ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ವಾಯುದಾಳಿಗೆ ತತ್ತರಿಸಿಹೋಗಿರುವ ಪಾಕಿಸ್ತಾನವು ಸಾಲಕ್ಕಾಗಿ ಜಗತ್ತಿನ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಭಾರತದ ದಾಳಿಗೆ ಹೆದರಿ ಪಾಕಿಸ್ತಾನದ ಮೊರೆಹೋಗಿ ಕದನವಿರಾಮ ಮಾಡಿಕೊಂಡಿದೆ. ಇಷ್ಟಾದರೂ, ಪಾಕಿಸ್ತಾನ ಮಾತ್ರ ಭಾರತದ ವಿರುದ್ಧ ಪಿತೂರಿ ಮಾಡುವುದನ್ನು, ಉಗ್ರರನ್ನು ಪೋಷಣೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ, ಇಷ್ಟೆಲ್ಲ ಮಾಡುವ ಪಾಕಿಸ್ತಾನದ ಒಟ್ಟು ಜಿಡಿಪಿಯು ಭಾರತದ ಎರಡು ರಾಜ್ಯಗಳ ಜಿಡಿಪಿಯನ್ನೂ ಮೀರಿಸುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಹೌದು, ಅರಾಜಕತೆ, ಅಸಮರ್ಥ ನಾಯಕತ್ವ, ಉಗ್ರರ ಪೋಷಣೆಯಲ್ಲೇ ತೊಡಗಿರುವ ಪಾಕಿಸ್ತಾನದ ಆರ್ಥಿಕತೆಯು ದಿವಾಳಿ ಅಂಚಿಗೆ ತಲುಪಿದೆ. ಇಡೀ ಪಾಕಿಸ್ತಾನದ ಜಿಡಿಪಿ ಮೌಲ್ಯವೇ 11 ಲಕ್ಷ ಕೋಟಿ ರೂಪಾಯಿ ಆಗಿದೆ. ಆದರೆ, ಮಹಾರಾಷ್ಟ್ರದ ಜಿಡಿಪಿಯೇ 42 ಲಕ್ಷ ಕೋಟಿ ರೂಪಾಯಿ ಇದೆ. ಅಷ್ಟೇ ಏಕೆ, ತಮಿಳುನಾಡಿನ ಜಿಡಿಪಿ ಕೂಡ 31 ಲಕ್ಷ ಕೋಟಿ ರೂಪಾಯಿ ಇದೆ. ಭಾರತದ ಒಂದು ರಾಜ್ಯದ ಆರ್ಥಿಕತೆಯನ್ನೂ ಮೀರಿಸದ ಪಾಕಿಸ್ತಾನವು ಅಪಕ್ಷ ಹೇಳಿಕೆಗಳ ಮೂಲಕ ಪ್ರಮಾದಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ.
ಆರ್ಥಿಕ ಸುಧಾರಣೆ ನೀತಿಗಳ ಕೊರತೆ, ಉಗ್ರರಿಗಾಗಿ ಹಣಕಾಸು ನೆರವು, ಸಮರ್ಥ ನಾಯಕತ್ವವನ್ನೇ ಕಾಣದ ಪಾಕಿಸ್ತಾನದಲ್ಲಿ ಮೂಲಭೂತವಾದಿಗಳೇ ತುಂಬಿದ್ದಾರೆ. ಇದರಿಂದಾಗಿ ಪಾಕಿಸ್ತಾನದ ಹಣಕಾಸು ಸ್ಥಿತಿಯು ದುಸ್ಥಿತಿ ತಲುಪಿದೆ. ಪಾಕಿಸ್ತಾನವು ಬರೋಬ್ಬರಿ 11 ಲಕ್ಷ ಕೋಟಿ ರೂಪಾಯಿ ವಿದೇಶಿ ಸಾಲವನ್ನು ಹೊಂದಿದೆ.
ಸರ್ಕಾರಿ ನೌಕರರ ಸಂಬಳ ಕೊಡಲೂ ಆಗದ ಪಾಕಿಸ್ತಾನವು ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ 8,500 ಕೋಟಿ ರೂಪಾಯಿ ಸಾಲ ಪಡೆದಿದೆ. ಇನ್ನೂ ಹೆಚ್ಚಿನ ಸಾಲ ನೀಡಬೇಕು ಎಂದು ಅಂಗಲಾಚುತ್ತಿದೆ.



















