ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಕೆಂಗೇರಿ ಉಪ ವಿಭಾಗದ ಕಂದಾಯ ಇಲಾಖೆಯಲ್ಲಿ ತಂತ್ರಾಂಶದ ಲೋಪವನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಇ-ಖಾತಾ ದಂಧೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ದೂರು ಸಲ್ಲಿಸಿ, ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೇವಲ 2,400 ಚದರ ಅಡಿ ವಿಸ್ತೀರ್ಣದ ಆಸ್ತಿಗೆ ನಕಲಿ ಇ-ಪಿಐಡಿ (e-PID) ಸಂಖ್ಯೆ 2562330272 ಸೃಷ್ಟಿಸಿ, ದಾಖಲೆಗಳಲ್ಲಿ ಅದನ್ನು 6,600 ಚದರ ಅಡಿ ‘A’ ಖಾತಾ ಆಸ್ತಿಯಾಗಿ ಪರಿವರ್ತಿಸಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಕಚೇರಿಯ ಕ್ವಾಲಿಟಿ ಚೆಕ್ಕಿಂಗ್ (Q.C.) ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಕೆಲಸ ಪೂರ್ಣಗೊಂಡ ತಕ್ಷಣ ಖಾತಾ ಪಟ್ಟಿಯಿಂದ ದಾಖಲೆಯನ್ನು ಅಳಿಸುವ ತಂತ್ರ ಬಳಸಲಾಗಿದೆ ಎಂದು ದೂರಿನಲ್ಲಿ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಇನ್ನು, ಸಹಾಯಕ ಕಂದಾಯಾಧಿಕಾರಿ (ARO) ರಂಗಸ್ವಾಮಿ ಅವರ ಪಾಸ್ವರ್ಡ್ ಬಳಸಿಕೊಂಡು ಗುತ್ತಿಗೆ ಆಪರೇಟರ್ ಲಕ್ಷ್ಮಿ ಹಾಗೂ ಗುಮಾಸ್ತೆ ರಮ್ಯ ಅಕ್ರಮ ನಡೆಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಕಚೇರಿಯಲ್ಲೇ ಬೀಡುಬಿಟ್ಟು ಕಾರ್ಯನಿರ್ವಹಿಸುತ್ತಿದ್ದ ದಲ್ಲಾಳಿ ಕರಿಯಂಕ ನಾಗರಾಜ್ ನೇತೃತ್ವದ ಜಾಲವೂ ಈ ದಂಧೆಯಲ್ಲಿ ಸಕ್ರಿಯವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳು ಎನ್. ವೆಂಕಟೇಶ್ ಅವರ ಹೆಸರಿಗೆ 6,600 ಚದರ ಅಡಿ ಆಸ್ತಿಗೆ ನಕಲಿ ಇ-ಪಿಐಡಿ ಸೃಷ್ಟಿಸಿ ‘B’ ವಹಿಯಿಂದ ‘A’ ಖಾತಾ ಮಾಡಿಕೊಟ್ಟಿರುವುದು ದಾಖಲೆ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಆದರೆ, ಮೂಲ ‘B’ ವಹಿ ದಾಖಲೆಯಲ್ಲಿ ಮಾಲೀಕರ ಹೆಸರು ಎಂ.ಎನ್. ವೆಂಕಟೇಶ್ ಆಗಿದ್ದು, ಆಸ್ತಿಯ ವಿಸ್ತೀರ್ಣ ಕೇವಲ 2,400 ಚದರ ಅಡಿ ಮಾತ್ರವಾಗಿದೆ ಎಂದು ದೂರಿನಲ್ಲಿ ಎನ್.ಆರ್ ರಮೇಶ್ ವಿವರಿಸಿದ್ದಾರೆ.
ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ 2ನೇ ಅಡ್ಡರಸ್ತೆಯ ವಿಳಾಸವನ್ನು ಬಳಸಿ ಈ ಅಕ್ರಮ ಎಸಗಲಾಗಿದೆ ಎನ್ನಲಾಗಿದ್ದು, ತಂತ್ರಾಂಶದ ಲೋಪವನ್ನು ಬಳಸಿಕೊಂಡು ನಕಲಿ ಇ-ಖಾತಾಗಳನ್ನು ಸೃಷ್ಟಿಸಿ, ಬಳಿಕ ದಾಖಲೆಗಳನ್ನು ಅಳಿಸುವ ಹೈಟೆಕ್ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಜಿಬಿಎ ಮುಖ್ಯ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ಬೆಂಗಳೂರಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ; ಮನೆ-ಮನೆಗೆ ಬಿಎಲ್ಒ ಭೇಟಿ!



















