ಮ್ಯಾಂಚೆಸ್ಟರ್ : ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ನಾಲ್ಕು ವಿಕೆಟ್ಗಳ ಆಘಾತಕಾರಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಅಂತರದ ಹಿನ್ನಡೆ ಅನುಭವಿಸಿದ್ದು, ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ದುಬಾರಿಯಾದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ತಂಡಕ್ಕೆ ಪದಾರ್ಪಣೆ ಮಾಡಿದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಭಯಮುಕ್ತ ಆಟವನ್ನು ಗುಣಗಾನ ಮಾಡಿದ್ದಾರೆ.
ರವಿ ಬಿಷ್ಣೋಯ್ಗೆ ಬೆನ್ನಲುಬಾಗಿ ನಿಂತ ನಾಯಕ
ಈ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರ ಬೌಲಿಂಗ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ತಮ್ಮ ಮೂರು ಓವರ್ಗಳ ಸ್ಪೆಲ್ನಲ್ಲಿ ಬರೋಬ್ಬರಿ 60 ರನ್ಗಳನ್ನು ಬಿಟ್ಟುಕೊಡುವ ಮೂಲಕ ಅವರು ಅನಪೇಕ್ಷಿತ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಅದರಲ್ಲೂ ಅವರು ಎಸೆದ ಇನಿಂಗ್ಸ್ನ 17ನೇ ಓವರ್ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಶ್ರೇಯಸ್ ಅಯ್ಯರ್ ಒಪ್ಪಿಕೊಂಡಿದ್ದಾರೆ.
ಇಂಗ್ಲೆಂಡ್ ಗೆಲುವಿಗೆ ಕೊನೆಯ 24 ಎಸೆತಗಳಲ್ಲಿ 49 ರನ್ಗಳ ಅವಶ್ಯಕತೆಯಿದ್ದಾಗ, ಆ ಓವರ್ನಲ್ಲಿ ಜಾಕೋಬ್ ಬೆಥೆಲ್ ಅವರ ಅಬ್ಬರಕ್ಕೆ ಸಿಲುಕಿದ ಬಿಷ್ಣೋಯ್ ಬರೊಬ್ಬರಿ 29 ರನ್ಗಳನ್ನು ಚಚ್ಚಿಸಿಕೊಂಡರು. ಇದಲ್ಲದೆ ಮೂರು ನೋ-ಬಾಲ್ಗಳನ್ನು ಎಸೆಯುವ ಮೂಲಕ ತಮ್ಮ ಲಯ ಕಳೆದುಕೊಂಡಿದ್ದರು. ಪುರುಷರ ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ಭಾರತೀಯ ಬೌಲರ್ ಓರ್ವ ಎಸೆದ ಮೂರನೇ ಅತಿ ದುಬಾರಿ ಓವರ್ ಎಂಬ ಕಳಪೆ ದಾಖಲೆಗೂ ಇದು ಕಾರಣವಾಯಿತು. ಆದಾಗ್ಯೂ, ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅಯ್ಯರ್, ಬಿಷ್ಣೋಯ್ ಬಲಶಾಲಿಯಾಗಿ ಲಯಕ್ಕೆ ಮರಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಆ 17ನೇ ಓವರ್ ನಮ್ಮ ಸೋಲಿಗೆ ಬಹುಮುಖ್ಯ ಕಾರಣವಾಯಿತು. ಆದರೆ ಆಟಗಾರನಿಗೆ ಕೆಲವೊಮ್ಮೆ ಇಂತಹ ಕೆಟ್ಟ ದಿನಗಳು ಎದುರಾಗುತ್ತವೆ. ಅವರು ಈ ಪ್ರಮಾದದಿಂದ ಪಾಠ ಕಲಿಯಲಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಶಕ್ತಿಯುತವಾಗಿ ಕಂಬ್ಯಾಕ್ ಮಾಡಲಿದ್ದಾರೆ” ಎಂದು ಅಯ್ಯರ್ ಭರವಸೆ ವ್ಯಕ್ತಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಆಟಕ್ಕೆ ಶ್ರೇಯಸ್ ಫಿದಾ
ಒಂದೆಡೆ ಬಿಷ್ಣೋಯ್ ಅವರ ಕಳಪೆ ಪ್ರದರ್ಶನವು ನಿರಾಸೆ ಮೂಡಿಸಿದ್ದರೆ, ಮತ್ತೊಂದೆಡೆ ಪುರುಷರ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಕಿರಿಯ ವಯಸ್ಸಿನಲ್ಲಿ (15 ವರ್ಷ) ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಅವರ ಆಟ ನಾಯಕ ಶ್ರೇಯಸ್ ಅಯ್ಯರ್ ಅವರ ಮನಗೆದ್ದಿದೆ. 2019ರಲ್ಲಿ ಷಫಾಲಿ ವರ್ಮಾ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿಹಾಕಿದ ಈ ಹದಿಹರೆಯದ ಆರಂಭಿಕ ಆಟಗಾರ, ಕೇವಲ ಒಂಬತ್ತು ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ಗಳ ನೆರವಿನಿಂದ 14 ರನ್ ಸಿಡಿಸಿ ಮಿಂಚಿದರು. ಅದರಲ್ಲಿಯೂ ಜೋಫ್ರಾ ಆರ್ಚರ್ ಹಾಗೂ ಜೋಶ್ ಟಂಗ್ ಅವರಂತಹ ವಿಶ್ವದರ್ಜೆಯ ವೇಗಿಗಳ ಎಸೆತದಲ್ಲಿ ಅವರು ಸಿಡಿಸಿದ ಸಿಕ್ಸರ್ಗಳು ಅವರ ಆತ್ಮವಿಶ್ವಾಸವನ್ನು ತೋರಿಸುತ್ತಿದ್ದವು.
ಸೂರ್ಯವಂಶಿ ಅವರ ಆಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅಯ್ಯರ್, “ಆತ ಯಾವುದೇ ಭಯವಿಲ್ಲದೆ ಆಡುವ ರೀತಿ ಹಾಗೂ ಕ್ರೀಡಾಂಗಣದಲ್ಲಿ ಆತನ ಮನೋಭಾವ ನಿಜಕ್ಕೂ ಅದ್ಭುತವಾಗಿದೆ. ನೆಟ್ಸ್ನಲ್ಲಿ ಆತ ಬ್ಯಾಟಿಂಗ್ ಮಾಡುವ ಶೈಲಿಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ” ಎಂದು ಶ್ಲಾಘಿಸಿದರು. “ಕಳೆದ ಕೆಲವು ತಿಂಗಳುಗಳಿಂದ ಆತ ಅದ್ಭುತವಾದ ಕ್ರಿಕೆಟ್ ಆಡಿಕೊಂಡೇ ಬಂದಿದ್ದಾನೆ. ಹೀಗಾಗಿ ಚೊಚ್ಚಲ ಪಂದ್ಯದಲ್ಲೂ ಆತ ನರ್ವಸ್ ಆಗಿರಲಿಲ್ಲ. ಆತನ ಸಾಮರ್ಥ್ಯದ ಬಗ್ಗೆ ನಮಗೆಲ್ಲರಿಗೂ ಅರಿವಿದೆ ಹಾಗೂ ನಾವು ಸದಾ ಆತನಿಗೆ ಬೆಂಬಲವಾಗಿರುತ್ತೇವೆ” ಎಂದು ನಾಯಕ ಸೂರ್ಯವಂಶಿ ಬೆನ್ನುತಟ್ಟಿದ್ದಾರೆ. ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ, ಮುಂಬರುವ ಜುಲೈ 7 ರಂದು ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ತಿರುಗೇಟು ನೀಡಲು ಎದುರು ನೋಡುತ್ತಿದೆ.
ಇದನ್ನೂ ಓದಿ : ಸ್ಯಾಮ್ಸನ್ ಕಳಪೆ ಫಾರ್ಮ್ ಬಗ್ಗೆ ಎಸ್. ಬದರಿನಾಥ್ ಅಸಮಾಧಾನ



















