ನವದೆಹಲಿ: ಭಾರತೀಯ ವಾಯುಪಡೆಯ ಹೆಮ್ಮೆಯ ಸುಖೋಯ್ ಎಸ್ಯು-30 ಎಂಕೆಐ (Su-30 MKI) ಯುದ್ಧ ವಿಮಾನವೊಂದು ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗ್ಕರ್ ಅವರು ಮೃತಪಟ್ಟಿದ್ದಾರೆ. ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿದ್ದ ಈ ವಿಮಾನವು ಗುರುವಾರ ಅಸ್ಸಾಂ ಜೋರ್ಹತ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು. ತಕ್ಷಣವೇ ವಿಮಾನಕ್ಕಾಗಿ ಶೋಧ ಕಾರ್ಯ ಆರಂಭವಾಗಿತ್ತು.

ವರದಿಗಳ ಪ್ರಕಾರ, ಗುರುವಾರ ರಾತ್ರಿ ಸುಮಾರು 7:42 ರ ಸುಮಾರಿಗೆ ಈ ಯುದ್ಧ ವಿಮಾನವು ರಾಡಾರ್ ಸಂಪರ್ಕದಿಂದ ಕಡಿತಗೊಂಡಿತ್ತು. ಜೋರ್ಹತ್ ವಾಯುನೆಲೆಯಿಂದ ಸುಮಾರು 60 ಕಿ.ಮೀ ದೂರದ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯ ನಿವಾಸಿಗಳು, ಗುಡ್ಡದ ಭಾಗದಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಸಿತು ಮತ್ತು ಆಕಾಶದಲ್ಲಿ ಬೆಂಕಿಯ ಉಂಡೆ ಕಾಣಿಸಿಕೊಂಡಿತು ಎಂದು ತಿಳಿಸಿದ್ದಾರೆ. ತೀವ್ರ ಶೋಧದ ಬಳಿಕ ಪೈಲಟ್ಗಳ ಮೃತದೇಹ ಮತ್ತು ವಿಮಾನದ ಅವಶೇಷಗಳು ಪತ್ತೆಯಾಗಿವೆ.
ಈ ಘಟನೆಯ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ವಾಯುಪಡೆ, “ದೇಶಕ್ಕಾಗಿ ಸೇವೆ ಸಲ್ಲಿಸಿದ ಪೈಲಟ್ಗಳ ಕುಟುಂಬದೊಂದಿಗೆ ನಾವು ಈ ದುಃಖದ ಸಮಯದಲ್ಲಿ ದೃಢವಾಗಿ ನಿಲ್ಲುತ್ತೇವೆ” ಎಂದು ಹೇಳಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಕ್ರಿಯಿಸಿ, “ನಮ್ಮ ಇಬ್ಬರು ಕೆಚ್ಚೆದೆಯ ಪೈಲಟ್ಗಳ ನಿಧನದಿಂದ ತೀವ್ರ ಆಘಾತವಾಗಿದೆ. ಅವರ ಶೌರ್ಯ ಮತ್ತು ರಾಷ್ಟ್ರಸೇವೆಯನ್ನು ಭಾರತವು ಸದಾ ಸ್ಮರಿಸುತ್ತದೆ” ಎಂದು ಕಂಬನಿ ಮಿಡಿದಿದ್ದಾರೆ.
ಸುಖೋಯ್ ಎಸ್ಯು-30 ಎಂಕೆಐ
ರಷ್ಯಾದ ಸುಖೋಯ್ ಸಂಸ್ಥೆ ವಿನ್ಯಾಸಗೊಳಿಸಿರುವ ಎರಡು ಆಸನಗಳ ಯುದ್ಧ ವಿಮಾನವನ್ನು ಪ್ರಸ್ತುತ ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯು ಪರವಾನಗಿ ಪಡೆದು ತಯಾರಿಸುತ್ತಿದೆ. 1997 ರಿಂದಲೂ ವಾಯುಪಡೆಯ ಅವಿಭಾಜ್ಯ ಅಂಗವಾಗಿರುವ ಈ ವಿಮಾನಗಳು ಭಾರತದ ಗಗನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಸುಖೋಯ್ ವಿಮಾನಗಳು ಪತನಕ್ಕೀಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, 2023 ಮತ್ತು 2024 ರಲ್ಲೂ ಇಂತಹ ಘಟನೆಗಳು ನಡೆದಿದ್ದವು.
ಇದನ್ನೂ ಓದಿ: Karnataka Budget 2026 | ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರಕ್ಕೆ ಕೊಟ್ಟಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ



















