ಮೈಸೂರು : ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಿಎಂ ಸಿದ್ದರಾಮಯ್ಯ ಅವರ ತವರಲ್ಲಿ ವಿನೂತನವಾಗಿ ಆಚರಿಸಲಾಗಿದ್ದು, ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಾಲಯದ ಮುಂಭಾಗ 8,125 ಚದರಡಿ ಜಾಗದಲ್ಲಿ ಡಿಕೆಶಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಲಾಗಿದೆ.
60 ಅಡಿ ಅಗಲ, 135 ಅಡಿ ಉದ್ದವಿರುವ ಈ ಚಿತ್ರವನ್ನು 4 ಸಾವಿರ ಕೆ.ಜಿ. ರಂಗೋಲಿ ಬಳಸಿ ಕಲಾವಿದ ಪುನೀತ್ ಬಿಡಿಸಿದ್ದಾರೆ. ಕನ್ನಡ ಭಾವುಟದ ಒಳಭಾಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾವಚಿತ್ರ ಮೂಡಿಬಂದಿರೋದು ನೋಡುಗರ ಗಮನ ಸೆಳೆದಿದೆ.
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು 64ನೇ ವಸಂತಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಸದಾಶಿವನಗರದ ಬೆಳಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.
ಇದೇ ವೇಳೆ ವಿವಿಧ ಮಠಗಳ ಶ್ರೀಗಳು ಹಾಗೂ ಪುರೋಹಿತರು ಡಿಸಿಎಂ ನಿವಾಸಕ್ಕೆ ಭೇಟಿ ನೀಡಿ, ಮನ್ಯುಸೂಕ್ತ ಮಂತ್ರಗಳ ಪಠಣದೊಂದಿಗೆ ಅವರಿಗೆ ಆಯುಷ್ಯ, ಆರೋಗ್ಯ ಮತ್ತು ಅಧಿಕಾರ ಪ್ರಾಪ್ತಿಯಾಗಲೆಂದು ಹರಸಿದ್ದಾರೆ. ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ಸಂಭ್ರಮಾಚರಣೆಯ ನಂತರ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : NEET ಪರೀಕ್ಷಾ ವ್ಯವಸ್ಥೆ ರದ್ದಾಗಲಿ – KRS ಪಕ್ಷ ಆಗ್ರಹ!



















