ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮುತ್ತತ್ತಿ ಕಾವೇರಿ ನದಿ ತೀರದಲ್ಲಿ ಬುಧವಾರ ಸಂಜೆ ಫೋಟೋ ತೆಗೆದುಕೊಳ್ಳಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವ ದಾರುಣ ಘಟನೆ ಜರುಗಿದ್ದು, ಇಂದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮುತ್ತತ್ತಿಯಲ್ಲಿ ಬುಧವಾರ ನಡೆದ ಐವರ ಜಲಸಮಾಧಿ ಪ್ರಕರಣದ ಬಳಿಕ, ಇಡೀ ಆ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಇಂದು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಮೃತರಾದ ಚೈತ್ರಾ, ಶ್ವೇತಾ, ವಿಜಯಮ್ಮ, ಪ್ರಿಯಾಂಕಾ ಮತ್ತು ಮಹೇಶ್ ಅವರ ಮರಣೋತ್ತರ ಪರೀಕ್ಷೆ ನಡೆಯಿತು. ಪ್ರೀತಿಪಾತ್ರರ ಮೃತದೇಹಗಳನ್ನು ನೋಡಿದ ಕುಟುಂಬಸ್ಥರ ಆಕ್ರಂದನ, ಅಲ್ಲಿ ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿತು.
ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ರವಿ, ಕಣ್ಣೀರು ಹಾಕುತ್ತಲೇ ಆ ಘಟನೆಯನ್ನು ವಿವರಿಸಿದ್ದಾರೆ. ಬೀಗರೂಟ ಮುಗಿಸಿ ಮುತ್ತತ್ತಿಗೆ ಹೋಗಿದ್ದೆವು. ಅಕ್ಕ ವಿಜಯಮ್ಮ ಕಾಲು ಜಾರಿ ಬಿದ್ದಾಗ, ಅವರನ್ನ ರಕ್ಷಿಸಲು ಹೋದ ಪತ್ನಿ, ಮಗಳು ಮತ್ತು ಪ್ರಿಯಾಂಕ ಸೇರಿದಂತೆ ಐವರೂ ನೀರಿನಲ್ಲಿ ಮುಳುಗಿದರು. ನಾನು ರಕ್ಷಿಸಲು ಹೋದರೂ ಸಾಧ್ಯವಾಗಲಿಲ್ಲ ಎಂದು ಮರುಗಿದರು.
ಮುತ್ತತ್ತಿಯ ಕಾವೇರಿ ನದಿ ಅಪಾಯಕಾರಿ ಸ್ಥಳವಾಗಿದ್ದರೂ ಅಲ್ಲಿ ಸೂಕ್ತ ಎಚ್ಚರಿಕೆ ಫಲಕಗಳಿಲ್ಲ, ರಕ್ಷಣೆಗೆ ಹೋಮ್ ಗಾರ್ಡ್ಗಳಿಲ್ಲ ಎಂದು ಕುಟುಂಬಸ್ಥರು ದೂರಿದ್ದು, ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದವರೇ ಆಗಿರುವ ಈ ಕುಟುಂಬಕ್ಕೆ, ಸರ್ಕಾರ ತುರ್ತಾಗಿ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.


















