ಅಯೋಧ್ಯೆ : ಅಯೋಧ್ಯೆಯ ರಾಮಮಂದಿರದಲ್ಲಿ ಹುಂಡಿ ಹಾಗೂ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇದೀಗ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಆಗಸ್ಟ್ 28ರ ನಂತರ ನೂತನ ಸಿಇಒ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ದೇಶಾದ್ಯಂತ ಸಲ್ಲಿಕೆಯಾಗಿರುವ ಸುಮಾರು 5,500 ಅರ್ಜಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸುತ್ತಿದೆ. ಈ ಪ್ರಕ್ರಿಯೆಯನ್ನು ಮುಂದಿನ 40 ದಿನಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಅನುಭವದ ಜೊತೆಗೆ ಭಕ್ತಿಗೆ ಆದ್ಯತೆ
ಸಿಇಒ ಹುದ್ದೆಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು, ವಕೀಲರು ಹಾಗೂ ಪ್ರಸಿದ್ಧ ಐಟಿ ಮತ್ತು ಹಣಕಾಸು ತಜ್ಞರು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯ ಪ್ರಕಾರ, ಅಭ್ಯರ್ಥಿಗಳ 20 ವರ್ಷಗಳ ಆಡಳಿತಾತ್ಮಕ ಅನುಭವದ ಜೊತೆಗೆ ಶ್ರೀರಾಮನ ಮೇಲಿರುವ ಭಕ್ತಿ ಮತ್ತು ಧಾರ್ಮಿಕ ನಿಷ್ಠೆಯು ಆಯ್ಕೆಯ ಪ್ರಮುಖ ಮಾನದಂಡವಾಗಿದೆ. 50 ರಿಂದ 70 ವರ್ಷದೊಳಗಿನ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಅವಧಿಗೆ ಈ ಹುದ್ದೆಯನ್ನು ನೀಡಲಾಗುತ್ತಿದ್ದು, ಕಾರ್ಯಕ್ಷಮತೆಯ ಆಧಾರದ ಮೇಲೆ ಅವಧಿಯನ್ನು ವಿಸ್ತರಿಸಲಾಗುವುದು.
ರಹಸ್ಯ ಸಂದರ್ಶನ
ಮೊದಲ ಹಂತದಲ್ಲಿ 5,000 ಅರ್ಜಿಗಳನ್ನು ಭೇರ್ಪಡಿಸಿ, ಉಳಿದ 500 ಜನರ ಪೈಕಿ ಕೇವಲ 20 ರಿಂದ 30 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಸಮಿತಿಯ ಸದಸ್ಯರು ದೂರವಾಣಿ ಮೂಲಕ ಅಭ್ಯರ್ಥಿಗಳ ಅನುಭವ ಹಾಗೂ ಧಾರ್ಮಿಕ ಮನೋಭಾವವನ್ನು ತಿಳಿದುಕೊಂಡು, ತದನಂತರ ಆಯ್ದ ಕೆಲವರನ್ನು ಸಮಗ್ರ ಸಂದರ್ಶನಕ್ಕೆ ಕರೆಯುತ್ತಿದ್ದಾರೆ. ಇತ್ತೀಚೆಗೆ ಮಂದಿರದ ಪ್ರಸಾದ ನಿಕೇತನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹಿನ್ನೆಲೆಯಲ್ಲಿ, ಮಂದಿರದ ನಿಧಿಯನ್ನು ಪಾರದರ್ಶಕವಾಗಿ ನಿರ್ವಹಿಸುವ ಯೋಜನೆಗಳ ಕುರಿತಾಗಿಯೂ ಅಭ್ಯರ್ಥಿಗಳಿಂದ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರ ಮತ್ತು ಆರ್ಎಸ್ಎಸ್ ಮೇಲ್ವಿಚಾರಣೆ
ಈ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಹುದ್ದೆಯ ಅಂತಿಮ ಆಯ್ಕೆಯು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೇರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಎರಡೂ ಕಡೆಯ ಸಮ್ಮತಿ ಇರುವ ಸೂಕ್ತ ವ್ಯಕ್ತಿಯನ್ನು ಮಾತ್ರ ಸಿಇಒ ಪೀಠದಲ್ಲಿ ಕೂರಿಸಲಾಗುವುದು. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಸಿಇಒ ಕಚೇರಿಯ ಸಿಬ್ಬಂದಿ ಆಯ್ಕೆಯಲ್ಲೂ ಕೇಂದ್ರ ಹಾಗೂ ಸಂಘದ ಒಪ್ಪಿಗೆ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಮತ್ತೊಂದೆಡೆ, ರಾಮಮಂದಿರದ ಪ್ರಸಾದ ಮತ್ತು ಕಾಣಿಕೆಯಲ್ಲಿ ನಡೆದಿದೆ ಎನ್ನಲಾದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಆದೇಶಿಸಿದೆ. ಪ್ರಕರಣದ ತನಿಖೆಯನ್ನು ನಿಷ್ಪಕ್ಷವಾಗಿ ನಡೆಸಲು ಕೋರ್ಟ್ ನಿರ್ದೇಶಿಸಿದ್ದು, ಜುಲೈ 27ರಂದು ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ : ರಾಹುಲ್ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ!



















