ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2026ರಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳ ಆಯ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ದಸರಾಗೆ ಆನೆಗಳ ಆಯ್ಕೆ ಪ್ರಕ್ರಿಯೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ಈ ಬಾರಿ ಯಾರು ಇನ್, ಯಾರು ಔಟ್ ಎಂಬ ಕುತೂಹಲ ಮೂಡಿದೆ.
ಆನೆಗಳ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೊಸ ಆನೆಗಳ ಆಯ್ಕೆಯತ್ತಲೂ ಗಮನ ಹರಿಸಿದ್ದಾರೆ ಎಂದು ತಿಳಿದುಬಂದಿದ್ದು, ದಸರಾ ಆನೆಗಳ ಅಂತಿಮ ಪಟ್ಟಿಯನ್ನು ಮುಂದಿನ ವಾರವೇ ಪ್ರಕಟಿಸುವ ಸಾಧ್ಯತೆ ಇದೆ.
ಈ ಬಾರಿ ದಸರಾಗೆ ಕಂಜನ್ ಆನೆಗೆ ಕೋಕ್ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ದುಬಾರೆಯಲ್ಲಿ ನಡೆದ ದುರಂತದಲ್ಲಿ ಮಕ್ನಾ ಆನೆ (ಕೋರೆ ಇಲ್ಲದ ಗಂಡು ಆನೆ) ಹಾಗೂ ಮಹಿಳೆಯ ಸಾವಿಗೆ ಕಾರಣವಾಗಿದ್ದ ಕಂಜನ್ ಆನೆಯನ್ನು ಈ ಬಾರಿ ದಸರಾಗೆ ಕರೆತರದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಕಂಜನ್ ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿದೆ.
ಇನ್ನು ಜನರ ಅಚ್ಚುಮೆಚ್ಚಿನ ಆನೆಯಾಗಿರುವ ಭೀಮ ಈ ಬಾರಿ ದಸರಾಗೆ ಬರುವುದು ಡೌಟ್ ಆಗಿದೆ. ದೊಡ್ಡವರಿಗೆ ಮಾತ್ರವಲ್ಲದೆ ಪುಟಾಣಿಗಳಿಗೂ ಅಚ್ಚುಮೆಚ್ಚಿನ ಭೀಮ, ಕಳೆದ ಎರಡು ತಿಂಗಳಿನಿಂದ ಮಸ್ತಿನಲ್ಲಿದೆ. ಮದದ ಕಾರಣದಿಂದ ಭೀಮನ ವರ್ತನೆಯಲ್ಲೂ ಬದಲಾವಣೆ ಕಂಡುಬಂದಿದೆ. ಸದ್ಯ ಮತ್ತಿಗೋಡು ಆನೆ ಶಿಬಿರದಲ್ಲಿರುವ ಭೀಮನ ಚಲನ-ವಲನಗಳ ಮೇಲೆ ಸಿಬ್ಬಂದಿ ನಿಗಾ ಇರಿಸಿದ್ದಾರೆ. ಭೀಮನ ಮದ ಕಡಿಮೆಯಾದರೆ ಮಾತ್ರ ಈ ಬಾರಿ ದಸರಾಗೆ ಕರೆತರುವ ಸಾಧ್ಯತೆ ಇದೆ.
ಕಳೆದ ವರ್ಷ ದಸರಾಗೆ ಆಗಮಿಸಿ ಪಟ್ಟದ ಆನೆಯಾಗಿದ್ದ ಶ್ರೀಕಂಠಗೂ ಮದ ಬಂದಿದೆ. ಇದೇ ವೇಳೆ ದುಬಾರೆ ಆನೆ ಶಿಬಿರದಲ್ಲಿರುವ ಹಿರಿಯ ಹರ್ಷ ಆನೆಯೂ ಮದದಲ್ಲಿದೆ. ಹೀಗಾಗಿ ದಸರಾಗೆ ಆನೆಗಳ ಆಯ್ಕೆ ಮಾಡುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ. ಆನೆಗಳ ಮದ ಕಡಿಮೆ ಮಾಡಲು ಸಿಬ್ಬಂದಿ ತಂಪು ಆಹಾರ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮದ ಕಡಿಮೆಯಾದರೆ ಮಾತ್ರ ಶ್ರೀಕಂಠ, ಭೀಮ ಮತ್ತು ಹರ್ಷ ಆನೆಗಳನ್ನು ದಸರಾಗೆ ಕರೆತರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ದಸರಾ ಜಂಬೂಸವಾರಿಗೆ ಯಾವ ಆನೆಗಳು ಬರಲಿವೆ ಎಂಬುದು ಇನ್ನೂ ಕುತೂಹಲ ಮೂಡಿಸಿದೆ. ಹಾಲಿ ಆನೆಗಳ ಆರೋಗ್ಯ ಮತ್ತು ವರ್ತನೆಯ ಮೇಲೆ ನಿಗಾ ಇಟ್ಟಿರುವ ಅಧಿಕಾರಿಗಳು, ಅಗತ್ಯ ಬಿದ್ದರೆ ಹೊಸ ಆನೆಗಳನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ. ಮುಂದಿನ ವಾರ ಹೊರಬರಲಿರುವ ಆನೆಗಳ ಅಂತಿಮ ಪಟ್ಟಿಯ ಬಳಿಕ ಈ ಬಾರಿ ಮೈಸೂರು ದಸರಾಗೆ ಯಾರು ಇನ್, ಯಾರು ಔಟ್ ಎಂಬುದು ಸ್ಪಷ್ಟವಾಗಲಿದೆ.
ಇದನ್ನೂ ಓದಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ; NTAಯ 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ!



















