ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರು ಪದೇಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಹಾಗೂ ಅಂತರಾಷ್ಟ್ರೀಯ ಸರಣಿಗಳಿಂದ ಹೊರಗುಳಿಯುತ್ತಿರುವ ಬಗ್ಗೆ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಬ್ಯಾಟ್ಸ್ಮನ್ ಹನುಮ ವಿಹಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಜುಲೈ 23 ರಿಂದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲು ಆರಂಭಿಸಿದೆ.
ಈ ಸರಣಿ ಆರಂಭಕ್ಕೂ ಮುನ್ನ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ವಿಹಾರಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಹಾಗೂ ನಿತೀಶ್ ಕುಮಾರ್ ರೆಡ್ಡಿಯಂತಹ ಪ್ರಮುಖ ಆಟಗಾರರ ಗಾಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಸಿಸಿಐ (BCCI) ಹಾಗೂ ಆಟಗಾರರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ನೋವು ಅಥವಾ ಗಾಯಗಳೇ (niggle) ಆಟಗಾರರು ಪಂದ್ಯಗಳನ್ನು ತಪ್ಪಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತಿರುವುದು ನಿರಾಸೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳ ನಡುವಿನ ತಾರತಮ್ಯ
ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ ಮತ್ತು ವರುಣ್ ಚಕ್ರವರ್ತಿ ಅವರಂತಹ ಆಟಗಾರರು ಇಡೀ ಐಪಿಎಲ್ (IPL) ಸೀಸನ್ನಲ್ಲಿ ಒಂದೂ ಪಂದ್ಯವನ್ನು ತಪ್ಪಿಸಿಕೊಳ್ಳದೆ 14 ಪಂದ್ಯಗಳನ್ನು ಆಡುತ್ತಾರೆ, ಆದರೆ ಭಾರತೀಯ ಕ್ರಿಕೆಟ್ ತಂಡದ ಪರ ಆಡುವ ಸಮಯ ಬಂದಾಗ ಗಾಯದ ಕಾರಣ ನೀಡಿ ತಂಡದಿಂದ ಹೊರಗುಳಿಯುತ್ತಾರೆ, ಇದು ಯಾವ ರೀತಿಯ ಬದ್ಧತೆ ಎಂದು ವಿಹಾರಿ ಕಟುವಾಗಿ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಅಷ್ಟೇನೂ ಹೆಚ್ಚಿನ ಒತ್ತಡ ನೀಡುವುದಿಲ್ಲ. ಆದರೂ ಆಟಗಾರರು ಪದೇಪದೇ ಏಕೆ ಗಾಯಗೊಳ್ಳುತ್ತಿದ್ದಾರೆ? ಇದೇ ವೇಳೆ ಐಪಿಎಲ್ನಲ್ಲಿ ಆಡದ ಹರ್ಷಿತ್ ರಾಣಾ ಅವರು ಕಮ್ಬ್ಯಾಕ್ ಮಾಡಿ ಮತ್ತೆ ಗಾಯಗೊಂಡಿದ್ದರ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಸಣ್ಣ ಗಾಯದ ಸಮಸ್ಯೆಯಾದರೂ ಅದನ್ನೇ ದೊಡ್ಡದು ಮಾಡಿ ಅಂತರಾಷ್ಟ್ರೀಯ ಪಂದ್ಯಗಳಿಗೆ ವಿಶ್ರಾಂತಿ ಪಡೆಯುವುದು ಎಷ್ಟು ಸರಿ ಎಂಬುದು ಅವರ ಮೂಲ ಪ್ರಶ್ನೆಯಾಗಿದೆ.
ಟೀಮ್ ಇಂಡಿಯಾಕ್ಕೆ ವಾರ್ನಿಂಗ್ ಕೊಟ್ಟ ಹನುಮ ವಿಹಾರಿ
ಮುಂದಿನ ವಿಶ್ವಕಪ್ ಕ್ರೀಡಾಕೂಟದ ದೃಷ್ಟಿಯಿಂದ ಈ ರೀತಿಯ ತರಹೇವಾರಿ ಗಾಯದ ಸಮಸ್ಯೆಗಳು ಭಾರತ ತಂಡದ ಸಮತೋಲನವನ್ನು ಹಾಳುಗೆಡುವುತ್ತವೆ ಎಂದು ಹನುಮ ವಿಹಾರಿ ಎಚ್ಚರಿಕೆ ನೀಡಿದ್ದಾರೆ. ಹಣ ಮತ್ತು ಜನಪ್ರಿಯತೆ ತಂದುಕೊಡುವ ಐಪಿಎಲ್ ಆಡಲು ತೋರುವ ಆಸಕ್ತಿಯನ್ನು ಮತ್ತು ಪ್ರಾಮುಖ್ಯತೆಯನ್ನು ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಾಗ ಏಕೆ ತೋರುತ್ತಿಲ್ಲ ಎಂದು ಅವರು ಆಟಗಾರರ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಆಟಗಾರರು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲು ಪ್ರೇರೇಪಿತರಾಗಿದ್ದಾರೆಯೇ ಅಥವಾ ಕೇವಲ ಐಪಿಎಲ್ ಒಪ್ಪಂದಗಳಿಗೆ ಮಾತ್ರ ಅವರು ಬದ್ಧರೇ? ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬುಮ್ರಾಗೆ ವಿನಾಯಿತಿ ನೀಡಿದ ವಿಹಾರಿ, ಬಿಳಿಯ ಚೆಂಡಿನ ಆಟಗಾರರಿಗೆ ತರಾಟೆ
ಈ ಬಿರುಸಿನ ಚರ್ಚೆಯ ನಡುವೆಯೂ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದ ವಿಹಾರಿ ತ್ಪಪೂರ್ವಕವಾಗಿ ಅವರ ಮೇಲಿನ ಕಮೆಂಟ್ ಅನ್ನು ಸಡಿಲಗೊಳಿಸಿದರು. ಬುಮ್ರಾ ಇಂಜುರಿಯಿಂದ ಮರಳಿದ್ದಾರೆ ಹಾಗೂ ಆಟದ ಎಲ್ಲಾ ಮೂರು (ಟೆಸ್ಟ್, ಏಕದಿನ, ಟಿ20) ಸ್ವರೂಪಗಳಲ್ಲೂ ಆಡುವುದರಿಂದ ಬಿಸಿಸಿಐ ಅವರ ಕಾರ್ಯಭಾರದ ಮೇಲೆ ನಿಗಾವಹಿಸುವುದು ಸಹಜ ಹಾಗೂ ಪ್ರಮುಖ ಟೂರ್ನಿಗಳಿಗೆ ಅವರು ಫಿಟ್ ಆಗಿರುವುದು ಅತ್ಯಗತ್ಯ ಎಂದು ವಿಹಾರಿ ಹೇಳಿದರು. ಆದರೆ, ಕೇವಲ ಬಿಳಿಯ ಚೆಂಡಿನ ಕ್ರಿಕೆಟ್ (ಏಕದಿನ ಹಾಗೂ ಟಿ20) ಮಾತ್ರ ಆಡುವ ಆಟಗಾರರು ಏಕೆ ಯಾವಾಗಲೂ ಫಿಟ್ ಆಗಿರುವುದಿಲ್ಲ? ಇದು ನಾಯಕ ಮತ್ತು ಕೋಚ್ಗೆ ತಂಡದ ಸಮತೋಲನ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ ಹಾಗೂ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಹನುಮ ವಿಹಾರಿ ಬಿಸಿಸಿಐ ಮುಂದಿಟ್ಟಿರುವ ಪ್ರಶ್ನೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.


















