ಹೈದರಾಬಾದ್ : ತೆಲುಗು ನೆಲದಲ್ಲಿ ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಹೈದರಾಬಾದ್ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಟಾಕ್ಸಿಕ್ನ ಬಿಡುಗಡೆ ಪೂರ್ವ ಅದ್ಧೂರಿ ಸಮಾರಂಭದಲ್ಲಿ ಧ್ವನಿವರ್ಧಕ ಪೆಟ್ಟಿಗೆಗಳನ್ನು (ಸ್ಪೀಕರ್ಸ್) ಅಳವಡಿಸಲಾಗಿದ್ದ ಬೃಹತ್ ಕಬ್ಬಿಣದ ವ್ಯವಸ್ಥೆಯು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಆಕಸ್ಮಿಕ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಕಾರ್ಯಕ್ರಮದಲ್ಲಿದ್ದ ಸಾವಿರಾರು ಅಭಿಮಾನಿಗಳಲ್ಲಿ ಕೆಲಕಾಲ ಆತಂಕ ಮತ್ತು ಕಾಲ್ತುಳಿತದ ಭೀತಿ ಆವರಿಸಿತ್ತು. ಘಟನೆ ಸಂಭವಿಸಿದ ತಕ್ಷಣವೇ ನಟ ಯಶ್ ತಮ್ಮ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಭಿಮಾನಿಗಳು ಕಂಬ ಹತ್ತಿದ ಕಾರಣ ದುರ್ಘಟನೆ:
ಶನಿವಾರ ರಾತ್ರಿ ನಡೆದ ಈ ಕಾರ್ಯಕ್ರಮಕ್ಕೆ ಯಶ್ ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ನೆರೆದಿದ್ದರು. ಯಶ್ ವೇದಿಕೆಯ ಮೇಲೆ ಮೈಕ್ ಹಿಡಿದು ಪ್ರೀತಿಯಿಂದ ಮಾತನಾಡುತ್ತಿದ್ದ ಸಂದರ್ಭದಲ್ಲೇ, ಸೌಂಡ್ ಸಿಸ್ಟಮ್ಗಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಕಂಬಗಳ ಮೇಲಿದ್ದ ಭಾರವಾದ ಧ್ವನಿವರ್ಧಕ ವ್ಯವಸ್ಥೆ ಜನರಿದ್ದ ಭಾಗಕ್ಕೆ ಕುಸಿದು ಬಿತ್ತು.
ಸ್ಥಳೀಯ ಪ್ರತ್ಯಕ್ಷದರ್ಶಿಗಳು ಮತ್ತು ಕಾರ್ಯಕ್ರಮದ ದೃಶ್ಯಾವಳಿಗಳ ಪ್ರಕಾರ, ಯಶ್ ಅವರನ್ನು ಹತ್ತಿರದಿಂದ ನೋಡುವ ಕಾತುರದಲ್ಲಿದ್ದ ಕೆಲ ವಿದ್ಯಾರ್ಥಿಗಳು ಸ್ಪೀಕರ್ ಅಳವಡಿಸಿದ್ದ ಕಂಬಗಳ ಮೇಲೆ ಹತ್ತಿದ್ದರು. ಕಂಬಗಳ ಮೇಲಿನ ಅತಿಯಾದ ಭಾರದಿಂದಾಗಿ ಸಮತೋಲನ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಂಬುಲೆನ್ಸ್ ಮೂಲಕ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಆಘಾತಕ್ಕೆ ಯುವತಿಯೊಬ್ಬರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರಿಗೂ ಅಗತ್ಯ ತುರ್ತು ಚಿಕಿತ್ಸೆ ಒದಗಿಸಲಾಗಿದೆ.
ಭಾಷಣ ನಿಲ್ಲಿಸಿ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ನಟ ಯಶ್
ಜನಸ್ತೋಮದ ಮಧ್ಯೆ ಸೌಂಡ್ ಸಿಸ್ಟಮ್ ಕುಸಿದು ಗದ್ದಲ ಸೃಷ್ಟಿಯಾಗುತ್ತಿದ್ದಂತೆಯೇ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಯಶ್ ತಮ್ಮ ಭಾಷಣವನ್ನು ತಕ್ಷಣವೇ ಸ್ಥಗಿತಗೊಳಿಸಿದರು. ವೇದಿಕೆಯಿಂದಲೇ ಆಯೋಜಕರನ್ನು ಕರೆದು ಗಾಯಗೊಂಡವರ ಸ್ಥಿತಿ ಹೇಗಿದೆ ಎಂದು ಕಾಳಜಿಯಿಂದ ವಿಚಾರಿಸಿದರು. ಅಭಿಮಾನಿಗಳು ಆತಂಕ ಪಡಬಾರದು ಮತ್ತು ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಿದ ಯಶ್, ತಕ್ಷಣವೇ ಪರಿಸ್ಥಿತಿಯನ್ನು ತಿಳಿಗೊಳಿಸಲು ಸೂಚಿಸಿದರು.
ಇದೇ ವೇಳೆ ಮೈದಾನದ ಮತ್ತೊಂದು ಭಾಗದಲ್ಲಿ ಕೆಲ ಯುವಕರು ತಾತ್ಕಾಲಿಕ ರಚನೆಗಳ ಮೇಲೆ ಹತ್ತಿರುವುದನ್ನು ಗಮನಿಸಿದ ಅವರು, ಅಪಾಯಕಾರಿ ಸ್ಥಳಗಳಿಂದ ಕೂಡಲೇ ಕೆಳಗಿಳಿಯುವಂತೆ ಧ್ವನಿವರ್ಧಕದಲ್ಲೇ ಮನವಿ ಮಾಡಿದರು. ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ನೆರವು ತಲುಪಿದೆಯೇ ಮತ್ತು ಸ್ಥಳದಲ್ಲಿದ್ದವರೆಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಯಶ್ ತಮ್ಮ ಮಾತು ಮುಂದುವರಿಸಿದರು.
ಸುರಕ್ಷತಾ ಲೋಪದ ಚರ್ಚೆ
ವಿಶ್ವವಿದ್ಯಾಲಯದ ಆವರಣದಲ್ಲಿ ಜನಸಂದಣಿ ಮಿತಿಮೀರಿದ್ದರಿಂದ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸಂಭಾವ್ಯ ಅಪಾಯಗಳನ್ನು ತಡೆಯಲು ಪೊಲೀಸರು ಎಚ್ಚರಿಕೆ ನೀಡಿದ್ದರು. ವೇದಿಕೆಯ ಮುಂಭಾಗದಿಂದ ಹಿಂದೆ ಸರಿಯುವಂತೆ ಹಾಗೂ ಕಂಬಗಳನ್ನು ಹತ್ತದಂತೆ ಧ್ವನಿವರ್ಧಕಗಳ ಮೂಲಕ ಪೊಲೀಸರು ಸೂಚನೆ ನೀಡಿದ್ದರೂ, ಉತ್ಸಾಹದಲ್ಲಿದ್ದ ಅಭಿಮಾನಿಗಳು ಅದನ್ನು ನಿರ್ಲಕ್ಷಿಸಿ ಕಂಬಗಳ ಮೇಲೆ ಹತ್ತಿದ್ದರು ಎನ್ನಲಾಗಿದೆ.
ಗ್ಯಾಂಗ್ಸ್ಟರ್ ಆಕ್ಷನ್ ಕಥಾಹಂದರ ಹೊಂದಿರುವ ‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನದಾಸ್ ನಿರ್ದೇಶಿಸಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಆಗಸ್ಟ್ 26ರಂದು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಇಂತಹ ಬೃಹತ್ ಚಲನಚಿತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ನಿಯಂತ್ರಣಕ್ಕೂ ಮೀರಿದ ಜನಸ್ತೋಮವನ್ನು ಸರಿದೂಗಿಸುವಲ್ಲಿ ಆಯೋಜಕರ ಸುರಕ್ಷತಾ ವ್ಯವಸ್ಥೆಗಳು ವಿಫಲವಾಗುತ್ತಿರುವುದು ಸಾರ್ವಜನಿಕರಲ್ಲಿ ಮತ್ತೆ ದೊಡ್ಡ ಮಟ್ಟದ ಕಳವಳ ಮತ್ತು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಉಪನಾಯಕನಾಗಿ ದುಲೀಪ್ ಟ್ರೋಫಿಗೆ ಪದಾರ್ಪಣೆ ; 6 ಎಸೆತಗಳಲ್ಲಿ 8 ರನ್ಗೆ ಸೂರ್ಯವಂಶಿ ಔಟ್



















