ಬೆಂಗಳೂರು : ಕರಾವಳಿ ಜನರ ಹಲವು ವರ್ಷದ ಕನಸು ಈಡೇರುವ ಕಾಲ ಸನಿಹದಲ್ಲಿದೆ. ಬೆಂಗಳೂರು ಟು ಮಂಗಳೂರು ಹೈ ಸ್ಪೀಡ್ ವಂದೇ ಭಾರತ್ ರೈಲು ಶೀಘ್ರವೇ ಸಂಚಾರ ಶುರು ಮಾಡಲಿದ್ದು,ಕರಾವಳಿ ಸಿಲಿಕಾನ್ ವ್ಯಾಲಿಯ ನಡುವಿನ ಸೂಪರ್ ಫಾಸ್ಟ್ ಪ್ರಯಾಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹಾಸನ-ಮಂಗಳೂರು ರೈಲ್ವೆ ಮಾರ್ಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡು, ಆರಂಭಿಕ ಪರೀಕ್ಷೆ ಈಗಾಗಲೇ ನಡೆದು,ಕೆಲವೇ ತಿಂಗಳುಗಳ ಅಂತರದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಈ ಕುರಿತಂತೆ ಇತ್ತೀಚಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಬೆಂಗಳೂರಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು.

ವಂದೇ ಭಾರತ್ ಸಂಚಾರ ಆರಂಭವಾದರೆ ಕೇವಲ ಐದರಿಂದ ಆರು ತಾಸಿನ ಒಳಗಾಗಿ ಮಂಗಳೂರನ್ನ ತಲುಪಬಹುದು ಎನ್ನಲಾಗಿದೆ. ವಂದೇ ಭಾರತ್ ಪ್ರಯಾಣ ಕೇವಲ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಬಂದರು ನಗರಿ ಹಾಗೂ ರಾಜಧಾನಿ ನಡುವಿನ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಜೊತೆಗೆ ಈ ಎರಡು ಭಾಗದ ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಇನ್ನಷ್ಟು ಪುಷ್ಟಿ ನೀಡಲಿದೆ.
ಕರಾವಳಿಗೆ ಹೋಗುವ ನೂತನ ವಂದೇ ಭಾರತ್ ರೈಲು ಬೆಂಗಳೂರಿನಿಂದ ತುಮಕೂರು, ಹಾಸನ, ಸಕಲೇಶಪುರ ಮಾರ್ಗವಾಗಿ ಮಂಗಳೂರು, ಅಲ್ಲಿಂದ ಮಡಗಾಂವ್ಗೆ ಸಂಚಾರ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರುವ ದಿನ ಹತ್ತಿರದಲ್ಲಿದ್ದು,ಹೈಸ್ಪೀಡ್ ರೈಲು ಸೇವೆಯಿಂದ ಎರಡು ಭಾಗದ ನಗರ ಹಾಗೂ ಅಲ್ಲಿನ ಜನರನ್ನು ಮತ್ತಷ್ಟು ಹತ್ತಿರವಾಗಿಸಲಿದೆ.


















