ಭೋಪಾಲ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನೋಯ್ಡಾ ಮೂಲದ ತ್ವಿಷಾ ಶರ್ಮಾ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಇದೀಗ ಆಕೆಯ ಪತಿ ಸಮರ್ಥ್ ಸಿಂಗ್ ಪೊಲೀಸ್ ವಿಚಾರಣೆ ವೇಳೆ ಹಲವು ಮಹತ್ವದ ವಿಷಯಗಳನ್ನು ಬಾಯಿಬಿಟ್ಟಿದ್ದಾನೆ. ಮೇ 12ರಂದು ಭೋಪಾಲ್ನ ತಮ್ಮ ನಿವಾಸದಲ್ಲಿ ತ್ವಿಷಾ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವ ಕೇವಲ ಕೆಲವೇ ಗಂಟೆಗಳ ಮುನ್ನ, ರಾಜಸ್ಥಾನದ ಅಜ್ಮೀರ್ ಪ್ರವಾಸ ಕೈಗೊಳ್ಳುವ ವಿಚಾರವಾಗಿ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು ಎಂದು ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಏಪ್ರಿಲ್ 17 ರಂದು ತ್ವಿಷಾ ಅವರ ಗರ್ಭಾವಸ್ಥೆ ಖಚಿತವಾದ ಬಳಿಕ ಹಲವು ಬದಲಾವಣೆಗಳು ಶುರುವಾಗಿದ್ದವು ಎಂದು ಪತಿ ಸಮರ್ಥ್ ಹೇಳಿದ್ದಾನೆ. ಆದರೆ, ಹುಟ್ಟಲಿರುವ ಮಗುವಿನ ತಂದೆ ಯಾರು ಎಂದು ಪತಿ ಪ್ರಶ್ನಿಸಿ ಮಾನಸಿಕ ಕಿರುಕುಳ ನೀಡಿದ್ದೇ ಆಕೆಯ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ, ತ್ವಿಷಾ ಮತ್ತು ಆಕೆಯ ತಾಯಿಯ ನಡುವೆ ವಿನಿಮಯವಾಗಿರುವ ಮೊಬೈಲ್ ಸಂದೇಶಗಳು ಅತ್ತೆ ಮನೆಯಲ್ಲಿದ್ದ ಪ್ರತಿಕೂಲ ವಾತಾವರಣವನ್ನು ಬಿಚ್ಚಿಟ್ಟಿವೆ. “ಅಮ್ಮಾ, ಇಲ್ಲಿ ನನಗೆ ಉಸಿರುಗಟ್ಟಿದಂತಾಗುತ್ತಿದೆ, ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ” ಎಂದು ತ್ವಿಷಾ ತನ್ನ ತಾಯಿಗೆ ಪದೇ ಪದೇ ಸಂದೇಶ ಕಳುಹಿಸಿ ವಿನಂತಿಸಿಕೊಂಡಿದ್ದರು.
ಸಾವಿನ ರಾತ್ರಿ ನಡೆದಿದ್ದೇನು?
ತ್ವಿಷಾ ಅವರ ಸಹೋದರ ಹಾಗೂ ಭಾರತೀಯ ಸೇನೆಯ ಮೇಜರ್ ಆಗಿರುವ ಹರ್ಷಿತ್ ಶರ್ಮಾ ಅವರ ಪ್ರಕಾರ, ಸಾವಿನ ದಿನ ರಾತ್ರಿ 10:05ಕ್ಕೆ ತ್ವಿಷಾ ತನ್ನ ತಾಯಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು. ಆದರೆ ಪತಿ ಸಮರ್ಥ್ ಕೋಣೆಗೆ ಪ್ರವೇಶಿಸುತ್ತಿದ್ದಂತೆ ಆಕೆ ದಿಢೀರನೆ ಕರೆಯನ್ನು ಕಡಿತಗೊಳಿಸಿದ್ದರು. ಅದಾದ ನಂತರ ಕುಟುಂಬದವರು ತ್ವಿಷಾ, ಸಮರ್ಥ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ಅವರಿಗೆ ಸತತವಾಗಿ ಕರೆ ಮಾಡಿದರೂ ಯಾರೂ ಸ್ವೀಕರಿಸಲಿಲ್ಲ. ಕೆಲವು ಗಂಟೆಗಳ ನಂತರ ಅತ್ತೆ ಗಿರಿಬಾಲಾ ಅವರೇ ತ್ವಿಷಾ ಸಾವನ್ನಪ್ಪಿರುವ ಸುದ್ದಿಯನ್ನು ಹೆತ್ತವರಿಗೆ ತಿಳಿಸಿದ್ದರು.
ಸದ್ಯ ಏಳು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಪತಿ ಸಮರ್ಥ್ ಸಿಂಗ್ನನ್ನು ಭೋಪಾಲ್ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ ಈತನನ್ನು ಜಬಲ್ಪುರದಲ್ಲಿ ಬಂಧಿಸಲಾಗಿತ್ತು. ಆದರೆ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಸಮರ್ಥ್ ಯಾವುದೇ ಪಶ್ಚಾತ್ತಾಪ ಅಥವಾ ಆತಂಕವಿಲ್ಲದೆ ಅತ್ಯಂತ ಶಾಂತ ಹಾಗೂ ಆತ್ಮವಿಶ್ವಾಸದ ಮುಖಭಾವದೊಂದಿಗೆ ನಿಂತಿದ್ದು ವಿಶೇಷ. ಈ ಮಧ್ಯೆ, ನಿವೃತ್ತ ನ್ಯಾಯಾಧೀಶರಾಗಿರುವ ಆತನ ತಾಯಿ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ಪಡೆದಿದ್ದರೂ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ತೀವ್ರತೆಯನ್ನು ಪರಿಗಣಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಸಮರ್ಥ್ ಸಿಂಗ್ ಅವರ ವಕೀಲ ವೃತ್ತಿಯ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಏಮ್ಸ್ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ
ತ್ವಿಷಾ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ ಮಾಡಿರುವುದರಿಂದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿಯ ಪ್ರಸಿದ್ಧ ಏಮ್ಸ್ (AIIMS) ಆಸ್ಪತ್ರೆಯ ನಾಲ್ವರು ಹಿರಿಯ ವೈದ್ಯರ ತಂಡವು ಇಂದು (ಭಾನುವಾರ) ಭೋಪಾಲ್ನಲ್ಲಿ ತ್ವಿಷಾ ಶರ್ಮಾ ಅವರ ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದೆ. ಆರೋಪಿಗಳಿಗೆ ಆಶ್ರಯ ನೀಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭೋಪಾಲ್ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಎಚ್ಚರಿಸಿದ್ದಾರೆ.



















