ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಏಜೆಂಟ್ಗಳ ನಡುವೆ ತೀವ್ರ ವಾಗ್ವಾದ ಮತ್ತು ಗಲಾಟೆ ನಡೆದಿದೆ.
ಕಾಂಗ್ರೆಸ್ ಏಜೆಂಟ್ಗಳನ್ನು ನಿರ್ಲಕ್ಷಿಸಿ ಆರಂಭದಲ್ಲೇ ಬಿಜೆಪಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 31 ಬಿಎಲ್ಒಗಳು ಹಾಜರಾಗಬೇಕಿದ್ದರೂ, ಕೇವಲ 14 ಮಂದಿ ಮಾತ್ರ ಬಂದಿದ್ದು, ಉಳಿದ ಸಿಬ್ಬಂದಿ ಬರುವವರೆಗೆ SIR ಕಾರ್ಯ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಏಜೆಂಟ್ಗಳು ಪಟ್ಟು ಹಿಡಿದಿದ್ದಾರೆ.
ಇನ್ನೊಂದೆಡೆ ಬಿಜೆಪಿ ಪರದಿಂದ 11 ಮಂದಿ ಕಾರ್ಯಕರ್ತರು ಹಾಗೂ ಏಜೆಂಟ್ಗಳು ಆಗಮಿಸಿ, ಲಭ್ಯವಿರುವ ಸಿಬ್ಬಂದಿಯೊಂದಿಗೆ SIR ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ಉಂಟಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಪಕ್ಷಗಳ ನಡುವಿನ ಈ ಜಟಾಪಟಿಯಿಂದ SIR ಸಿಬ್ಬಂದಿಯೂ ಗೊಂದಲಕ್ಕೀಡಾಗಿದ್ದು, ಚಾಮರಾಜಪೇಟೆ ಕ್ಷೇತ್ರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲು ವಿಳಂಬವಾಯಿತು. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ, ಅಧಿಕಾರಿಗಳು ಪರಿಸ್ಥಿತಿಯನ್ನು ಸಮಾಧಾನಪಡಿಸಿ SIR ಪ್ರಕ್ರಿಯೆ ಸುಗಮವಾಗಿ ನಡೆಸಲು ಪ್ರಯತ್ನ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ರಸ್ತೆ ಅಭಿವೃದ್ಧಿಗೆ ರಿಲೀಸ್ ಆದ ಕೋಟಿ ಕೋಟಿ ಹಣ ಎಲ್ಲೋಯ್ತು? – ತನಿಖೆಗೆ N.R ರಮೇಶ್ ಆಗ್ರಹ!


















