ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಅಲ್ಪಮತದ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಕೋಪ ಇನ್ನೂ ತಣ್ಣಗಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಇನ್ಮುಂದೆ ಎಂದಿಗೂ ನಂಬಬಾರದು ಮತ್ತು ಅವರನ್ನು ನಮ್ಮ ಹತ್ತಿರವೂ ಸೇರಿಸಬಾರದು ಎಂದು ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಹಾಗೂ ಪ್ರಭಾವಿ ನಾಯಕ ಉದಯನಿಧಿ ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕನಿಷ್ಠ ಕೃತಜ್ಞತೆಯಾಗಲೀ, ಸೌಜನ್ಯವಾಗಲೀ ಇಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಪಕ್ಷದ ಪ್ರಮುಖ ಸಭೆಯೊಂದರಲ್ಲಿ ಮಾತನಾಡಿದ ಮಾಜಿ ಸಿಎಂ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್, ಡಿಎಂಕೆ ಕಾರ್ಯಕರ್ತರ ಕಠಿಣ ಪರಿಶ್ರಮ ಮತ್ತು ಎಂ.ಕೆ. ಸ್ಟಾಲಿನ್ ಅವರ ನಾಯಕತ್ವದಿಂದಾಗಿ ಕಾಂಗ್ರೆಸ್ ತಮಿಳುನಾಡಿನಲ್ಲಿ 5 ಶಾಸಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಎಂ.ಕೆ. ಸ್ಟಾಲಿನ್ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಜನ ವೋಟ್ ಹಾಕಿದ್ದರು. ಆದರೆ ಇಂದು ಅಧಿಕಾರದ ಆಸೆಗಾಗಿ ಕಾಂಗ್ರೆಸ್ ನಾಯಕರು ನಮಗೆ ಕನಿಷ್ಠ ಮಾಹಿತಿಯನ್ನೂ ನೀಡದೆ ಓಡಿಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ದೇಶಾದ್ಯಂತ ಬಿಜೆಪಿ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದೂ ದೂಷಿಸಿದ್ದಾರೆ. ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ಅನ್ನು ಹೆಗಲ ಮೇಲೆ ಹೊತ್ತು ತಿರುಗಿದ್ದರು. ಆದರೆ ಇಂದು ಕಾಂಗ್ರೆಸ್ ಕೃತಘ್ನನಂತೆ ವರ್ತಿಸಿದೆ ಎಂದು ಕಿಡಿಕಾರಿದರು. ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ‘ಬೆನ್ನಿಗೆ ಚೂರಿ ಇರಿಯುವವರು’ ಮತ್ತು ಮೈತ್ರಿ ಪಕ್ಷಗಳ ರಕ್ತ ಹೀರುವವರು ಎಂದು ಜರೆಯುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ವಿಜಯ್ ಸರ್ಕಾರ ಐದು ವರ್ಷ ಪೂರೈಸಲ್ಲ: ಸ್ಟಾಲಿನ್ ಭವಿಷ್ಯ
ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಾತನಾಡಿ, ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಯಾವುದೇ ಕಾರಣಕ್ಕೂ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರೈಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಸರ್ಕಾರಕ್ಕೆ 120 ಶಾಸಕರ (13 ಮತ್ತು 107) ಬೆಂಬಲವಿದೆ. ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಅವರು ಎಐಎಡಿಎಂಕೆ ಪಕ್ಷವನ್ನು ಒಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇಂದಿಗೂ ಅವರ ಪರಿಸ್ಥಿತಿ ಗೋಡೆ ಮೇಲಿನ ದೀಪವಿಟ್ಟಂತಿದೆ. ಈ ಸರ್ಕಾರ ಯಾವುದೇ ದಿನ, ಯಾವುದೇ ಕ್ಷಣದಲ್ಲಾದರೂ ಪತನಗೊಳ್ಳಬಹುದು ಎಂದು ಹೇಳಿದರು. ಇದೇ ವೇಳೆ ಆರಂಭದಲ್ಲಿ ಹೊರಗಿನಿಂದ ಬೆಂಬಲ ನೀಡುವುದಾಗಿ ಹೇಳಿ, ಈಗ ಸಚಿವ ಸಂಪುಟ ಸೇರಿರುವ ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ನಿಲುವನ್ನೂ ಸ್ಟಾಲಿನ್ ತೀವ್ರವಾಗಿ ಟೀಕಿಸಿದರು.
ಹೊಸ ಆಟಿಕೆಗೆ ಹೋಲಿಕೆ
ವಿಜಯ್ ಅವರ ಆಡಳಿತವನ್ನು ತೀಕ್ಷ್ಣವಾಗಿ ಲೇವಡಿ ಮಾಡಿದ ಎಂ.ಕೆ. ಸ್ಟಾಲಿನ್, ಸಾರ್ವಜನಿಕರು ಹೊಸ ಸರ್ಕಾರದ ಬಗ್ಗೆ ತೋರಿಸುತ್ತಿರುವ ಉತ್ಸಾಹವನ್ನು ಮಕ್ಕಳು ಹೊಸ ಆಟಿಕೆಯನ್ನು ಕಂಡು ಸಂಭ್ರಮಿಸುವುದಕ್ಕೆ ಹೋಲಿಸಿದರು. ಮಕ್ಕಳಿಗೆ ಹೊಸ ಆಟಿಕೆ ಸಿಕ್ಕಾಗ ಕೆಲವು ದಿನಗಳ ಕಾಲ ಭಾರೀ ಖುಷಿ ಇರುತ್ತದೆ, ನಂತರ ಅದರಿಂದ ಬೇಸರಗೊಳ್ಳುತ್ತಾರೆ. ಅದೇ ರೀತಿ ತಮಿಳುನಾಡಿನ ಜನರಿಗೂ ಈ ನಟನ ಆಡಳಿತದಿಂದ ಕೆಲವೇ ದಿನಗಳಲ್ಲಿ ಬೇಸರವಾಗಲಿದೆ. ತದನಂತರ ಮಕ್ಕಳು ಮತ್ತೆ ತಾಯಿಯ ಮಡಿಲಿಗೆ ಹಂಬಲಿಸುವಂತೆ, ರಾಜ್ಯದ ಜನತೆ ನಮ್ಮ ಆಡಳಿತವನ್ನು ಬಯಸಿ ಬರಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.



















