ ಭದ್ರ ರಾಜಕೀಯ ನೆಲೆ ಒದಗಿಸಿದೆ.
ಕಳೆದ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪ್ರಬಲ ನಾಯಕ ಎಂ.ಕೆ. ಸ್ಟಾಲಿನ್ ಅವರು ತಮ್ಮದೇ ಭದ್ರಕೋಟೆಯಾಗಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು (ಮಾಜಿ ಡಿಎಂಕೆ ನಾಯಕ) ವಿರುದ್ಧ ಅನಿರೀಕ್ಷಿತ ಸೋಲು ಕಂಡಿದ್ದರು. ಈ ಸೋಲನ್ನು ಜೀರ್ಣಿಸಿಕೊಳ್ಳಲಾಗದ ರಾಧಾಕೃಷ್ಣನ್, ಸ್ಟಾಲಿನ್ ಅವರು ಕೊಳತ್ತೂರನ್ನು ಸಿಂಗಾಪುರದಂತೆ ಬದಲಾಯಿಸಿದ್ದರು ಎಂದು ಸಮರ್ಥಿಸಿಕೊಂಡರಲ್ಲದೇ, ಅಲ್ಲಿನ ಮತದಾರರನ್ನು “ಯೋಗ್ಯತೆ ಇಲ್ಲದವರು” ಎಂದು ಕರೆಯುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂದಿನ ಬಾರಿ ನಮ್ಮ ‘ತಲೈವರ್’ ಸ್ಟಾಲಿನ್ ಅವರು ತಿರುಚಿಯಿಂದ ಸ್ಪರ್ಧಿಸಲಿದ್ದಾರೆ ಮತ್ತು ಮುಂದಿನ ಆರೇ ತಿಂಗಳಲ್ಲಿ ಅವರೇ ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳಿಗೆ ಮುಖ್ಯಮಂತ್ರಿ ವಿಜಯ್ ಕಚೇರಿಯಾಗಲಿ ಅಥವಾ ಟಿವಿಕೆ ನಾಯಕ ಅರ್ಜುನ ಆಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಹಲವು ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆಯೇ ಹಂಚಿಹೋಗಿದ್ದ ತಮಿಳುನಾಡು ರಾಜಕಾರಣದಲ್ಲಿ ನಟ ವಿಜಯ್ ಅವರ ಗೆಲುವು ಜಾಗತಿಕ ಮಟ್ಟದಲ್ಲಿ ದೊಡ್ಡ ರಾಜಕೀಯ ದಿಕ್ಸೂಚಿಯಾಗಿ ಹೊರಹೊಮ್ಮಿತ್ತು. ಒಟ್ಟು 234 ಸ್ಥಾನಗಳ ಪೈಕಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಸರಳ ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದಾಗ, ಈ ಹಿಂದೆ ಡಿಎಂಕೆ ಜೊತೆಗಿದ್ದ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ ಪಕ್ಷಗಳು ವಿಜಯ್ ಕೈಹಿಡಿದು ಸಮ್ಮಿಶ್ರ ಸರ್ಕಾರ ರಚನೆಗೆ ಬೆಂಬಲ ನೀಡಿದ್ದವು.
ಇದಾದ ನಂತರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಟಿವಿಕೆ ಸರ್ಕಾರವು 144 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಈ ವೇಳೆ ಎಐಎಡಿಎಂಕೆ ಪಕ್ಷದ ಕೆಲವು ಶಾಸಕರು ತಮ್ಮ ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಪರವಾಗಿ ಮತ ಚಲಾಯಿಸಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅಂದಿನಿಂದ ಆಡಳಿತ, ನೇಮಕಾತಿ ಮತ್ತು ಸರ್ಕಾರದ ನಿರ್ಧಾರಗಳ ಮೇಲೆ ಡಿಎಂಕೆ ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದೆ. ಆದರೆ, ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ವಿರೋಧ ಪಕ್ಷಗಳ ‘ಅಸ್ಥಿರ ಸರ್ಕಾರ’ ಎಂಬ ಆರೋಪಗಳನ್ನು ತಳ್ಳಿಹಾಕುತ್ತಾ ಭದ್ರವಾಗಿ ಮುನ್ನಡೆಯುತ್ತಿದೆ.
ಇದನ್ನೂ ಓದಿ : ಕೇವಲ 90 ದಿನದಲ್ಲಿ 3,700 ಷೇರು ವಹಿವಾಟು ನಡೆಸಿದ ಟ್ರಂಪ್ – ವಾಲ್ ಸ್ಟ್ರೀಟ್ ತಲ್ಲಣ!


















