ಬೆಂಗಳೂರು : ನಗರದಲ್ಲಿ ಹೆಬ್ಬಾಳ ಪೊಲೀಸರು ಭಾರೀ ಡ್ರಗ್ಸ್ ಜಾಲವನ್ನು ಭೇದಿಸಿದ್ದು, ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂತಾರಾಜ್ಯ ಡ್ರಗ್ಸ್ ನೆಟ್ವರ್ಕ್ನ್ನು ಪತ್ತೆ ಹಚ್ಚಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಎಂಡಿಎಂಎ ಡ್ರಗ್ಸ್ ಸಾಗಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ವಿರುದ್ಧ ಕಾರ್ಯಾಚರಣೆ ನಡೆಸಿದ ಹೆಬ್ಬಾಳ ಪೊಲೀಸರು, ಒಟ್ಟು 35 ಕೋಟಿ ರೂಪಾಯಿ ಮೌಲ್ಯದ 17 ಕೆಜಿ 400 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದು, ಆರೋಪಿಗಳು ಮೂರು ಲೇಯರ್ಗಳಲ್ಲಿ ಡ್ರಗ್ಸ್ ಸಾಗಾಟ ಮತ್ತು ಮಾರಾಟ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೆಹಲಿಯಿಂದ ರೈಲು-ವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರಲಾಗುತ್ತಿದ್ದು, ಸೀರೆ, ಐರನ್ ಮಾಡಲು ಬಳಸುವ ಟೇಬಲ್ ಹಾಗೂ ಚೇರ್ಗಳ ಒಳಭಾಗದಲ್ಲಿ ಅಡಗಿಸಿ ಗಿಫ್ಟ್ ಮಾದರಿಯಲ್ಲಿ ಪ್ಯಾಕ್ ಮಾಡಿ ಸಾಗಾಟ ಮಾಡಲಾಗುತ್ತಿತ್ತು. ಬೆಂಗಳೂರಿಗೆ ಡ್ರಗ್ಸ್ ತಲುಪಿದ ಬಳಿಕ ಅದನ್ನು ಹೆಬ್ಬಾಳ ಭಾಗಕ್ಕೆ ತರಲಾಗುತ್ತಿತ್ತು.

ಹೋಂಡೈ ವೆನ್ಯೂ ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಟಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮೊದಲ ಹಂತದಲ್ಲಿ 4 ಕೆಜಿ 300 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸರ್ಜಾಪುರದ ಮನೆಯೊಂದರಲ್ಲಿ ಇನ್ನಷ್ಟು ಡ್ರಗ್ಸ್ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆ, ಬೆಂಗಳೂರು ಮೂಲದ ಪೆಡ್ಲರ್ ಮಹಮ್ಮದ್ ಮನ್ಸೂರ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮನ್ಸೂರ್ ಮನೆಯಲ್ಲಿ 10 ಕೆಜಿ ಎಂಡಿಎಂಎ ಪತ್ತೆಯಾಗಿದೆ.

ಮುಂದಿನ ತನಿಖೆಯಲ್ಲಿ ಮತ್ತೋರ್ವ ಆರೋಪಿ ಅಬ್ದುಲ್ ಸಮಾದ್ ನಿವಾಸದಲ್ಲೂ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೆಣ್ಣೂರಿನಲ್ಲಿರುವ ಆತನ ಮನೆಯಲ್ಲಿ ದಾಳಿ ನಡೆಸಿದಾಗ 3.5 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಈ ಮೂಲಕ ಒಟ್ಟು 17 ಕೆಜಿ 400 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದು, ಅಂದಾಜು 35 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ.

ಪ್ರಕರಣದಲ್ಲಿ ಬಂಧಿತರಾದವರಲ್ಲಿ ದೆಹಲಿಯ ಡೀಲರ್ಗಳಾದ ಸೆನೆಗಲ್ ಮೂಲದ ಡನ್ಫಾ ಗೆರಾಲ್ಡ್, ತಾಂಜೇನಿಯಾ ಮೂಲದ ಮೆಗ್ರಾತ್ ಹಾಗೂ ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ ಸೇರಿದ್ದಾರೆ. ಅಲ್ಲದೆ ದೆಹಲಿ ಮೂಲದ ಟ್ರಾನ್ಸ್ಪೋರ್ಟರ್ಗಳಾದ ರೀನಾ ಯಾದವ್, ದೆಬಶಿಶ್ ಬ್ಯಾನರ್ಜಿ ಮತ್ತು ದೀರಜ್ ಬಂಧಿತರಾಗಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಮಂಗಳೂರು ಮೂಲದ ಬೆಂಗಳೂರು ನಿವಾಸಿಗಳಾದ ಮಹಮ್ಮದ್ ಮನ್ಸೂರ್ ಹಾಗೂ ಅಬ್ದುಲ್ ಸಮಾದ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ನಗರದ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ಬಿ.ಎಸ್. ನೇಮಗೌಡ ಅವರ ಮೇಲ್ವಿಚಾರಣೆಯಲ್ಲಿ, ಜೆ.ಸಿ ನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ACP) ಕೆ.ಎಸ್ ತನ್ವೀರ್ ಅವರ ಮಾರ್ಗದರ್ಶನದಲ್ಲಿ, ಹೆಬ್ಬಾಳ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭೈರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆ ಯಶಸ್ವಿಯಾಗಿದೆ.
ಇದನ್ನೂ ಓದಿ : ನೇತ್ರಾವತಿಯಲ್ಲಿ ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು



















