ಬೆಂಗಳೂರು : ಬೆಂಗಳೂರು ಅಭಿವೃದ್ಧಿಗೆ ರೈತರು ಹಾಗೂ ಭೂ ಮಾಲೀಕರು ನೀಡಿರುವ ಕೊಡುಗೆ ಅನನ್ಯವಾಗಿದೆ. ಅಭಿವೃದ್ಧಿಗಾಗಿ ಭೂಮಿ ನೀಡಿದವರ ಕುಟುಂಬಗಳ ಬದುಕೂ ಬೆಳೆಯಬೇಕು ಹಾಗೂ ಅಭಿವೃದ್ಧಿಯ ಫಲದಲ್ಲಿ ಅವರಿಗೆ ನ್ಯಾಯಯುತ ಪಾಲು ಸಿಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ನೆಹರೂ ತಾರಾಲಯದ ಯು.ಆರ್. ಭವನದಲ್ಲಿ ನಡೆದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಭೂ ಮಾಲೀಕರಿಗೆ ನಿವೇಶನ ಹಂಚಿಕೆ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಭೂಮಿ ನೀಡಿದ ರೈತರ ಕೊಡುಗೆಯನ್ನು ಸರ್ಕಾರ ಎಂದಿಗೂ ಮರೆಯುವುದಿಲ್ಲ. ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಇದು ಕೇವಲ ನಿವೇಶನ ಹಂಚಿಕೆ ಪತ್ರ ವಿತರಣೆಯ ಕಾರ್ಯಕ್ರಮವಲ್ಲ, ಹಲವು ವರ್ಷಗಳಿಂದ ಕಾಯುತ್ತಿದ್ದ ಭೂ ಮಾಲೀಕರ ನಿರೀಕ್ಷೆಗಳಿಗೆ ಉತ್ತರ ನೀಡುವ ದಿನವಾಗಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಭೂಮಿ ನೀಡಿದವರಿಗೆ ಅಭಿವೃದ್ಧಿಯಲ್ಲೇ ಪಾಲು ನೀಡುವ ದಿನ ಇದಾಗಿದೆ ಎಂದು ಸಿಎಂ ಹೇಳಿದ್ದಾರೆ.

ಡಾ. ಕೆ. ಶಿವರಾಮ ಕಾರಂತ ಬಡಾವಣೆ ಯೋಜನೆ ಹಲವು ವರ್ಷಗಳಿಂದ ಭೂಸ್ವಾಧೀನ, ಕಾನೂನು ವ್ಯಾಜ್ಯಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ನಡುವೆ ಸಾಗಿ ಬಂದಿದೆ. ಕಾನೂನು ಹಾಗೂ ನ್ಯಾಯಾಲಯದ ನಿರ್ದೇಶನಗಳನ್ನು ಗೌರವಿಸುತ್ತಲೇ ಅರ್ಹ ಭೂ ಮಾಲೀಕರ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಿದೆ. ದಾಖಲೆಗಳ ಆಧಾರದ ಮೇಲೆ ಅರ್ಹರಿಗೆ ಅವರ ಹಕ್ಕುಗಳನ್ನು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಿಎಂ ಡಿಕೆಶಿ ತಿಳಿಸಿದ್ದಾರೆ.
ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ರಸ್ತೆ
ಇದೇ ವೇಳೆ ಬಡಾವಣೆಯ ರಸ್ತೆಯೊಂದಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಅಲ್ಲದೆ, ಬಡಾವಣೆಗೆ ಭೂಮಿ ನೀಡಿದ ಪ್ರತಿಯೊಬ್ಬರ ಹೆಸರನ್ನೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು
ಬೆಂಗಳೂರು ದೆಹಲಿಯ ರೀತಿಯಲ್ಲಿ ಯೋಜಿತ ನಗರವಾಗಿ ಬೆಳೆಯಲಿಲ್ಲ. ಈ ಹಿಂದೆ 60 ಲಕ್ಷ ಜನಸಂಖ್ಯೆ ಇದ್ದ ನಗರದಲ್ಲಿ ಈಗ ಸುಮಾರು ಒಂದೂವರೆ ಕೋಟಿ ಜನರು ವಾಸಿಸುತ್ತಿದ್ದಾರೆ. ವಾಹನಗಳ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದ್ದಾರೆ. “ಭೂಮಿ ನಿಮ್ಮದು, ತ್ಯಾಗ ನಿಮ್ಮದು, ಅಭಿವೃದ್ಧಿ ಬೆಂಗಳೂರಿನದ್ದು. ನಮ್ಮನ್ನು ಕೈಬಿಡಬೇಡಿ” ಎಂದು ಸಿಎಂ ಡಿಕೆಶಿ ಮನವಿಯನ್ನೂ ಮಾಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ವಹಿಸಿದ್ದರು. ಗ್ರೇಟರ್ ಬೆಂಗಳೂರು ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಪಿ., ಬಿಡಿಎ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲಿದೆ ಶಿವರಾಮ ಕಾರಂತ ಬಡಾವಣೆ?
ಬೆಂಗಳೂರು ಉತ್ತರ ಭಾಗದಲ್ಲಿರುವ 17 ಹಳ್ಳಿಗಳನ್ನು ಒಳಗೊಂಡ ಪ್ರದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಡಾ. ಕೆ. ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು ಸುಮಾರು 3,000 ಎಕರೆ ವಿಸ್ತೀರ್ಣದ ಈ ಬಡಾವಣೆಯಲ್ಲಿ ಸಾವಿರಾರು ನಿವೇಶನಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಪ್ರಮುಖ ಅಂಕಿ-ಅಂಶಗಳು
- ಬಡಾವಣೆಯ ಒಟ್ಟು ವಿಸ್ತೀರ್ಣ: ಸುಮಾರು 3,000 ಎಕರೆ
- ಭೂ ಮಾಲೀಕರಿಗೆ ಹಂಚಿಕೆ ಮಾಡಿದ ನಿವೇಶನಗಳ ಒಟ್ಟು ವಿಸ್ತೀರ್ಣ: 3 ಕೋಟಿ ಚದರ ಅಡಿ
- ಭೂ ಮಾಲೀಕರ ಒಟ್ಟು ಸಂಖ್ಯೆ: 3,886
- ರೆವಿನ್ಯೂ ನಿವೇಶನದಾರರ ಸಂಖ್ಯೆ: 3,500
- ಈಗಾಗಲೇ ಹಂಚಿಕೆ ಮಾಡಿದ ಒಟ್ಟು ನಿವೇಶನಗಳು: 24,714
- ರೈತರು ಹಾಗೂ ಭೂ ಮಾಲೀಕರಿಗೆ ಹಂಚಿಕೆ: 18,399 ನಿವೇಶನಗಳು
- ಸಾರ್ವಜನಿಕರಿಗೆ ಮೀಸಲಾದ ನಿವೇಶನಗಳು: 2,815
ಇದನ್ನೂ ಓದಿ : ನೇಪಾಳ ಜಲಪ್ರಳಯ ಆಯ್ತು, ಬಂಗಾಳಕ್ಕೂ ಎದುರಾಗಲಿದೆಯೇ ಹಿಮಪಾತದ ಸರಣಿ ಆಪತ್ತು?


















