ನವದೆಹಲಿ : ಬಿಸಿಲ ಬೇಗೆಯಿಂದ ಬೆಂದು ಹೋಗಿರುವ ಭಾರತೀಯರಿಗೆ ಸದ್ಯಕ್ಕೆ ವರುಣದೇವ ಕೃಪೆ ತೋರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದ ಅನ್ನದಾತರು, ಕೋಟ್ಯಂತರ ಜನರು ಕಾಯುತ್ತಿರುವ ನೈಋತ್ಯ ಮುಂಗಾರು ಮಾರುತಗಳ ಆಗಮನವು ಮತ್ತೊಮ್ಮೆ ವಿಳಂಬವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈಗಾಗಲೇ ಮೂರು ಬಾರಿ ಮುಂಗಾರು ಪ್ರವೇಶದ ದಿನಾಂಕವನ್ನು ಮುಂದೂಡಿರುವ ಹವಾಮಾನ ಇಲಾಖೆಯು, ಜೂನ್ 3 ರ ಮೊದಲು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿಲ್ಲ ಮತ್ತು ಈ ದಿನಾಂಕ ಇನ್ನೂ ಮುಂದೆ ಹೋಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದು, ದೇಶಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿದೆ.
ಉಲ್ಟಾ ಹೊಡೆದ ಲೆಕ್ಕಾಚಾರ
ವಿಶೇಷವೆಂದರೆ, ಹವಾಮಾನ ಇಲಾಖೆಯು ಆರಂಭದಲ್ಲಿ ಈ ಬಾರಿ ಮುಂಗಾರು ಎಂದಿಗಿಂತ ಮುಂಚಿತವಾಗಿ ಅಂದರೆ ಮೇ 26 ರಂದೇ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಅಂದಾಜಿಸಿತ್ತು. ಇದು ಜನರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ, ಮೇ 26 ರಂದು ಯಾವುದೇ ಮಳೆ ಬಾರದಿದ್ದಾಗ, ಈ ದಿನಾಂಕವನ್ನು ಮೇ 28ಕ್ಕೆ ಮುಂದೂಡಲಾಯಿತು. ತದನಂತರ ವಾಡಿಕೆಯಂತೆ ಜೂನ್ 1ಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇಂದಿಗೂ ಮುಂಗಾರು ಪ್ರವೇಶಿಸದ ಕಾರಣ ಈಗ ಜೂನ್ 3ರ ನಂತರವಷ್ಟೇ ಮುಂಗಾರು ಮಾರುತಗಳು ಕೇರಳ ತೀರಕ್ಕೆ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಗಾರಿಗೆ ಸೈಕ್ಲೋನ್ ಭೀತಿಯೇ ಅಡ್ಡಿ
ಕೇರಳ ಕರಾವಳಿಯಲ್ಲಿ ಮುಂಗಾರು ಆರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸಲು ಹವಾಮಾನ ಇಲಾಖೆಗೆ ಮೂರು ಪ್ರಮುಖ ಅಂಶಗಳು ಹೊಂದಾಣಿಕೆ ಆಗಬೇಕಾಗುತ್ತದೆ. ಕೇರಳದ ಶೇ.60ಕ್ಕೂ ಹೆಚ್ಚು ಹವಾಮಾನ ಕೇಂದ್ರಗಳಲ್ಲಿ ಸತತ ಮಳೆಯಾಗಬೇಕು, ಅರಬ್ಬಿ ಸಮುದ್ರದಲ್ಲಿ ಪಶ್ಚಿಮ ಮಾರುತಗಳು ನಿರ್ದಿಷ್ಟ ವೇಗದಲ್ಲಿ ಬೀಸಬೇಕು ಮತ್ತು ಉಪಗ್ರಹಗಳ ಮೂಲಕ ದಟ್ಟವಾದ ಮೋಡಗಳ ಮುಸುಕು ಪತ್ತೆಯಾಗಬೇಕು. ಸದ್ಯಕ್ಕೆ ಕೇರಳ ಮತ್ತು ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದ್ದರೂ, ಮಾರುತಗಳ ವೇಗ ತೀರಾ ದುರ್ಬಲವಾಗಿದೆ. ಇದಕ್ಕೆ ಪೂರಕವಾಗಿ ಬಂಗಾಳ ಕೊಲ್ಲಿಯಲ್ಲಿ ಇತ್ತೀಚೆಗೆ ಸೃಷ್ಟಿಯಾದ ಚಂಡಮಾರುತವು (ಸೈಕ್ಲೋನ್) ಮುಂಗಾರು ಮಾರುತಗಳ ದಿಕ್ಕು ಮತ್ತು ವೇಗವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಜೂನ್ 1ರ ನಂತರ ಗಾಳಿಯ ವೇಗ ಹೆಚ್ಚಾಗುವ ನಿರೀಕ್ಷೆ ಇದೆಯಾದರೂ, ಹವಾಮಾನದಲ್ಲಿ ನಿರಂತರ ಏರುಪೇರು ಉಂಟಾಗುತ್ತಿದೆ.
ಎಲ್ ನಿನೋ ಎಫೆಕ್ಟ್: ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ
ಸಾಮಾನ್ಯವಾಗಿ ಜೂನ್ ಆರಂಭದಲ್ಲಿ ಕೇರಳ ಪ್ರವೇಶಿಸುವ ಮುಂಗಾರು ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಜೂನ್ 8ರ ಒಳಗೆ ಮುಂಗಾರು ಪ್ರವೇಶಿಸಿದರೆ ಅದನ್ನು ತೀರಾ ತಡ ಎಂದು ಪರಿಗಣಿಸಲಾಗುವುದಿಲ್ಲ ಎಂದು ಐಎಂಡಿ ಸ್ಪಷ್ಟಪಡಿಸಿದೆ. ಆದರೆ, ಈಗಾಗಲೇ ದೇಶದ ಬಹುತೇಕ ಭಾಗಗಳು ದಾಖಲೆ ಮಟ್ಟದ ತಾಪಮಾನದಿಂದ ತತ್ತರಿಸುತ್ತಿರುವುದರಿಂದ ಈ ವಿಳಂಬ ಜನರನ್ನು ಕಂಗಾಲು ಮಾಡಿದೆ. ಇದರ ನಡುವೆ, ಪೆಸಿಫಿಕ್ ಮಹಾಸಾಗರದಲ್ಲಿ ಜಾಗತಿಕ ಹವಾಮಾನ ಬದಲಾವಣೆ ತರುವ ‘ಎಲ್ ನಿನೋ’ (El Nino) ಪ್ರಭಾವ ತೀವ್ರಗೊಳ್ಳುತ್ತಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.
ಈ ‘ಎಲ್ ನಿನೋ’ ಎಫೆಕ್ಟ್ನಿಂದಾಗಿ 2026ರ ಸಾಲಿನಲ್ಲಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಏಪ್ರಿಲ್ನಲ್ಲಿ ಶೇ.92ರಷ್ಟು ಮಳೆಯಾಗಬಹುದು ಎಂದು ಅಂದಾಜಿಸಲಾಗಿದ್ದರೂ, ಈಗ ಅದನ್ನು ಶೇ.90ಕ್ಕೆ ಇಳಿಸಲಾಗಿದೆ. ವಿಶೇಷವಾಗಿ ಮುಂಗಾರು ಹಂಗಾಮಿನ ದ್ವಿತೀಯಾರ್ಧದಲ್ಲಿ ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ಜನಸಾಮಾನ್ಯರು ಮತ್ತು ಕೃಷಿ ಚಟುವಟಿಕೆ ಆರಂಭಿಸಲು ಕಾಯುತ್ತಿರುವ ರೈತರು ಮಳೆಗಾಗಿ ಇನ್ನೂ ಕೆಲವು ದಿನಗಳ ಕಾಲ ಆಗಸದೆಡೆಗೆ ಮುಖ ಮಾಡಿ ಕಾಯುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ : ಬಿಜೆಪಿಗೆ ಅಣ್ಣಾಮಲೈ ಗುಡ್ಬೈ? ತಲೆಎತ್ತಿದ ಪೋಸ್ಟರ್ಗಳು.. ಹೊಸ ಪಕ್ಷದ ಸುಳಿವು!


















