ನವದೆಹಲಿ : ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಮೇಲೆ ನಡೆದ ಪೊಲೀಸ್ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗದ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಜನತೆಯ ಪರವಾಗಿ ಬಾಲಿವುಡ್ ಹಾಗೂ ಪಂಜಾಬಿ ಚಿತ್ರರಂಗದ ಪ್ರಮುಖ ನಟ-ನಟಿಯರು, ಗಾಯಕರು ಬಹಿರಂಗ ಬೆಂಬಲಕ್ಕೆ ನಿಂತಿದ್ದಾರೆ. ಶಾಂತಿಯುತವಾಗಿ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ವಿದ್ಯಾರ್ಥಿಗಳ ದನಿಯನ್ನು ಸರ್ಕಾರ ಆಲಿಸಬೇಕು ಮತ್ತು ಅವರೊಂದಿಗೆ ಸೌಹಾರ್ದಯುತ ಸಂವಾದ ನಡೆಸಬೇಕು ಎಂದು ತಾರೆಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
‘ವಿದ್ಯಾರ್ಥಿಗಳನ್ನು ಹೀಗೆ ನಡೆಸಿಕೊಳ್ಳಬಾರದು’: ದಿಲ್ಜಿತ್ ದೋಸಾಂಜ್
ದೆಹಲಿಯ ರಸ್ತೆಗಳಲ್ಲಿ ನಡೆದ ಹಿಂಸಾತ್ಮಕ ಸಂಘರ್ಷ ಹಾಗೂ ಪೋಲಿಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿರುವ ಪ್ರಸಿದ್ಧ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್, “ದೆಹಲಿಯಲ್ಲಿ ನಡೆದ ಘಟನೆ ನಿಜಕ್ಕೂ ಅತ್ಯಂತ ಬೇಸರ ತಂದಿದೆ. ವಿದ್ಯಾರ್ಥಿಗಳನ್ನು ಈ ರೀತಿ ಕ್ರೂರವಾಗಿ ನಡೆಸಿಕೊಳ್ಳುವುದು ಸರಿಯಲ್ಲ,” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ‘ಜನರ ದನಿಯೇ ದೇವರ ದನಿ’ ಎಂಬುದನ್ನು ನೆನಪಿಸಿದ ಅವರು, ಆಡಳಿತಾರೂಢ ಸರ್ಕಾರ ತಕ್ಷಣವೇ ವಿದ್ಯಾರ್ಥಿಗಳ ಅಳಲನ್ನು ಆಲಿಸಬೇಕು ಎಂದಿದ್ದಾರೆ. ಈ ಹಿಂದೆ ರೈತರ ಹೋರಾಟದ ವೇಳೆ ದನಿ ಎತ್ತಿದ್ದಕ್ಕೆ ತಮ್ಮನ್ನು ‘ದೇಶದ್ರೋಹಿ’ ಎಂದು ಕರೆದಿದ್ದನ್ನು ಸ್ಮರಿಸಿದ ಅವರು, ಈಗ ಮತ್ತೆ ಬೆಂಬಲ ನೀಡಿದ್ದಕ್ಕೆ ತಮಗೆ ಅಂತಹ ಮುದ್ರೆ ಒತ್ತಿದರೂ ಚಿಂತೆಯಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
‘ಪ್ರಜಾಪ್ರಭುತ್ವದ ಜೀವಾಳ ಈ ಯುವಪಡೆ’
ಖ್ಯಾತ ತಾರಾ ದಂಪತಿ ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜಾ ಕೂಡ ಪ್ರತಿಭಟನಾಕಾರರಿಗೆ ತಮ್ಮ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. “ನಾವು ದೇಶದ ಯುವಜನತೆಯ ಪರವಾಗಿ ನಿಲ್ಲುತ್ತೇವೆ. ಅವರ ದನಿಯು ಯಾವುದೇ ಭಯವಿಲ್ಲದೆ, ಸ್ಪಷ್ಟವಾಗಿ ಕೇಳಿಸುವಂತಾಗಬೇಕು. ಯುವಕರೇ ನಮ್ಮ ಪ್ರಜಾಪ್ರಭುತ್ವದ ಜೀವಾಳ ಮತ್ತು ನಾಳಿನ ಭಾರತದ ನಿರ್ಮಾರ್ತೃಗಳು,” ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಿರಿಯ ನಟಿ ಶಬಾನಾ ಅಜ್ಮಿ ಮತ್ತು ನಟ-ನಿರ್ದೇಶಕ ಪ್ರಕಾಶ್ ರಾಜ್ ಅವರು ದೆಹಲಿಯ ಜಂತರ್ ಮಂತರ್ನಲ್ಲಿ ನೇರವಾಗಿಯೇ ಪ್ರತಿಭಟನೆಯಲ್ಲಿ ಭಾಗವಹಿಸಿ, ಸಂವಿಧಾನಾತ್ಮಕವಾಗಿ ಶಾಂತಿಯುತ ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಬೆಂಬಲಕ್ಕೆ ನಿಂತ ಬಾಲಿವುಡ್ ದಂಡು
ಪ್ರತಿಭಟನಾ ನಿರತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಟಿ ಹುಮಾ ಖುರೇಷಿ, ಭೂಮಿ ಪಡ್ನೇಕರ್, ನಂದಿತಾ ದಾಸ್, ಸೋನಾಕ್ಷಿ ಸಿನ್ಹಾ, ಸುತಾಪಾ ಸಿಕ್ದರ್ ಹಾಗೂ ಹಿರಿಯ ನಟ ನಾಸಿರುದ್ದೀನ್ ಶಾ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ದನಿ ಎತ್ತಿದ್ದಾರೆ. “ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಯುವಕರ ಮೇಲೆ ಲಾಠಿ ಪ್ರಹಾರ ನಡೆಸಿದ ದೃಶ್ಯಗಳು ಮನಸ್ಸಿಗೆ ತೀವ್ರ ಆಘಾತ ತಂದಿವೆ” ಎಂದು ಹುಮಾ ಖುರೇಷಿ ಕಳವಳ ವ್ಯಕ್ತಪಡಿಸಿದರೆ, “ರಚನಾತ್ಮಕ ವಿರೋಧ ಮತ್ತು ಭಿನ್ನಾಭಿಪ್ರಾಯವೇ ಜೀವಂತ ಪ್ರಜಾಪ್ರಭುತ್ವದ ಸಂಕೇತ” ಎಂದು ನಂದಿತಾ ದಾಸ್ ಅಭಿಪ್ರಾಯಪಟ್ಟಿದ್ದಾರೆ. ಬಡತನ, ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಸಾಲು ಸಾಲು ಸಮಸ್ಯೆಗಳಿಂದ ಕಂಗಾಲಾಗಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡದೆ, ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಮಸ್ತ ಚಿತ್ರರಂಗ ಮನವಿ ಮಾಡಿದೆ.
ಇದನ್ನೂ ಓದಿ : ಮತ್ತೆ ಜಂತರ್ಮಂತರ್ಗೆ ಸಿಜೆಪಿ ಲಗ್ಗೆ : ಪೋಲಿಸ್ ಹೈಅಲರ್ಟ್ ನಡುವೆಯೂ ಮುಂದುವರಿದ ಪ್ರತಿಭಟನೆ!



















