ಬೆಂಗಳೂರು : ಭಾರತೀಯ ಕ್ರಿಕೆಟ್ನ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ 2008ರ ಐಪಿಎಲ್ನ ‘ಸ್ಲ್ಯಾಪ್ಗೇಟ್’ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಬಹುತೇಕ ಎರಡು ದಶಕಗಳ ಬಳಿಕ, ಹಳೆಯ ಗಾಯವನ್ನು ಕೆದಕುವಂತಹ ಬೆಳವಣಿಗೆಯೊಂದು ನಡೆದಿದ್ದು, ಭಾರತದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಹಾಗೂ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ನಡುವಿನ ಶೀತಲ ಸಮರ ಮತ್ತೆ ಆರಂಭವಾಗಿದೆ. ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ, ಹಳೆಯ ಕಹಿಯನ್ನು ಮರೆತು ಇಬ್ಬರೂ ಒಂದಾಗಿದ್ದಾರೆ ಎಂದು ಭಾವಿಸಲಾಗಿದ್ದ ಹೊತ್ತಿನಲ್ಲೇ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್ಗೆ ಬಾಕ್ಸಿಂಗ್ ರಿಂಗ್ನಲ್ಲಿ ಮುಖಾಮುಖಿಯಾಗುವಂತೆ ಬಾಕ್ಸಿಂಗ್ ಭಾಷೆಯಲ್ಲೇ ಬಹಿರಂಗ ಸವಾಲು ಹಾಕುವ ಮೂಲಕ ಕ್ರೀಡಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ಜಾಹೀರಾತಿನಿಂದ ಮರುಕಳಿಸಿದ ಹಳೇ ಕಹಿ ನೆನಪು
ಕಾಲಕ್ರಮೇಣ ಈ ಇಬ್ಬರ ನಡುವಿನ ಸಂಬಂಧ ಸುಧಾರಿಸಿತ್ತು ಮತ್ತು ಇಬ್ಬರೂ ಹಳೆಯ ಘಟನೆಯನ್ನು ಮರೆತು ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಹರ್ಭಜನ್ ಸಿಂಗ್ ಕಾಣಿಸಿಕೊಂಡ ಜಾಹೀರಾತೊಂದು ಶ್ರೀಶಾಂತ್ ಅವರ ಕೋಪದ ಕಟ್ಟೆಯೊಡೆಯುವಂತೆ ಮಾಡಿದೆ. ಈ ಜಾಹೀರಾತಿನಲ್ಲಿ 2008ರ ಕಪಾಳಮೋಕ್ಷದ ಘಟನೆಯ ಕುರಿತು ಪರೋಕ್ಷವಾಗಿ ಉಲ್ಲೇಖಿಸಲಾಗಿದೆ ಎಂದು ಶ್ರೀಶಾಂತ್ ಆರೋಪಿಸಿದ್ದಾರೆ. ಹಳೆಯ ಅವಮಾನವನ್ನು ಬಳಸಿಕೊಂಡು ಭಜ್ಜಿ ಹಣ ಸಂಪಾದಿಸುತ್ತಿದ್ದಾರೆ ಎಂಬುದು ಶ್ರೀಶಾಂತ್ ಅವರ ಪ್ರಮುಖ ಅಸಮಾಧಾನವಾಗಿದೆ. ತನ್ನ ಜೀವನದ ಅತ್ಯಂತ ನೋವಿನ ಘಟನೆಯನ್ನು ವಾಣಿಜ್ಯ ಲಾಭಕ್ಕಾಗಿ ಇನ್ನೊಬ್ಬರು ಬಳಸಿಕೊಳ್ಳುತ್ತಿರುವುದನ್ನು ಸಹಿಸದ ಶ್ರೀಶಾಂತ್, ಹರ್ಭಜನ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
‘ಧೈರ್ಯವಿದ್ದರೆ ಬಾಕ್ಸಿಂಗ್ ರಿಂಗ್ಗೆ ಬನ್ನಿ’
ಇತ್ತೀಚೆಗೆ ‘ಲಲ್ಲನ್ಟಾಪ್’ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಶ್ರೀಶಾಂತ್, ಜಾಹೀರಾತಿನಲ್ಲಿರುವಂತೆ ನಿಜವಾಗಿಯೂ ಬಾಕ್ಸಿಂಗ್ ಮಾಡುವ ಧೈರ್ಯ ಹರ್ಭಜನ್ ಅವರಿಗಿದೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. “ಅದೇ ಗ್ಲೌಸ್ ಧರಿಸಿ ನನ್ನೊಂದಿಗೆ ರಿಂಗ್ಗೆ ಬರಲು ನಿಮಗೆ ತಾಕತ್ತಿದೆಯೇ? ಇದೇನು ಜಾಹೀರಾತಿನ ನಟನೆಯಲ್ಲ. ನಾನು ಸದ್ಯ ಬೇರ್ ನಕಲ್ ಫೈಟ್ ಲೀಗ್ನ ಭಾಗವಾಗಿದ್ದೇನೆ. ನನ್ನ ಮೇಲಿನ ಕೋಪ ಅಥವಾ ಆ ಕಪಾಳಮೋಕ್ಷದ ಘಟನೆಯನ್ನು ದುಡಿಸಿಕೊಳ್ಳುವುದಾದರೆ, ನನಗೂ ದುಡಿಯಲು ಅವಕಾಶ ಕೊಡಿ. ನಿಜವಾದ ಸ್ವಾಭಿಮಾನವಿದ್ದರೆ ಕ್ಯಾಮೆರಾ ಮುಂದೆ ಜಾಹೀರಾತು ಮಾಡುವುದನ್ನು ಬಿಟ್ಟು ನಿಜವಾದ ರಿಂಗ್ಗೆ ಬನ್ನಿ, ನಾನು ಕಾಯುತ್ತಿದ್ದೇನೆ” ಎಂದು ಶ್ರೀಶಾಂತ್ ಸವಾಲು ಎಸೆದಿದ್ದಾರೆ.
2008ರ ‘ಸ್ಲ್ಯಾಪ್ಗೇಟ್’ ಹಿನ್ನೆಲೆ
2008ರಲ್ಲಿ ನಡೆದ ಐಪಿಎಲ್ನ ಚೊಚ್ಚಲ ಆವೃತ್ತಿಯು ಈ ವಿವಾದಕ್ಕೆ ಸಾಕ್ಷಿಯಾಗಿತ್ತು. ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ಎದುರಾಳಿ ತಂಡದ ಆಟಗಾರ ಶ್ರೀಶಾಂತ್ಗೆ ಮೈದಾನದಲ್ಲೇ ಕಪಾಳಮೋಕ್ಷ ಮಾಡಿದ್ದರು. ಆ ಘಟನೆಯ ಬಳಿಕ ಮೈದಾನದಲ್ಲೇ ಶ್ರೀಶಾಂತ್ ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದವು. ಈ ಅಶಿಸ್ತಿನ ವರ್ತನೆಗಾಗಿ ಹರ್ಭಜನ್ ಸಿಂಗ್ ಮೇಲೆ ಭಾರೀ ಟೀಕೆಗಳು ವ್ಯಕ್ತವಾಗಿದ್ದಲ್ಲದೆ, ಟೂರ್ನಿಯಿಂದ ನಿಷೇಧ ಸೇರಿದಂತೆ ಕಠಿಣ ಶಿಸ್ತುಕ್ರಮ ಜರುಗಿಸಲಾಗಿತ್ತು.
ಹಲವು ವರ್ಷಗಳ ಬಳಿಕ ಹರ್ಭಜನ್ ಈ ಬಗ್ಗೆ ಹಲವು ಬಾರಿ ಕ್ಷಮೆಯಾಚಿಸಿದ್ದು, ಇಬ್ಬರೂ ಮತ್ತೆ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ಈ ಜಾಹೀರಾತಿನ ಘಟನೆಯ ಬಳಿಕ ಸಿಡಿದೆದ್ದಿರುವ ಶ್ರೀಶಾಂತ್, ಹರ್ಭಜನ್ ಅವರನ್ನು ಬ್ಲಾಕ್ ಮಾಡಿದ್ದು, ಅವರೊಂದಿಗಿನ ಎಲ್ಲಾ ಸಂಪರ್ಕವನ್ನು ಕಡಿದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಹಿರಂಗ ಸವಾಲಿನ ಬಳಿಕ ವಿವಾದ ಮತ್ತೆ ಜೀವ ಪಡೆದುಕೊಂಡಿದ್ದು, ಸದ್ಯ ಹರ್ಭಜನ್ ಸಿಂಗ್ ಅವರ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಇದನ್ನೂ ಓದಿ : ವಿವಾದಗಳ ನಡುವೆ ಮೈದಾನಕ್ಕಿಳಿಯಲು ಸಜ್ಜಾದ ಬೆನ್ ಸ್ಟೋಕ್ಸ್ ; ಕೌಂಟಿ ಕ್ರಿಕೆಟ್ಗೆ ಕಮ್ಬ್ಯಾಕ್



















