ಕೊಪ್ಪಳ : ಜಿಲ್ಲೆಯ ಹಿಟ್ನಾಳ ಹೋಬಳಿಯ ನಾರಾಯಣಪೇಟೆ ಮತ್ತು ರಾಜಾರಾಮಪೇಟೆ ಗ್ರಾಮ ವ್ಯಾಪ್ತಿಯಲ್ಲಿ ಇರುವ 3 ರೆಸಾರ್ಟ್ಗಳ ವಿರುದ್ಧ ಸರ್ಕಾರಿ ಜಮೀನು ಒತ್ತುವರಿಯ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮೂರು ರೆಸಾರ್ಟ್ಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಶ್ರೀ ವಲ್ಲಭಚಂದ್ರ ಡಿ. ವೆಂಕಟಪತಿರಾಜು ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಾನೂನುಬಾಹಿರವಾಗಿ ತಮ್ಮ ಜಮೀನುಗಳ ಜೊತೆಗೆ ಸರ್ಕಾರಿ ಪರಂಪೋಕ ಜಮೀನು, ಹಳ್ಳ ಮತ್ತು ತುಂಗಭದ್ರಾ ನದಿ ಪಾತ್ರದ ‘ಬಿ’ ಖರಾಬು ಜಮೀನನ್ನು ಒತ್ತುವರಿ ಮಾಡಿಕೊಂಡು ಹಂಪಿ ಬೌಲ್ಡರ್ಸ್, ಹಂಪಿ ವಿಸ್ಕರ್ ಮತ್ತು ಹಂಪಿ ಫೆದರ್ ಎಂಬ ಮೂರು ರೆಸಾರ್ಟ್ಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಟ್ಟು ಸುಮಾರು 40 ರಿಂದ 50 ಎಕರೆ ಭೂಮಿ ಒತ್ತುವರಿ ಆಗಿದೆ ಎನ್ನಲಾಗಿದೆ.
ಈ ಸಂಬಂಧ ಗುರುವಾರ (ಏ.23) ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ರೆಸಾರ್ಟ್ಗಳಿಗೆ ಭೇಟಿ ನೀಡಿ, ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಣಾಪೂರ ಗ್ರಾಮದ ವಿಜಯಕುಮಾರ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ರೆಸಾರ್ಟ್ ಮಾಲೀಕರಿಗೆ ಪರೋಕ್ಷ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ಸರ್ವೆಯರ್ಗಳಾದ ನಾಗಿರೆಡ್ಡಿ, ವೀರಯ್ಯ, ಆರ್ಐ ಬಸವರಾಜ ಬನ್ನಿಕೊಪ್ಪ ಹಾಗೂ ಗ್ರಾಮಾಧಿಕಾರಿ ಸಾವಿತ್ರಿ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದಲ್ಲದೆ, ಹಿಂದಿನ ಜಿಲ್ಲಾಧಿಕಾರಿ ನಳಿನ್ ಅತುಲ್, ಉಪ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ ಮತ್ತು ತಹಸೀಲ್ದಾರ್ ವಿಠಲ ಚೌಗಲಾ ವಿರುದ್ಧವೂ ದೂರು ಸಲ್ಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.
ಇದನ್ನೂ ಓದಿ : ಐಸಿಯುನಲ್ಲಿದ್ದ ಹಸುಗೂಸು ಇರುವೆ ಕಚ್ಚಿ ಸಾವು? ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ!



















