ಕೋಲ್ಕತ್ತಾ/ಚೆನ್ನೈ/ಗುವಾಹಟಿ : ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೆ ಎಲ್ಲರ ಗಮನ ಇಂದು (ಮೇ 4) ಪ್ರಕಟವಾಗುವ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗುತ್ತದೆ. ಇದಕ್ಕೂ ಮುನ್ನ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಬಳಿಕ ಚುನಾವಣೆ ಆಯೋಗ ನಿಯೋಜಿತ ಸಿಬ್ಬಂದಿ ಮತ ಎಣಿಕೆ ಆರಂಭಿಸಿತ್ತಾರೆ.
ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಸೇರಿ ಒಟ್ಟು ಐದು ರಾಜ್ಯಗಳ 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಸ್ಪರ್ಧಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಣಬರಹ ಇಂದು ಗೊತ್ತಾಗಲಿದೆ. ಮತ ಎಣಿಕಾ ಕೇಂದ್ರಗಳಿಗೆ ಅಗತ್ಯ ಎಲ್ಲ ಭದ್ರತೆ ಒದಗಿಸಲಾಗಿದೆ. ಪಾರದರ್ಶಕವಾಗಿ ಮತ ಎಣಿಕೆಗೆ ECI ಸಜ್ಜಾಗಿದೆ.
ಅಸ್ಸಾಂನಲ್ಲಿ 3 ಹಂತದ ಭದ್ರತೆ
ಅಸ್ಸಾಂ ನಲ್ಲಿ (Assam) ಮತ ಎಣಿಕೆ ಹಿನ್ನೆಲೆ ಮೂರು ಹಂತದ ಭದ್ರತೆ ನಿಯೋಜಿಸಲಾಗಿದೆ. 5 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಪ್ರಕ್ರಿಯೆಗೆ ಲಖಿಂಪುರ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಿರುವುದಾಗಿ ಡಿಸಿ ಆದಿತ್ಯ ವಿಕ್ರಮ್ ಯಾದವ್ ಹೇಳಿದ್ದಾರೆ. ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆ ಗುರಿಯಾಗಿಟ್ಟುಕೊಂಡು 1,079 ಮತಗಟ್ಟೆಗಳು ಮತ್ತು ಸುಮಾರು 3,500 ಅಂಚೆ ಮತಪತ್ರಗಳ ಎಣಿಕೆ ಕಾರ್ಯವೂ ಇದರಲ್ಲಿ ಸೇರಿದೆ. ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂಬ ಉದ್ದೇಶದಿಂದ ಸಿಎಪಿಎಫ್, ರಾಜ್ಯ ಸಶಸ್ತ್ರ ಪೊಲೀಸ್, ರಾಜ್ಯ ಪೊಲೀಸ್ ಮತ್ತು ನಾಗರಿಕ ರಕ್ಷಣಾ ಇಲಾಖೆಯಿಂದ ಸುಮಾರು 400 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗಿದೆ.
ಬಂಗಾಳದಲ್ಲಿ 432 ಎಣಿಕ ವೀಕ್ಷಕರ ನೇಮಕ
ಇನ್ನೂ ಬಂಗಾಳದಲ್ಲಿ ಇವಿಎಂ ಟ್ಯಾಂಪರಿಂಗ್ ಆರೋಪ ಕೇಳಿಬಂದಿರುವ ಹಿನ್ನೆಲೆ ಎಣಿಕೆ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅದಕ್ಕಾಗಿ 294 ವಿಧಾನಸಭಾ ಕ್ಷೇತ್ರಗಳಲ್ಲಿ 432 ಮತ ಎಣಿಕೆ ವೀಕ್ಷಕರನ್ನ ನೇಮಕ ಮಾಡಲಾಗಿದೆ. ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಮಾತನಾಡಿ, 3 ಹಂತದ ಭದ್ರತಾ ವ್ಯವಸ್ಥೆಯನ್ನ ನಿಯೋಜನೆ ಮಾಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆ, ರಾಜ್ಯ ಸಶಸ್ತ್ರ ಮೀಸಲು ಪಡೆ, ಸಿಎಪಿಎಫ್ ಅನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಿದ್ದು, ಯಾವುದೇ ಲೋಕ ಪಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಸಕಲ ಸಿದ್ಧತೆ
ತಮಿಳುನಾಡಿನಾದ್ಯಂತ ಗೊತ್ತುಪಡಿಸಿದ 62 ಮತ ಎಣಿಕೆ ಕೇಂದ್ರಗಳಲ್ಲಿ 3 ಹಂತದ ಭದ್ರತೆ ನಿಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಶುರುವಾಗಲಿದ್ದು, 8:30 ರಿಂದ ಇವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲವೂ ಸಿಸಿಟಿವಿ ಕಣ್ಗಾವಲಿನಲ್ಲಿ ಇರಲಿದೆ ಎಂದು ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ರಾಷ್ಟ್ರ ರಾಜಕಾರಣದ ಪಥವನ್ನು ನಿರ್ಧರಿಸಲಿದ್ದು, ಈ ರಾಜ್ಯಗಳ ಮತದಾರ ಯಾರ ಕೊರಳಿಗೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬುದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ : ದಾವಣಗೆರೆ ದಕ್ಷಿಣ, ಬಾಗಲಕೋಟೆ ಬೈ ಎಲೆಕ್ಷನ್ ಫಲಿತಾಂಶಕ್ಕೆ ಕ್ಷಣಗಣನೆ – ಯಾರಿಗೆ ವಿಜಯ ಮಾಲೆ?


















