ಉಡುಪಿ : 12 ವರ್ಷಕ್ಕೊಮ್ಮೆ ನೆಡೆಯುವ ಮಹಾಮಸ್ತಕಾಭಿಷೇಕಕ್ಕೆ ದಿನಾಂಕ ನಿಗದಿಯಾಗಿದೆ. ಕಾರ್ಕಳದ ದಾನಶಾಲೆಯ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಸಮಿತಿಯ ಕಛೇರಿ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಈ ಮಹತ್ವದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ ಎಂ.ಎನ್. ರಾಜೇಂದ್ರ ಕುಮಾರ್ ಅವರು ದಿನಾಂಕವನ್ನು ಪ್ರಕಟಿಸಿದ್ದು, ಮಹಾಮಸ್ತಕಾಭಿಷೇಕವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಲಿದೆ.
ವಿಶ್ವದ ಅತೀ ಎತ್ತರದ ಗೊಮ್ಮಟೇಶ್ವರ ಹಾಸನದ ಶ್ರವಣಬೆಳಗೋಳದಲ್ಲಿದ್ದರೆ, ಎರಡನೆಯದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿದೆ. ಈ ಒಂದು ಬಾಹುಬಲಿ ವಿಗ್ರಹವನ್ನು 1432ರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನೆಡೆಯುತ್ತಿದೆ. ಈ ಹಿಂದೆ 1990, 2002 ಹಾಗೂ 2015ರಲ್ಲಿ ಮಸ್ತಕಾಭಿಷೇಕ ನೆರೆವೆರಿದ್ದು, 2027ರ ಫೆಬ್ರವರಿ 18 ರಿಂದ 28ರ ತನಕ ಕಾರ್ಕಳದ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಅದ್ದೂರಿಯಾಗಿ ನೆಡೆಯಲಿದೆ.
10 ದಿನಗಳ ಕಾಲ ನಡೆಯುವ ಈ ದೈವಿಕ ಸಂಭ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಸರ್ಕಾರಕ್ಕೆ 82 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಈಗಾಗಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಇನ್ನಷ್ಟು ಅನುದಾನಕ್ಕೆ ಸಮುದಾಯ ಕಾಯುತ್ತಿದೆ. ಒಟ್ಟಿನಲ್ಲಿ ಜೈನರ ಪವಿತ್ರ ತೀರ್ಥಕ್ಷೇತ್ರ ಕಾರ್ಕಳ ಮಹಾಮಜ್ಜನಕ್ಕೆ ಅಣಿಯಾಗಿದ್ದು, ಸಕಲ ಸಿದ್ಧತೆಗಳು ಈಗಿನಿಂದಲೇ ಪ್ರಾರಂಭವಾಗಿದೆ.
ಇದನ್ನೂ ಓದಿ : ಮಕ್ಕಳ ಮೊಬೈಲ್ ವ್ಯಸನ ತಡೆಗೆ ಮೇ 14ರಿಂದ ಪುತ್ತಿಗೆ ಮಠದಲ್ಲಿ ವಿಶೇಷ ಶಿಬಿರ!



















