ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಂತೆಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಜ್ಯದ ಬಿಸಿಯೂಟ ಅಡುಗೆಯವರು ಮತ್ತು ಇತರ ಶಾಲಾ ಸಿಬ್ಬಂದಿಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಈ ಸಿಬ್ಬಂದಿಯ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ನಿರ್ಧಾರದಿಂದ ಸುಮಾರು 2.38 ಲಕ್ಷ ಬಿಸಿಯೂಟ ಅಡುಗೆಯವರು, ವಿಕಾಸ ಮಿತ್ರರು ಮತ್ತು ತಾಲಿಮಿ ಮರ್ಕಜ್ (ಶಿಕ್ಷಣ ಸ್ವಯಂಸೇವಕರು) ಸೇರಿದಂತೆ ಹಲವರಿಗೆ ಪ್ರಯೋಜನವಾಗಲಿದೆ.
ಯಾರಿಗೆ, ಎಷ್ಟು ಹೆಚ್ಚಳ?
ಬಿಸಿಯೂಟ ಅಡುಗೆಯವರು: ಇವರ ಮಾಸಿಕ ಗೌರವಧನವನ್ನು ಈಗ ಇರುವ 2,500 ರೂ.ಗಳಿಂದ 4,000 ರೂ.ಗೆ ಹೆಚ್ಚಿಸಲಾಗಿದೆ. ಈ ಹಿಂದೆ, ಕೇಂದ್ರ ಸರ್ಕಾರದಿಂದ 1,500 ರೂ. ಮತ್ತು ರಾಜ್ಯ ಸರ್ಕಾರದಿಂದ 1,000 ರೂ. ಗೌರವಧನ ಸಿಗುತ್ತಿತ್ತು. ಈಗ ರಾಜ್ಯ ಸರ್ಕಾರದ ಪಾಲು 2,500 ರೂ.ಗೆ ಏರಿಕೆಯಾಗಲಿದೆ.
ವಿಕಾಸ ಮಿತ್ರರು: ಇವರ ಮಾಸಿಕ ಗೌರವಧನವನ್ನು 25,000 ರೂ.ಗಳಿಂದ 27,500 ರೂ.ಗೆ ಹೆಚ್ಚಿಸಲಾಗಿದೆ.

ತಾಲಿಮಿ ಮರ್ಕಜ್ (ಶಿಕ್ಷಣ ಸ್ವಯಂಸೇವಕರು): ಇವರ ಗೌರವಧನವನ್ನು 22,000 ರೂ.ಗಳಿಂದ 24,200 ರೂ.ಗೆ ಏರಿಸಲಾಗಿದೆ.
ಪರಿಷ್ಕೃತ ಗೌರವಧನವು 2025ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಘೋಷಿಸಿದೆ.
ಬಿಸಿಯೂಟ ನೌಕರರು ತಮ್ಮ ಗೌರವಧನವನ್ನು ಹೆಚ್ಚಿಸುವಂತೆ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದ್ದರು. ಚುನಾವಣೆಗೆ ಮುನ್ನ ಅವರ ಬೇಡಿಕೆಯನ್ನು ಈಡೇರಿಸುವ ಮೂಲಕ, ನಿತೀಶ್ ಕುಮಾರ್ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.



















