ಬೆಂಗಳೂರು : ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಘೋಷಿಸಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಂದುವರಿಸಬೇಕೋ ಅಥವಾ ಕೈಬಿಡಬೇಕೋ ಎಂಬ ಬಗ್ಗೆ ಪಕ್ಷದೊಳಗೇ ದ್ವಂದ್ವ ಶುರುವಾಗಿದೆ. ನಾಗೇಂದ್ರ ರಾಜೀನಾಮೆಯೇ ಹೋರಾಟದ ಪ್ರಮುಖ ಬೇಡಿಕೆಯಾಗಿದ್ದರಿಂದ, ಬೇಡಿಕೆ ಈಡೇರಿದ ಬಳಿಕವೂ ಪಾದಯಾತ್ರೆ ನಡೆಸುವ ಅಗತ್ಯವಿದೆಯೇ ಎಂಬ ಪ್ರಶ್ನೆ ಇದೀಗ ಬಿಜೆಪಿ ನಾಯಕರ ಮುಂದಿದೆ.
ಸೆಪ್ಟೆಂಬರ್ 1ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಬಿಜೆಪಿ ಸಿದ್ಧತೆ ನಡೆಸಿತ್ತು. ವಾಲ್ಮೀಕಿ ನಿಗಮದ ಅಕ್ರಮ ಹಾಗೂ ನಾಗೇಂದ್ರ ರಾಜೀನಾಮೆ ಪ್ರಮುಖ ಅಜೆಂಡಾವಾಗಿದ್ದರೂ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಉದ್ದೇಶವೂ ಪಾದಯಾತ್ರೆಯ ಹಿಂದಿದೆ.
ರೈತರ ಸಮಸ್ಯೆ, ನಿರುದ್ಯೋಗ, ಮೀಸಲಾತಿ, ನೇಮಕಾತಿ ಅಕ್ರಮ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಯೋಜನೆ ರೂಪಿಸಿತ್ತು. ಹೀಗಾಗಿ ನಾಗೇಂದ್ರ ರಾಜೀನಾಮೆ ನೀಡಿದರೂ ಹೋರಾಟ ಇನ್ನೂ ಮುಗಿದಿಲ್ಲ ಎಂಬ ಸಂದೇಶದೊಂದಿಗೆ ಪಾದಯಾತ್ರೆ ಮುಂದುವರಿಸಬೇಕು ಎಂಬುದು ವಿಜಯೇಂದ್ರ ಬಣದ ಪಟ್ಟು ಎನ್ನಲಾಗಿದೆ.
ಆದರೆ, ಪಕ್ಷದ ಕೆಲವು ಹಿರಿಯ ನಾಯಕರು ಪಾದಯಾತ್ರೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾಗೇಂದ್ರ ರಾಜೀನಾಮೆ ಪ್ರಮುಖ ಬೇಡಿಕೆಯಾಗಿತ್ತು. ಇದೀಗ ಅವರು ರಾಜೀನಾಮೆ ನೀಡಿದ ಬಳಿಕ ಬಳ್ಳಾರಿ ಪಾದಯಾತ್ರೆ ಏಕೆ? ಎಂಬ ಪ್ರಶ್ನೆಯನ್ನು ಹಿರಿಯ ನಾಯಕ ವಿ. ಸೋಮಣ್ಣ ಎತ್ತಿದ್ದಾರೆ. ಸದ್ಯ ಬಳ್ಳಾರಿ ಪಾದಯಾತ್ರೆಯ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಇದರಿಂದ ಬಿಜೆಪಿ ಒಳಗೇ ‘ಬಳ್ಳಾರಿ ಚಲೋ’ ಮುಂದುವರಿಕೆ ಕುರಿತು ಭಿನ್ನಾಭಿಪ್ರಾಯ ಮೂಡಿದೆ. ಪಾದಯಾತ್ರೆ ಮುಂದುವರಿಸಿದರೆ ಬೇಡಿಕೆ ಈಡೇರಿದ ಬಳಿಕವೂ ಹೋರಾಟ ಯಾಕೆ ಎಂಬ ಪ್ರಶ್ನೆ ಎದುರಾಗಲಿದೆ. ಮತ್ತೊಂದೆಡೆ, ಹೋರಾಟ ಕೈಬಿಟ್ಟರೆ ನಾಗೇಂದ್ರ ರಾಜೀನಾಮೆಯೊಂದಿಗೇ ಬಿಜೆಪಿ ಅಭಿಯಾನ ಅಂತ್ಯವಾಯಿತು ಎಂಬ ಸಂದೇಶ ಹೋಗುವ ಸಾಧ್ಯತೆಯಿದೆ.
ಒಂದು ವಿಕೆಟ್ ಬಿದ್ದಿದೆ, ಆದರೆ ಹೋರಾಟ ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡುವ ಉದ್ದೇಶದಿಂದ ಪಾದಯಾತ್ರೆ ಮುಂದುವರಿಸಲು ಒಂದು ಬಣ ಪಟ್ಟು ಹಿಡಿದಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ರಾಜಕೀಯ ಲೆಕ್ಕಾಚಾರವೂ ಪಾದಯಾತ್ರೆಯ ಹಿಂದಿದೆ. ಮುಂದುವರಿಸಬೇಕಾ..? ಕೈಬಿಡಬೇಕಾ..? ನಾಗೇಂದ್ರ ರಾಜೀನಾಮೆ ಬಳಿಕ ‘ಬಳ್ಳಾರಿ ಚಲೋ’ ಪಾದಯಾತ್ರೆ ಬಿಜೆಪಿ ನಾಯಕರಿಗೆ ಹೊಸ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ : ಸೇತುವೆ ಮೇಲೆ 3 ವರ್ಷದ ಮಗುವನ್ನು ಬಿಟ್ಟು ನದಿಗೆ ಹಾರಿದ ದಂಪತಿ ; ಗೋದಾವರಿಯಲ್ಲಿ ಶೋಧ



















