ಬೆಂಗಳೂರು : ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯಬೇಕಿದ್ದ ಬಹುನಿರೀಕ್ಷಿತ ಕ್ರಿಕೆಟ್ ಸರಣಿ ಮತ್ತೊಮ್ಮೆ ಮುಂದೂಡಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. 6 ಪಂದ್ಯಗಳ ಈ ಸರಣಿಯ ದಿನಾಂಕಗಳ ಕುರಿತು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಮೂಲ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 3ರಂದು ಮೊದಲ ಏಕದಿನ ಪಂದ್ಯ ನಡೆಯಬೇಕಿತ್ತು. ಆದರೆ, ಸರಣಿಯ ಕುರಿತು ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ ದೇಶೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.
ಭಾರತವು ಈ ಪ್ರವಾಸದಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಬೇಕಿದೆ. ಈ ಸರಣಿಯು ವಾಸ್ತವವಾಗಿ ಆಗಸ್ಟ್ 2025ರಲ್ಲಿ ನಡೆಯಬೇಕಿತ್ತು, ಬಳಿಕ ಅದನ್ನು ಸೆಪ್ಟೆಂಬರ್ 2026ಕ್ಕೆ ಮುಂದೂಡಲಾಗಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈವರೆಗೆ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಈ ಕುರಿತು ಮಾತನಾಡಿರುವ ಬಿಸಿಬಿ ಅಧ್ಯಕ್ಷ ತಮೀಮ್ ಇಕ್ಬಾಲ್, ಎರಡೂ ಮಂಡಳಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಸರಣಿಯ ದಿನಾಂಕಗಳಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶೀಯ ಟೂರ್ನಿಗಳ ಆಯೋಜನೆಯಲ್ಲಿ ಹೊಂದಾಣಿಕೆ
ಸರಣಿಯ ಅನಿಶ್ಚಿತತೆಯ ನಡುವೆಯೇ ಬಿಸಿಬಿ 17 ವರ್ಷದೊಳಗಿನವರ, 19 ವರ್ಷದೊಳಗಿನವರ ಹಾಗೂ 23 ವರ್ಷದೊಳಗಿನವರ ಆಟಗಾರರಿಗಾಗಿ ‘ಗೇಮ್ ಡೆವಲಪ್ಮೆಂಟ್ ಟ್ರೋಫಿ’ಯನ್ನು ಪ್ರಕಟಿಸಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 9ರವರೆಗೆ ಮೀರ್ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಟೂರ್ನಿ ನಡೆಯಲಿದ್ದು, ಇದು ಭಾರತದ ಪ್ರವಾಸದ ದಿನಾಂಕಗಳೊಂದಿಗೆ ಘರ್ಷಣೆಯಾಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತಮೀಮ್ ಇಕ್ಬಾಲ್, ಒಂದು ವೇಳೆ ಭಾರತದ ಸರಣಿ ಖಚಿತವಾದರೆ ದೇಶೀಯ ಟೂರ್ನಿಯು ಅಡ್ಡಿಯಾಗುವುದಿಲ್ಲ ಎಂದಿದ್ದಾರೆ. ಮೀರ್ಪುರದಲ್ಲಿ ನಡೆಯಲಿರುವ ಈ ಟೂರ್ನಿಯನ್ನು ಕೇವಲ 2 ನಿಮಿಷಗಳಲ್ಲಿ ಬಸುಂಧರ ಮೈದಾನಕ್ಕೆ ಸ್ಥಳಾಂತರಿಸಬಹುದು, ಭಾರತದ ಸರಣಿ ನಿಗದಿಯಾದರೆ ಅದಕ್ಕೆ ತಕ್ಕಂತೆ ನಾವು ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉಭಯ ಮಂಡಳಿಗಳ ನಡುವಿನ ಸಂಬಂಧ ಸುಧಾರಣೆ
ಈ ಸರಣಿಯು ಈಗಾಗಲೇ ಹಲವು ಅಡೆತಡೆಗಳನ್ನು ಎದುರಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಮುಸ್ತಾಫಿಜುರ್ ರೆಹಮಾನ್ ವಿಚಾರದಲ್ಲಿ ಹಾಗೂ ಬಾಂಗ್ಲಾದೇಶವು ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಳಿಕ ಉಭಯ ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧ ಹಳಸಿತ್ತು. ಆದರೆ, ತಮೀಮ್ ಇಕ್ಬಾಲ್ ಅವರು ಬಿಸಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. ಅವರು ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ, ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (NCA) ಗೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು.
ಬಿಪಿಎಲ್ ಟೂರ್ನಿಗೆ ತಾತ್ಕಾಲಿಕ ಬ್ರೇಕ್
ಇನ್ನೊಂದೆಡೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಭವಿಷ್ಯವೂ ಅನಿಶ್ಚಿತತೆಯಲ್ಲಿದೆ. ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ವರ್ಷ ಬಿಪಿಎಲ್ ಆಯೋಜಿಸದಿರಲು ಮಂಡಳಿ ಚಿಂತನೆ ನಡೆಸಿದೆ ಎಂದು ತಮೀಮ್ ಸುಳಿವು ನೀಡಿದ್ದಾರೆ. ಕಳೆದ 2 ಆವೃತ್ತಿಗಳಿಂದ ಮಂಡಳಿಯು ಸುಮಾರು 40 ಕೋಟಿ ಬಾಂಗ್ಲಾದೇಶಿ ಟಾಕಾ (ಅಂದಾಜು 31 ಕೋಟಿ ರೂಪಾಯಿ) ನಷ್ಟ ಅನುಭವಿಸಿದೆ.
ಈ ಆರ್ಥಿಕ ಮಾದರಿಯನ್ನು ಸರಿಪಡಿಸುವವರೆಗೆ ಮತ್ತೊಂದು ಆವೃತ್ತಿಯನ್ನು ಆತುರದಲ್ಲಿ ಆಯೋಜಿಸಲು ತಮೀಮ್ ಸಿದ್ಧರಿಲ್ಲ. ಆರ್ಥಿಕ ವ್ಯವಸ್ಥೆಯನ್ನು ಸರಿಯಾಗಿ ರೂಪಿಸಲು 6, 12 ಅಥವಾ 24 ತಿಂಗಳುಗಳೇ ಬೇಕಾದರೂ ಆ ಸಮಯವನ್ನು ತೆಗೆದುಕೊಳ್ಳುತ್ತೇನೆ, ಆದರೆ ಈ ಪರಿಸ್ಥಿತಿಯಲ್ಲಿ ಟೂರ್ನಿ ಆಯೋಜಿಸುವುದಿಲ್ಲ ಎಂದು ಅವರು ಕಡ್ಡಿಮುರಿದಂತೆ ಹೇಳಿದ್ದಾರೆ. ಸದ್ಯಕ್ಕೆ ಮಂಡಳಿಯ ಮೊದಲ ಆದ್ಯತೆಯು ಭಾರತದ ಸರಣಿಯಾಗಿದ್ದು, ಉಭಯ ಮಂಡಳಿಗಳ ಮಾತುಕತೆಯ ಬಳಿಕವಷ್ಟೇ ಪ್ರವಾಸದ ಅಂತಿಮ ಚಿತ್ರಣ ಹೊರಬೀಳಲಿದೆ.
ಇದನ್ನೂ ಓದಿ : ATM ಮೂಲಕ ಹಣ ವಿತ್ ಡ್ರಾ ಮಾಡುವ ಮುನ್ನ ಗಮನಿಸಿ : ಈಗ ಹೆಚ್ಚಾಗಿದೆ ವಿತ್ ಡ್ರಾ ಶುಲ್ಕ


















