ಹಾಸನ: ರಾಜ್ಯಾದ್ಯಂತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿ ನಡೆಯುತ್ತಿದೆ. ಈ ಹಿನ್ನಲೆ ಸರ್ಕಾರಿ ನೌಕರರಿಗೆ ಸಮೀಕ್ಷೆಯ ಜವಾಬ್ದಾರಿ ಹಂಚಿಕೆಯಾಗಿದ್ದು, ಹಲವೆಡೆ ಗಣತಿದಾರರಿಗೆ ಬೀದಿ ನಾಯಿಗಳ ಹಾವಳಿಗೆ ಹೆದರುತ್ತಿದ್ದಾರೆ. ಇಂತಹದೊಂದು ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಂಡು ಬಂದಿದೆ. ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿದ್ದು, ಶಿಕ್ಷಕಿಯ ರಕ್ಷಣೆಗೆ ಬಂದ ಅವರ ಪತಿ ಸೇರಿ ಏಳು ಸಾರ್ವಜನಿಕರಿಗೆ ಗಾಯ ಮಾಡಿವೆ.
ಶಿಕ್ಷಕಿ ಚಿಕ್ಕಮ್ಮಗೆ ನೀಡಿದ್ದ ಸಮೀಕ್ಷೆ ಅವಧಿ ಇಂದು ಕೊನೆಯಾಗಿತ್ತು. ಅವರಿಗೆ ನೀಡಿದ್ದ ಮನೆಗಳ ಪೈಕಿ 3 ಮನೆಗಳ ಸಮೀಕ್ಷೆ ಬಾಕಿ ಇತ್ತು. ನವೀನ್ ಎಂಬುವರ ಮನೆ ಸಮೀಕ್ಷೆಗೆ ಚಿಕ್ಕಮ್ಮ ತೆರಳಿದ್ದ ವೇಳೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ. ಪತ್ನಿ ರಕ್ಷಿಸಲು ಮುಂದಾದ ಪತಿ ಶಿವಕುಮಾರ್ಗೂ ನಾಯಿಗಳು ಕಚ್ಚಿವೆ.
ಇವರ ರಕ್ಷಣೆಗೆ ಬಂದಂತಹ ಧರ್ಮ, ಪೃಥ್ವಿ ಮತ್ತು ಸಚಿನ್ ಸೇರಿದಂತೆ 7 ಜನರ ಮೇಲೂ ದಾಳಿ ಮಾಡಿವೆ. ಅಷ್ಟೇ ಅಲ್ಲದೆ ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕ ಕಿಶನ್ ಗೂ ನಾಯಿಗಳು ಕಚ್ಚಿವೆ. ಸದ್ಯ ತಾಲೂಕಾಸ್ಪತ್ರೆಯಲ್ಲಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.



















