ಬೆಂಗಳೂರು : ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಆದರ್ಶ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ವೈದ್ಯ ಡಾ. ರಾಜ್ ಕಮಲ್ ಅವರ ಮನೆಗೆ ಅರಣ್ಯ ಇಲಾಖೆ ಸಂಚಾರ ದಳದ ಅಧಿಕಾರಿಗಳು ದಾಳಿ ನಡೆಸಿ ಅಪರೂಪದ ವನ್ಯಜೀವಿಗಳನ್ನು ಪತ್ತೆಹಚ್ಚಿದ್ದಾರೆ.
ತಮಿಳುನಾಡು ಮೂಲದ ಡಾ. ರಾಜ್ ಕಮಲ್ ಅವರು ಜೆಪಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿದ್ದು, ಅರಣ್ಯ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ವಿವಿಧ ವನ್ಯ ಪ್ರಭೇದಗಳನ್ನು ಮನೆಯಲ್ಲಿ ಸಾಕಾಣಿಕೆ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ದಾಳಿಯ ವೇಳೆ 8 ನಕ್ಷತ್ರ ಆಮೆಗಳು, 14 ಮಧ್ಯಮ ಗಾತ್ರದ ಆಮೆಗಳು, 4 ಬಿಳಿ ಬಣ್ಣದ ಜೀವಂತ ಹಾವುಗಳು, 1 ಜೀವಂತ ಊಸರವಳ್ಳಿ ಸೇರಿದಂತೆ ಹಲವು ಅಪರೂಪದ ವನ್ಯಜೀವಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪತ್ತೆಯಾದ ಪ್ರಭೇದಗಳ ಒಟ್ಟು ಮೌಲ್ಯ ಕೋಟ್ಯಂತರ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದ್ದು, ವಿದೇಶಿ ಮೂಲದ ಈ ಅಪರೂಪದ ವನ್ಯಜೀವಿಗಳನ್ನು ಅಕ್ರಮವಾಗಿ ತರಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಾಣಿಗಳು ಕಸ್ಟಮ್ಸ್ ಅಧಿಕಾರಿಗಳ ಕಣ್ಣುತಪ್ಪಿಸಿ ಭಾರತಕ್ಕೆ ಹೇಗೆ ಬಂದವು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ವಿದೇಶಿ ವನ್ಯಜೀವಿಗಳ ಅಕ್ರಮ ಸಾಗಣೆ ಜಾಲದ ಸಂಪರ್ಕವಿದೆಯೇ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಶಪಡಿಸಿಕೊಂಡ ಪ್ರಾಣಿಗಳ ಮೂಲ ಹಾಗೂ ಅವುಗಳನ್ನು ದೇಶಕ್ಕೆ ತರಲಾದ ಮಾರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಧಾರಾಕಾರ ಮಳೆಗೆ ದುರಂತ : ಆಟವಾಡುತ್ತಿದ್ದಾಗ ಮಣ್ಣು ಕುಸಿದು ಮಕ್ಕಳಿಬ್ಬರು ದುರ್ಮರಣ!



















