ಅಮೃತಸರ : ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ವಶದಲ್ಲಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧನ ಮರಣೋತ್ತರ ಪರೀಕ್ಷಾ ವರದಿ ಇದೀಗ ಬಹಿರಂಗವಾಗಿದ್ದು, ಮೃತದೇಹದ ಮೇಲೆ ಬರೋಬ್ಬರಿ 34 ಗಾಯದ ಗುರುತುಗಳು ಪತ್ತೆಯಾಗಿವೆ. ಈ ಆಘಾತಕಾರಿ ವರದಿಯು ಕಸ್ಟಡಿಯಲ್ಲಿ ಯೋಧನಿಗೆ ನೀಡಲಾದ ಭೀಕರ ಚಿತ್ರಹಿಂಸೆಯ ಕರಾಳತೆಯನ್ನು ಬಿಚ್ಚಿಟ್ಟಿದ್ದು, ಸಾವಿನ ಸುತ್ತಲಿನ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದೆ.
ಜಮ್ಮು ಮೂಲದ 35 ವರ್ಷದ ಬಿಎಸ್ಎಫ್ ಯೋಧ ಜಸ್ವಿಂದರ್ ಸಿಂಗ್ ಅವರನ್ನು ಎನ್ಸಿಬಿ ತಂಡವು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗಾಗಿ ಪಂಜಾಬ್ನ ಅಮೃತಸರಕ್ಕೆ ಕರೆತಂದಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಈ ವಿಚಾರಣೆಯ ವೇಳೆ ಜಸ್ವಿಂದರ್ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದರು. ಆ ಸಂದರ್ಭದಲ್ಲಿಯೇ ನಾರ್ಕೋಟಿಕ್ಸ್ ತಂಡ ಯೋಧನ ಮೇಲೆ ತೀವ್ರ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದ ಕುಟುಂಬಸ್ಥರು, ಶವಾಗಾರದ ಮುಂದೆ ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ
ಅಮೃತಸರದ ಜಿಲ್ಲಾ ಸಿವಿಲ್ ಆಸ್ಪತ್ರೆಯ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಂತ್ರಸ್ತ ಯೋಧನ ಕುಟುಂಬ ಹಾಗೂ ಪಂಜಾಬ್ ಮಾನವ ಹಕ್ಕುಗಳ ಸಂಸ್ಥೆಯ (ಪಿಎಚ್ಆರ್ಒ) ಮುಖ್ಯ ತನಿಖಾಧಿಕಾರಿ ಸರಬ್ಜಿತ್ ಸಿಂಗ್ ವೆರ್ಕಾ ಅವರು ಇದೀಗ ಹಂಚಿಕೊಂಡಿದ್ದಾರೆ. ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಯೋಧನ ಸಾವಿಗೂ ಎರಡು ಅಥವಾ ನಾಲ್ಕು ದಿನಗಳ ಮೊದಲು ದೇಹದ ಮೇಲೆ 25 ಗಾಯಗಳನ್ನು ಮಾಡಲಾಗಿದೆ. ಸಾವಿಗೂ 18 ರಿಂದ 24 ಗಂಟೆಗಳ ಮೊದಲು ಮತ್ತೆ 9 ಗಾಯಗಳನ್ನು ಮಾಡಲಾಗಿದೆ. ವಿಶೇಷವೆಂದರೆ, ಗಾಯಗಳಾದ ಈ ನಿರ್ದಿಷ್ಟ ಸಮಯವು ಯೋಧ ಎನ್ಸಿಬಿ ಕಸ್ಟಡಿಯಲ್ಲಿದ್ದ ಅವಧಿಗೆ ನಿಖರವಾಗಿ ತಾಳೆಯಾಗುತ್ತಿದೆ. ಇದು ವ್ಯವಸ್ಥಿತ ಕಸ್ಟೋಡಿಯಲ್ ಟಾರ್ಚರ್ (ಪೊಲೀಸ್ ವಶದಲ್ಲಿರುವಾಗ ನೀಡಿದ ಚಿತ್ರಹಿಂಸೆ) ಎಂಬ ಆರೋಪಕ್ಕೆ ಪ್ರಬಲ ಪುಷ್ಟಿ ನೀಡಿದೆ.
ಕ್ರೂರವಾಗಿ ವರ್ತಿಸಿದ ಅಧಿಕಾರಿಗಳು: ಕುಟುಂಬದ ಆರೋಪ
ಮರಣೋತ್ತರ ಪರೀಕ್ಷೆಯ ವರದಿ ಬರುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯೋಧನ ಪತ್ನಿ ಲವ್ಜೀತ್ ಕೌರ್, ಎನ್ಸಿಬಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನನ್ನ ಪತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬುದನ್ನು ಈ ವೈದ್ಯಕೀಯ ವರದಿ ಸಾಬೀತುಪಡಿಸಿದೆ. ದೇಹದ ಮೇಲಿರುವ 34 ಗಾಯಗಳು ಸಣ್ಣ ವಿಷಯವಲ್ಲ. ಕಸ್ಟಡಿಯಲ್ಲಿದ್ದಾಗ ಎನ್ಸಿಬಿ ಸಿಬ್ಬಂದಿ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದಾರೆ” ಎಂದು ಅವರು ಕಣ್ಣೀರು ಹಾಕಿದ್ದಾರೆ.
ಘಟನೆ ಕುರಿತು ಯೋಧನ ತಾಯಿ ಗುರ್ಮೀತ್ ಕೌರ್ ಅವರೂ ಪ್ರತಿಕ್ರಿಯಿಸಿದ್ದು, “ನನ್ನ ಮಗ ಜಸ್ವಿಂದರ್ ಸಿಂಗ್ ಬಿಎಸ್ಎಫ್ನಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ. ರಜೆಯ ಮೇಲೆ ಮನೆಗೆ ಬಂದಿದ್ದ ಆತ 3 ಅಥವಾ 4ನೇ ತಾರೀಖಿನಂದು ಕರ್ತವ್ಯಕ್ಕೆ ವಾಪಸ್ ಆಗಬೇಕಿತ್ತು. ಆದರೆ 3ರಂದೇ ಜಮ್ಮುವಿನ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಆತನನ್ನು ಕರೆದೊಯ್ದರು. ನಂತರ ಮಾರ್ಚ್ 20ರ ರಾತ್ರಿ ನಮಗೆ ಕರೆ ಮಾಡಿ ನಿಮ್ಮ ಮಗ ಮೃತಪಟ್ಟಿದ್ದಾನೆ, ಬಂದು ಮೃತದೇಹ ತೆಗೆದುಕೊಂಡು ಹೋಗಿ ಎಂದು ತಿಳಿಸಿದರು” ಎಂದು ಘಟನೆಯ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸೇರಿದ ರಾಘವ್ ಚಡ್ಡಾಗೆ ‘ಜೆನ್-ಜಿ’ ಶಾಕ್ : 24 ಗಂಟೆಯಲ್ಲಿ 10 ಲಕ್ಷ ಫಾಲೋವರ್ಸ್ ಕಳೆದುಕೊಂಡ ಯುವ ನಾಯಕ!



















