ಬೆಂಗಳೂರು : ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು 2014ರ ಐಪಿಎಲ್ ಟೂರ್ನಿಯಲ್ಲಿ ತಾವು ಎದುರಿಸಿದ್ದ ಸತತ ಶೂನ್ಯ ಸುತ್ತುವಿಕೆಯ ಕಹಿ ಅನುಭವವನ್ನು ನೆನಪಿಸಿಕೊಳ್ಳುವ ಮೂಲಕ, ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮರಳಿ ಫಾರ್ಮ್ಗೆ ಮರಳಲು ಹೇಗೆ ಸ್ಫೂರ್ತಿ ತುಂಬಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳುವಲ್ಲಿ ಅಭಿಷೇಕ್ ಅವರ 52 ರನ್ಗಳ ಮ್ಯಾಚ್-ವಿನ್ನಿಂಗ್ ಆಟ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಟೂರ್ನಿಯ ಆರಂಭದಲ್ಲಿ ಅವರು ಅನುಭವಿಸಿದ ವೈಫಲ್ಯ ಮತ್ತು ಅದರಿಂದ ಹೊರಬರಲು ಗಂಭೀರ್ ನೀಡಿದ ಬೆಂಬಲದ ಕಥೆ ಇದೀಗ ಕ್ರೀಡಾ ವಲಯದ ಗಮನ ಸೆಳೆದಿದೆ.
ಸತತ ಮೂರು ಶೂನ್ಯ ಮತ್ತು ಗಂಭೀರ್ ನೀಡಿದ ಸ್ಫೂರ್ತಿ
ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಮೂರು ಇನ್ನಿಂಗ್ಸ್ಗಳಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಜಿಯೋ ಸ್ಟಾರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಗಂಭೀರ್, “2014ರ ಐಪಿಎಲ್ನಲ್ಲಿ ನಾನೇ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎದುರಿಸಿದ್ದೆ. ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದೆ, ನಾಲ್ಕನೇ ಪಂದ್ಯದಲ್ಲೂ ನನ್ನ ಗಳಿಕೆ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ನಾನು ಅಭಿಷೇಕ್ ಅವರಿಗೆ, ‘ಜನರು ನಿಮ್ಮ ಸ್ಕೋರ್ ನೋಡಿ ಫಾರ್ಮ್ ಬಗ್ಗೆ ಮಾತನಾಡುತ್ತಾರೆ. ಆದರೆ ನೀವು ಫಾರ್ಮ್ ಕಳೆದುಕೊಂಡಿಲ್ಲ, ಕೇವಲ ರನ್ ಗಳಿಸುವಲ್ಲಿ ವಿಫಲರಾಗಿದ್ದೀರಿ ಅಷ್ಟೇ’ ಎಂದು ಧೈರ್ಯ ತುಂಬಿದ್ದೆ” ಎಂದು ವಿವರಿಸಿದ್ದಾರೆ. ಕನಿಷ್ಠ 20 ರಿಂದ 30 ಎಸೆತಗಳನ್ನು ಎದುರಿಸಿದಾಗ ಮಾತ್ರ ಒಬ್ಬ ಬ್ಯಾಟರ್ನ ಫಾರ್ಮ್ ಅನ್ನು ನಿರ್ಣಯಿಸಲು ಸಾಧ್ಯ, ಆದರೆ ಅಭಿಷೇಕ್ ಇನ್ನೂ ಅಷ್ಟು ಎಸೆತಗಳನ್ನೇ ಎದುರಿಸಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾಗಿ ಗಂಭೀರ್ ತಿಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಹಿಂದಿನದಕ್ಕಿಂತ ಹೆಚ್ಚು ಆಕ್ರಮಣಕಾರಿಯಾಗಿ ಆಡುವಂತೆಯೂ ಅವರು ಸಲಹೆ ನೀಡಿದ್ದರು.
ಭರವಸೆಗಿಂತ ನಂಬಿಕೆಯ ಮೇಲೆಯೇ ತಂಡದ ಆಯ್ಕೆ
ಆಟಗಾರರ ಆಯ್ಕೆಯ ಬಗ್ಗೆ ಗಂಭೀರ್ ಅವರ ಸ್ಪಷ್ಟ ನಿಲುವು ಎಂದರೆ ಅದು ಕೇವಲ ತಾತ್ಕಾಲಿಕ ಫಲಿತಾಂಶದ ಮೇಲಲ್ಲ, ಬದಲಾಗಿ ಆಟಗಾರನ ಮೇಲಿನ ನಂಬಿಕೆಯ ಮೇಲೆ ಆಧಾರಿತವಾಗಿರುತ್ತದೆ ಎಂಬುದು. ಆಜ್ತಕ್ ಜೊತೆಗಿನ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಒಮ್ಮೆ ಒಬ್ಬ ಆಟಗಾರನನ್ನು ನಂಬಿ ಆಯ್ಕೆ ಮಾಡಿದ ಮೇಲೆ ನಾಲ್ಕೈದು ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ಅವರನ್ನು ಕೈಬಿಡುವುದು ಸರಿಯಲ್ಲ ಎಂದಿದ್ದರು. ಡ್ರೆಸ್ಸಿಂಗ್ ರೂಮ್ನಲ್ಲಿರುವ ಪ್ರತಿಯೊಬ್ಬ ಆಟಗಾರನ ಮೇಲೂ ತಮಗೆ ಸಂಪೂರ್ಣ ನಂಬಿಕೆ ಇದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು. ಈ ಅಚಲ ನಂಬಿಕೆಯೇ ಅಭಿಷೇಕ್ ಶರ್ಮಾ ಟೂರ್ನಿಯ ದ್ವಿತೀಯಾರ್ಧದಲ್ಲಿ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಲು ಹಾಗೂ ಫೈನಲ್ ಪಂದ್ಯವೂ ಸೇರಿದಂತೆ ಎರಡು ಅಮೂಲ್ಯ ಅರ್ಧಶತಕಗಳನ್ನು ಸಿಡಿಸಿ ಮಿಂಚಲು ಕಾರಣವಾಯಿತು.
ಗಂಭೀರ್ ಅವರ 2014ರ ಐಪಿಎಲ್ ಅನುಭವದ ಪಾಠ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ 2014ರಲ್ಲಿ ಗಂಭೀರ್ ಅವರು ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ತೀವ್ರ ವೈಫಲ್ಯ ಅನುಭವಿಸಿದ್ದರು. ಆರಂಭಿಕ ಮೂರು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಅವರು ನಾಲ್ಕನೇ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದರು. ಅವರ ತಂಡ ಕೂಡ ಮೊದಲ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತಿತ್ತು. ಆದರೆ ಛಲ ಬಿಡದ ಗಂಭೀರ್ ಟೂರ್ನಿಯ ಅಂತ್ಯಕ್ಕೆ 16 ಪಂದ್ಯಗಳಿಂದ 3 ಅರ್ಧಶತಕಗಳ ನೆರವಿನೊಂದಿಗೆ 335 ರನ್ ಕಲೆಹಾಕಿದ್ದರು. ತಮ್ಮದೇ ಆದ ಈ ಕಠಿಣ ಅನುಭವದ ಹಿನ್ನೆಲೆಯಲ್ಲಿ, ಅಭಿಷೇಕ್ ಶರ್ಮಾ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಾಗಲೂ ಗಂಭೀರ್ ಯಾವುದೇ ಹಿಂಜರಿಕೆಯಿಲ್ಲದೆ ಅವರ ಬೆನ್ನಿಗೆ ನಿಂತರು. ಯುವ ಆಟಗಾರರ ಮೇಲೆ ಕೋಚ್ ಇಟ್ಟಿದ್ದ ಇದೇ ವಿಶ್ವಾಸ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಇದನ್ನೂ ಓದಿ : 7ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಶಿಕ್ಷಕ ಸಸ್ಪೆಂಡ್!



















