ಬೆಂಗಳೂರು : ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ತುಳುವೆರೆ ಚಾವಡಿ (ರಿ) ಬೆಂಗಳೂರು’ ಆಯೋಜಿಸಿದ್ದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕರಾವಳಿಯ ಸಂಸ್ಕೃತಿ, ಪರಂಪರೆ ಹಾಗೂ ಪದ್ಧತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 30ಕ್ಕೂ ಹೆಚ್ಚು ತುಳು ಭಾಷಿಗರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಮಾತನಾಡಿ, ಕರಾವಳಿಯ ಸಂಸ್ಕೃತಿ, ಪರಂಪರೆ ಮತ್ತು ಪದ್ಧತಿಯ ಭಾಗವಾಗಿರುವ ಕಂಬಳ ತುಳುನಾಡಿನ ಸೀಮೆಯನ್ನು ದಾಟಿ ಹೋಗಬಾರದು ಎಂದು ಆಶಯ ವ್ಯಕ್ತಪಡಿಸಿದರು.
ಕಂಬಳ ಎಂದರೆ ಕೇವಲ ಕೋಣಗಳ ಓಟವಲ್ಲ. ತುಳುನಾಡಿನ ಇತಿಹಾಸ, ಪರಂಪರೆ ಹಾಗೂ ದೈವಾರಾಧನೆಯ ಹಿನ್ನೆಲೆಯಿಂದ ಕಂಬಳ ಪಾವಿತ್ರ್ಯತೆ ಪಡೆದುಕೊಂಡಿದೆ. ಹಾಗಾಗಿ ಕಂಬಳ ಪ್ರತಿಷ್ಠೆಯ ಅಖಾಡವಾಗಬಾರದು. ಕರಾವಳಿಯ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿರುವ ಕಂಬಳವನ್ನು ಅದರ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳಬೇಕು. ದುಡ್ಡು ಮತ್ತು ಅಂತಸ್ತು ನೋಡಿಕೊಂಡು ನಾಗಾರಾಧನೆ ಮಾಡಬಾರದು. ಜನರಿಗೆ ಇರುವ ತೊಂದರೆಗಳನ್ನು ನೋಡಿಕೊಂಡು ನಾಗಾರಾಧನೆ ಮಾಡಬೇಕು. ನಾಗಾರಾಧನೆ ಮೂಢನಂಬಿಕೆ ಅಥವಾ ಆಡಂಬರದ ಆಚರಣೆಯಾಗಬಾರದು ಎಂದು ಹೇಳಿದರು.

ರಾಜಕಾರಣಿಗಳು ಹಾಗೂ ಗಣ್ಯರನ್ನು ಕರೆಸುವಾಗ ಯಕ್ಷಗಾನ ಕಲಾವಿದರನ್ನು ಬಳಸಬಾರದು. ಗಂಡುಕಲೆಯಾದ ಯಕ್ಷಗಾನದ ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಭಜನೆ ತುಳುನಾಡಿನ ಸಂಸ್ಕೃತಿಯಾಗಿ ಬೆಳೆಯುತ್ತಿದೆ. ಪ್ರತಿ ಹಳ್ಳಿಯಲ್ಲೂ ಕುಣಿತ ಭಜನೆಯ ಮೂಲಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಹಾಗೆಯೇ ಕನ್ನಡ ಭಾಷೆಯಷ್ಟೇ ತುಳು ಭಾಷೆಯೂ ಪ್ರಾಚೀನವಾದದ್ದು. ಮಲಯಾಳಂ ಭಾಷೆಯ ಹುಟ್ಟಿಗೂ ತುಳು ಭಾಷೆ ಕಾರಣವಾಗಿದೆ. ತುಳುನಾಡಿನ ಇತಿಹಾಸವೇ ಶ್ರೀಮಂತವಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕು. ಯುವ ಜನತೆ ತಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಇದೇ ವೇಳೆ ಅಂತರ್ಜಾತಿ ವಿವಾಹದ ಕುರಿತು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಅವರು, ಜಾತಿ ಇರಬೇಕು. ಪ್ರತಿಯೊಂದು ಜಾತಿಯಲ್ಲೂ ಒಂದೊಂದು ರೀತಿಯ ಪದ್ಧತಿಗಳಿರುತ್ತವೆ. ಅವುಗಳನ್ನು ನಾವು ಉಳಿಸಿಕೊಳ್ಳಬೇಕು ಎಂದರು. ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅನೇಕ ಕಡೆಗಳಲ್ಲಿ ಮಕ್ಕಳನ್ನು ಪಡೆಯಲು ಐವಿಎಫ್ ಕೇಂದ್ರಗಳು ತಲೆ ಎತ್ತುತ್ತಿವೆ. ಕೆಲವೇ ದಶಕಗಳ ಹಿಂದೆ ಮಕ್ಕಳ ಸಂಖ್ಯೆ ಸಾಕು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಒಂದು ಮಗುವಿನ ಜನನಕ್ಕಾಗಿ ಐವಿಎಫ್ ಮೂಲಕ ವೈದ್ಯರು ಹಾಗೂ ದಂಪತಿಗಳು ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಹೇಳಿದರು.
ಇನ್ನು ದೈವಾರಾಧನೆ ಕರಾವಳಿಗೆ ಸೀಮಿತವಾಗಿರಬೇಕು. ಅದು ಘಟ್ಟ ಹತ್ತಿ ಮೇಲೆ ಹೋಗುವುದು ಸರಿಯಲ್ಲ. ದೈವಾರಾಧನೆ ತನ್ನತನವನ್ನು ಕಳೆದುಕೊಳ್ಳುತ್ತಿದೆ. ಆಧುನಿಕತೆಯ ಸೋಗಿನಲ್ಲಿ ಸಂಪ್ರದಾಯ, ಪದ್ಧತಿ ಹಾಗೂ ನಿಯಮಗಳು ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ, ತುಳು ಭಾಷಿಗರ ಮನೆಗಳಲ್ಲಿ ಮೊದಲು ತುಳು ಭಾಷೆ ಅಧಿಕೃತ ಭಾಷೆಯಾಗಬೇಕು. ತುಳು ಭಾಷೆಯನ್ನು ಪಠ್ಯದಲ್ಲಿ ಹೆಚ್ಚುವರಿ ಭಾಷೆಯಾಗಿ ಸೇರಿಸಿದರೆ ಕನ್ನಡ ಭಾಷೆಗೆ ಯಾವುದೇ ತೊಂದರೆಯಾಗುವುದಿಲ್ಲ. ಪಕ್ಕದ ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಹೆಚ್ಚುವರಿ ಭಾಷೆಯನ್ನಾಗಿ ಮಾಡಿದರೂ ತೆಲುಗು ಭಾಷೆಗೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ತುಳು ಭಾಷೆಯೂ ಹೆಚ್ಚುವರಿ ಭಾಷೆಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಕರ್ನಾಟಕ ಕುಸ್ತಿ ಅಕಾಡೆಮಿ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅವರು ತುಳುನಾಡಿನ ಜಾನಪದ ಪದಗಳ ‘ಸಂಪೊಳಿಗೆ’ ಪುಸ್ತಕ ಹಾಗೂ ‘ಮೋಕ್ಷ’ ತುಳು ಭಜನೆ ವಿಡಿಯೋವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಪ್ರತಿವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಷ್ಠಿತ ದಿ. ಡಿ.ಕೆ. ಚೌಟ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ಸಾಧಕ ಕಡಮಜಲು ಶುಭಾಷ್ ರೈ ಅವರಿಗೆ ಹಾಗೂ ದಿ. ವಿಜಯ್ ಕುಮಾರ್ ಕುಲಶೇಕರ ನೆನಪಿನ ಪ್ರಶಸ್ತಿಯನ್ನು ತುಳು ಭಾಷೆಯ ಸೇವೆಗೆ ಶ್ರಮಿಸಿದ ಜಿ.ವಿ.ಎಸ್. ಉಳ್ಳಾಲ್ ಅವರಿಗೆ ನೀಡಿ ಗೌರವಿಸಲಾಯಿತು.
ತುಳುನಾಡು ಸಿರಿ ಪ್ರಶಸ್ತಿಯನ್ನು ಸಮಾಜ ಸೇವಕ ಕೋಡಿಬೆಟ್ಟು ಅರುಣ್ ಶೆಟ್ಟಿ ಹಾಗೂ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಜಯಲಕ್ಷ್ಮಿ ಕಟೀಲ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಚಿತ್ರಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಗಣೇಶ್ ಪಂಜಿಮಾರ್ ಹಾಗೂ ಕುಸುಮಾ ಪಂಜಿಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಬೆಂಗಳೂರಿನ ತುಳುವೆರೆ ಚಾವಡಿಯ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಅಧ್ಯಕ್ಷ ಮುಂಡಾಲುಗುತ್ತು ವಿಶು ಕುಮಾರ್ ರೈ ಹಾಗೂ ಪ್ರಧಾನ ಕಾರ್ಯದರ್ಶಿ ರಘುವೀರ್ ನಾಯ್ಕ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 30ಕ್ಕೂ ಹೆಚ್ಚು ತುಳು ಭಾಷಿಗರ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಕರಾವಳಿಯ ಸಂಸ್ಕೃತಿ, ಪರಂಪರೆ ಹಾಗೂ ಜಾನಪದ ಬದುಕನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ನೋಡುಗರ ಕಣ್ಮನ ಸೆಳೆದವು.
ಇದನ್ನೂ ಓದಿ : ಸಿ.ಟಿ ರವಿ ಮನೆ ಮುಂದೆ ಹೈಡ್ರಾಮಾ – ಇನ್ಸ್ಪೆಕ್ಟರ್ ಅಂಟಿಸಿದ ನೋಟಿಸ್ ಕಿತ್ತೆಸೆದ ಕಾರ್ಯಕರ್ತರು



















