ಮುಂಬೈ : ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಭಾರಿ ಶಾಕ್ ನೀಡಿದೆ. ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಪಂತ್ ಅವರನ್ನು ಏಕದಿನ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದ್ದು, ಟೆಸ್ಟ್ ತಂಡದ ಉಪನಾಯಕತ್ವದಿಂದಲೂ ಕೆಳಗಿಳಿಸಲಾಗಿದೆ. ಪಂತ್ ಅವರ ಸ್ಥಾನದಲ್ಲಿ ಅನುಭವಿ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ಟೆಸ್ಟ್ ತಂಡದ ಉಪನಾಯಕನ ಪಟ್ಟ ಕಟ್ಟಲಾಗಿದೆ. ಇದರ ನಡುವೆಯೂ ರಿಷಭ್ ಪಂತ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.
ಏಕದಿನ ತಂಡದಲ್ಲಿ ಇಶಾನ್ ಕಿಶನ್ಗೆ ಒಲಿದ ಅವಕಾಶ
ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ರಿಷಭ್ ಪಂತ್, ಪ್ರಸಕ್ತ ಐಪಿಎಲ್ (2026) ಟೂರ್ನಿಯಲ್ಲೂ ಲಕ್ನೋ ಸೂಪರ್ ಜೈಂಟ್ಸ್ ಪರ ಕಳಪೆ ಆಟವಾಡಿದ್ದರು. ಹೀಗಾಗಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಪಂತ್ ಬದಲಿಗೆ ಇಶಾನ್ ಕಿಶನ್ ಹಾಗೂ ಕೆ.ಎಲ್. ರಾಹುಲ್ ಅವರನ್ನು ವಿಕೆಟ್ ಕೀಪರ್ ಆಯ್ಕೆಯಾಗಿ ಪರಿಗಣಿಸಲಾಗಿದೆ. ಮುಂಬರುವ 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ದಕ್ಷಿಣ ಆಫ್ರಿಕಾದ ಪಿಚ್ಗಳಿಗೆ ಹೊಂದುವಂತಹ ಆಟಗಾರರನ್ನು ಮತ್ತು ಬೇರೆ ಬೇರೆ ವಿಕೆಟ್ ಕೀಪಿಂಗ್ ಆಯ್ಕೆಗಳನ್ನು ಪರೀಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಟೆಸ್ಟ್ ತಂಡದಲ್ಲಿ ಪಂತ್ ಸ್ಥಾನ ಭದ್ರ ಎಂದ ಅಗರ್ಕರ್
ರಿಷಭ್ ಪಂತ್ ಅವರನ್ನು ಟೆಸ್ಟ್ ಉಪನಾಯಕತ್ವದಿಂದ ಕೆಳಗಿಳಿಸಿದ್ದರೂ, ರೆಡ್-ಬಾಲ್ ಕ್ರಿಕೆಟ್ನಲ್ಲಿ ಅವರ ಸ್ಥಾನಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಅಜಿತ್ ಅಗರ್ಕರ್ ಅಭಯ ನೀಡಿದ್ದಾರೆ. ಪಂತ್ ಒಬ್ಬ ಅದ್ಭುತ ಟೆಸ್ಟ್ ಆಟಗಾರನಾಗಿದ್ದು, ಭಾರತೀಯ ಟೆಸ್ಟ್ ತಂಡದ ಪ್ರಮುಖ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಹಳೆಯ ಲಯಕ್ಕೆ ಮರಳಿ ಅತ್ಯುತ್ತಮ ಟೆಸ್ಟ್ ಆಟಗಾರನಾಗಿ ಹೊರಹೊಮ್ಮಬೇಕು ಎಂಬುದು ನಮ್ಮ ಉದ್ದೇಶ. ಏಕದಿನ ತಂಡದಲ್ಲಿ ನಾವು ಬೇರೆ ಆಯ್ಕೆಗಳ ಮೊರೆ ಹೋಗಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಪಂತ್ ನಮ್ಮ ಪ್ರಮುಖ ಅಸ್ತ್ರ ಎಂದು ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನ ಒತ್ತಡವನ್ನು ಕಡಿಮೆ ಮಾಡಿ, ಅವರ ನೈಜ ಶಕ್ತಿಯಾಗಿರುವ ಟೆಸ್ಟ್ ಕ್ರಿಕೆಟ್ನತ್ತ ಸಂಪೂರ್ಣ ಗಮನಹರಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸುಳಿವು ನೀಡಿದರು.
ಶುಭ್ಮನ್ ಗಿಲ್ ನಾಯಕ, ಯುವಕರಿಗೆ ಮಣೆ
ಜೂನ್ 6ರಿಂದ ಮುಲ್ಲನ್ಪುರ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಹಲವು ಅಚ್ಚರಿಯ ಬದಲಾವಣೆಗಳನ್ನು ಮಾಡಲಾಗಿದ್ದು, ಯುವ ಸ್ಪಿನ್ನರ್ಗಳಾದ ಮಾನವ್ ಸುತಾರ್, ಹರ್ಷ್ ದುಬೆ ಹಾಗೂ ವೇಗಿ ಗುರ್ನೂರ್ ಬ್ರಾರ್ ಅವರಿಗೆ ಟೆಸ್ಟ್ ತಂಡದಲ್ಲಿ ಚೊಚ್ಚಲ ಅವಕಾಶ ನೀಡಲಾಗಿದೆ. ಜೂನ್ 14, 17 ಹಾಗೂ 20ರಂದು ಕ್ರಮವಾಗಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ಏಕದಿನ ಪಂದ್ಯಗಳು ಜರುಗಲಿವೆ. ಭವಿಷ್ಯದ ದೃಷ್ಟಿಯಿಂದ ಏಕದಿನ ತಂಡಕ್ಕೂ ಯುವ ವೇಗಿ ಪ್ರಿನ್ಸ್ ಯಾದವ್ ಅವರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.
ಇದನ್ನೂ ಓದಿ : ಲೈವ್ನಲ್ಲೇ ಅಸಭ್ಯ ಪದ ಬಳಸಿದ ಪಂತ್ : RR ವಿರುದ್ಧ ಸೋಲಿನ ಬಳಿಕ LSG ನಾಯಕನ ಅಸಮಾಧಾನ ಸ್ಫೋಟ!



















