ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ಲೀಗ್ ಹಂತದ ತಮ್ಮ ಅಂತಿಮ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವು ಅಂತಿಮವಾಗಿ ಯುವ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅರ್ಜುನ್, ಎಲ್ಎಸ್ಜಿ ಫ್ರಾಂಚೈಸಿ ಪರ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಟೂರ್ನಿಯುದ್ದಕ್ಕೂ ಬೆಂಚ್ ಕಾಯ್ದಿದ್ದ 26 ವರ್ಷದ ಎಡಗೈ ವೇಗಿಗೆ, ಋತುವಿನ ಕೊನೆಯ ಪಂದ್ಯದಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸುವ ಅವಕಾಶ ಲಭಿಸಿತ್ತು.
2023ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪದಾರ್ಪಣೆ ಮಾಡಿದ್ದ ಅರ್ಜುನ್, ಈ ಬಾರಿಯ ಮಿನಿ ಹರಾಜಿನಲ್ಲಿ ಲಕ್ನೋ ತಂಡವನ್ನು ಸೇರಿಕೊಂಡಿದ್ದರು. ಅವಕಾಶಕ್ಕಾಗಿ ಸುದೀರ್ಘ ಕಾಲ ಕಾದು ಕುಳಿತಿದ್ದರೂ, ಅಭ್ಯಾಸದ ವೇಳೆ ಅವರು ತೋರುತ್ತಿದ್ದ ಬದ್ಧತೆ ಹಾಗೂ ತಾಳ್ಮೆ ಇದೀಗ ಅವರ ತಂದೆ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪುತ್ರನ ಗುಣಗಾನ ಮಾಡಿದ ಮಾಸ್ಟರ್ ಬ್ಲಾಸ್ಟರ್
ಅರ್ಜುನ್ ತೆಂಡೂಲ್ಕರ್ ಅವರ ಈ ಪದಾರ್ಪಣೆಯ ಪಂದ್ಯದ ಬೆನ್ನಲ್ಲೇ, ಸಚಿನ್ ತೆಂಡೂಲ್ಕರ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಭಾವುಕ ಹಾಗೂ ಪ್ರೇರಣಾದಾಯಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. 2023ರ ನಂತರ ಪುತ್ರನ ಕ್ರಿಕೆಟ್ ಪಯಣದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪೋಸ್ಟ್ ಮಾಡದಿದ್ದ ಸಚಿನ್, ಇದೀಗ ಅರ್ಜುನ್ ಅವರ ತಾಳ್ಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ವೆಲ್ ಡನ್, ಅರ್ಜುನ್. ಈ ಋತುವಿನುದ್ದಕ್ಕೂ ನೀನು ನಿನ್ನನ್ನು ನಿಭಾಯಿಸಿದ ರೀತಿಯ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ.

ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು, ತಾಳ್ಮೆಯಿಂದಿದ್ದು, ಸದ್ದಿಲ್ಲದೆ ಕಠಿಣ ಪರಿಶ್ರಮ ಪಟ್ಟಿದ್ದೀಯ. ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ಸಕಾರಾತ್ಮಕವಾಗಿಯೇ ಉಳಿದುಕೊಂಡಿರುವುದು ಶ್ಲಾಘನೀಯ. ಕ್ರಿಕೆಟ್ ಎಂಬ ಆಟವು ಕೌಶಲದಷ್ಟೇ ತಾಳ್ಮೆಯನ್ನೂ ಪರೀಕ್ಷಿಸುತ್ತದೆ, ಮತ್ತು ಅವೆರಡನ್ನೂ ನೀನು ಇಂದು ಅದ್ಭುತವಾಗಿ ನಿಭಾಯಿಸಿದ್ದೀಯ. ನಿನ್ನ ಕಾಲುಗಳು ಯಾವಾಗಲೂ ನೆಲದ ಮೇಲಿರಲಿ ಮತ್ತು ಈ ಆಟದ ಮೇಲಿನ ನಿನ್ನ ಪ್ರೀತಿ ಹೀಗೆಯೇ ಮುಂದುವರಿಯಲಿ,” ಎಂದು ಸಚಿನ್ ಶುಭಕೋರಿದ್ದಾರೆ.
ಯಾರ್ಕರ್ ಮೂಲಕ ಗಮನ ಸೆಳೆದ ಎಡಗೈ ವೇಗಿ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ ನಾಯಕ ರಿಷಭ್ ಪಂತ್ ಅವರು ಪವರ್ಪ್ಲೇ ಮುಗಿದ ತಕ್ಷಣವೇ ಅರ್ಜುನ್ ತೆಂಡೂಲ್ಕರ್ ಕೈಗೆ ಚೆಂಡು ನೀಡಿದರು. ತಮ್ಮ ಮೊದಲ ಓವರ್ನಲ್ಲಿಯೇ ನಿಖರ ಬೌನ್ಸರ್ ಮೂಲಕ ಪ್ರಭ್ಸಿಮ್ರನ್ ಸಿಂಗ್ ಅವರನ್ನು ಕಂಗೆಡಿಸಿದ್ದ ಅರ್ಜುನ್, ವಿಕೆಟ್ ಪಡೆಯುವ ಅತ್ಯುತ್ತಮ ಅವಕಾಶ ಸೃಷ್ಟಿಸಿದ್ದರು. ಆದರೆ, ನಾಯಕ ಪಂತ್ ಕ್ಯಾಚ್ ಕೈಚೆಲ್ಲಿದ್ದರಿಂದ ಆ ಅವಕಾಶ ಕೈತಪ್ಪಿತು. ಆರಂಭಿಕ ಓವರ್ಗಳಲ್ಲಿ ಉತ್ತಮ ನಿಯಂತ್ರಣ ಸಾಧಿಸಿದರೂ, ನಂತರದ ಓವರ್ಗಳಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಪ್ರಭ್ಸಿಮ್ರನ್ ಸಿಂಗ್ ಅವರ ಆಕ್ರಮಣಕಾರಿ ಬ್ಯಾಟಿಂಗ್ಗೆ ಗುರಿಯಾದರು. ಹೀಗಿದ್ದರೂ ಎದೆಗುಂದದ ಅರ್ಜುನ್, ಇನ್ನಿಂಗ್ಸ್ನ 15ನೇ ಓವರ್ನಲ್ಲಿ ಅದ್ಭುತ ಯಾರ್ಕರ್ ಮೂಲಕ 69 ರನ್ ಗಳಿಸಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಪ್ರಭ್ಸಿಮ್ರನ್ ಸಿಂಗ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ, ಎಲ್ಎಸ್ಜಿ ಪರ ತಮ್ಮ ಮೊದಲ ವಿಕೆಟ್ ಸಂಭ್ರಮ ಆಚರಿಸಿದರು. ತಮ್ಮ ಪಾಲಿನ 4 ಓವರ್ಗಳ ಕೋಟಾವನ್ನು ಪೂರ್ಣಗೊಳಿಸಿದ ಅವರು 36 ರನ್ ನೀಡಿ 1 ವಿಕೆಟ್ ಪಡೆದು ಗಮನ ಸೆಳೆದರು.
ಎಲ್ಎಸ್ಜಿ ಪಾಲಿಗೆ ನಿರಾಸೆಯ ಋತು
ಅರ್ಜುನ್ ತೆಂಡೂಲ್ಕರ್ ಅವರ ಪದಾರ್ಪಣೆಯ ಪಂದ್ಯವು ವೈಯಕ್ತಿಕವಾಗಿ ಅವರಿಗೆ ತೃಪ್ತಿ ತಂದಿದ್ದರೂ, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾತ್ರ ಸೋಲಿನ ನಿರಾಸೆ ಎದುರಾಗಿದೆ. ಎಲ್ಎಸ್ಜಿ ನೀಡಿದ್ದ 197 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ನಾಯಕ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಹಾಗೂ ಅಜೇಯ ಶತಕದ (51 ಎಸೆತಗಳಲ್ಲಿ 101 ರನ್) ನೆರವಿನಿಂದ ಕೇವಲ 18 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಈ ಸೋಲಿನೊಂದಿಗೆ ಎಲ್ಎಸ್ಜಿ ತಂಡವು ಆಡಿದ 14 ಪಂದ್ಯಗಳಲ್ಲಿ ಕೇವಲ 8 ಅಂಕಗಳನ್ನು ಕಲೆಹಾಕಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಐಪಿಎಲ್ 2026ರ ಅಭಿಯಾನವನ್ನು ಅತ್ಯಂತ ಹೀನಾಯವಾಗಿ ಮುಕ್ತಾಯಗೊಳಿಸಿದೆ. ಬಲಿಷ್ಠ ಆಟಗಾರರ ಪಡೆಯಿದ್ದರೂ ಟೂರ್ನಿಯುದ್ದಕ್ಕೂ ಸಾಂಘಿಕ ಪ್ರದರ್ಶನ ನೀಡುವಲ್ಲಿ ವಿಫಲವಾದ ಲಕ್ನೋ ಪಡೆ, ಇದೀಗ ಮುಂದಿನ ಆವೃತ್ತಿಗೂ ಮುನ್ನ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳತ್ತ ಗಮನಹರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇದನ್ನೂ ಓದಿ : ಪ್ಲೇಆಫ್ ಎಂಟ್ರಿ ಬೆನ್ನಲ್ಲೇ ಪಂಜಾಬ್ ತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ರಾಜಸ್ಥಾನ್!



















