ನವದೆಹಲಿ : ರಾಷ್ಟ್ರ ರಾಜಧಾನಿ ದಿಲ್ಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಸಜೀವದಹನವಾದ 21 ಮಂದಿಯ ಪೈಕಿ ಒಂದೇ ಕುಟುಂಬದ 8 ಮಂದಿಯೂ ಸೇರಿದ್ದಾರೆ. ಗುರುಗ್ರಾಮದ ಸೆಕ್ಟರ್ 46ರ ನಿವಾಸಿಯಾಗಿದ್ದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ವಿವೇಕ್ ಅಗರ್ವಾಲ್ ಅವರ ಇಡೀ ಕುಟುಂಬವೇ ಈ ದುರಂತದಲ್ಲಿ ನಿರ್ನಾಮವಾಗಿದೆ. ದಿಲ್ಲಿಯ ಮ್ಯಾಕ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧ ತಂದೆಯನ್ನು ನೋಡಿಕೊಳ್ಳಲೆಂದು ಇಡೀ ಕುಟುಂಬ ಸಮೇತ ಬಂದು ಆಸ್ಪತ್ರೆಯ ಬಳಿಯೇ ಇದ್ದ ಹೋಟೆಲ್ನಲ್ಲಿ ತಂಗಿದ್ದಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ವಿವೇಕ್ ಅಗರ್ವಾಲ್ ಅವರು ತಮ್ಮ ತಂದೆಯ ಚಿಕಿತ್ಸೆಗಾಗಿ ಪತ್ನಿ ತರ್ಜನಿ ಅಗರ್ವಾಲ್, ಪುತ್ರಿಯರಾದ ಜಿವಿಶಾ, ವಾರ್ಯಾ ಮತ್ತು ಇತರ ನಾಲ್ವರು ಸಂಬಂಧಿಕರೊಂದಿಗೆ ದಿಲ್ಲಿಗೆ ಬಂದಿದ್ದರು. ಆಸ್ಪತ್ರೆಯ ಹತ್ತಿರದಲ್ಲೇ ಇದ್ದ ‘ಫ್ಲರಿಶ್ ಸ್ಟೇ’ ಬೆಡ್ ಅಂಡ್ ಬ್ರೇಕ್ಫಾಸ್ಟ್ ಹೋಟೆಲ್ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಬುಧವಾರ ಮುಂಜಾನೆ ಇಡೀ ಕುಟುಂಬ ಹೋಟೆಲ್ನ ರೆಸ್ಟೋರೆಂಟ್ನಲ್ಲಿ ಉಪಾಹಾರ ಸೇವಿಸುತ್ತಿದ್ದಾಗ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ರೆಸ್ಟೋರೆಂಟ್ಗೆ ಆವರಿಸಿದ್ದರಿಂದ ಹೊರಬರಲಾಗದೆ ವಿವೇಕ್ ಸೇರಿದಂತೆ ಕುಟುಂಬದ ಎಂಟೂ ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಈ ದುರಂತದ ನಂತರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿವೇಕ್ ಅವರ 80 ವರ್ಷದ ತಂದೆ ರಾಧೆ ಶ್ಯಾಮ್ ಅಗರ್ವಾಲ್ ಮಾತ್ರ ಆ ಕುಟುಂಬದ ಏಕೈಕ ಬದುಕುಳಿದ ಸದಸ್ಯರಾಗಿದ್ದಾರೆ.
ಮರಣಕೂಪವಾದ ಹೋಟೆಲ್
ಬುಧವಾರ ಮುಂಜಾನೆ ಸುಮಾರು 8.30ರ ಸುಮಾರಿಗೆ ಈ ಐದು ಅಂತಸ್ತಿನ ಕಿರಿದಾದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಮಾತ್ರದಲ್ಲಿ ಅದು ಇಡೀ ಹೋಟೆಲ್ ಅನ್ನು ಆವರಿಸಿಕೊಂಡಿದೆ. ಮೃತರ ಪೈಕಿ 12 ಮಂದಿ ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಹೋಟೆಲ್ನಲ್ಲಿ 40ಕ್ಕೂ ಹೆಚ್ಚು ಗ್ರಾಹಕರಿದ್ದು, ಬಹುತೇಕರು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ದಿಲ್ಲಿ ಪೊಲೀಸರ ತನಿಖೆಯ ಪ್ರಕಾರ, ಈ ಹೋಟೆಲ್ ಕಟ್ಟಡಕ್ಕೆ ಪ್ರವೇಶಿಸಲು ಮತ್ತು ಹೊರಹೋಗಲು ಕೇವಲ ಒಂದೇ ಒಂದು ದಾರಿಯಿತ್ತು. ಕಟ್ಟಡದ ಕಿಟಕಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿತ್ತು ಮತ್ತು ಮುಖ್ಯ ದ್ವಾರವು ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಬೆಂಕಿ ಹರಡಿದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡು ಸೆನ್ಸರ್ ಬಾಗಿಲು ಲಾಕ್ ಆಗಿದ್ದರಿಂದ ಗ್ರಾಹಕರಿಗೆ ಹೊರಗೆ ಓಡಿಹೋಗಲು ದಾರಿ ಇರದೇ ಎಲ್ಲರೂ ಒಳಗೇ ಸಿಲುಕಿಕೊಂಡು ಬೆಂಕಿಗಾಹುತಿಯಾಗಿದ್ದಾರೆ.
ಪರವಾನಗಿ ವಂಚನೆ ಬಯಲಿಗೆ
ದಿಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ, ‘ಬೆಡ್ ಅಂಡ್ ಬ್ರೇಕ್ಫಾಸ್ಟ್’ ಯೋಜನೆಯಡಿ ಕೇವಲ 6 ಕೊಠಡಿಗಳನ್ನು ಮಾತ್ರ ನಡೆಸಲು ಈ ಹೋಟೆಲ್ಗೆ ಅನುಮತಿ ನೀಡಲಾಗಿತ್ತು. ಆದರೆ, ನಿಯಮಗಳನ್ನೆಲ್ಲ ಗಾಳಿಗೆ ತೂರಿ ಹೋಟೆಲ್ ಮಾಲೀಕರು ನೆಲಮಹಡಿ ಸೇರಿದಂತೆ ಒಟ್ಟು 25 ಕೊಠಡಿಗಳನ್ನು ಕಾನೂನುಬಾಹಿರವಾಗಿ ನಿರ್ಮಿಸಿ ಗ್ರಾಹಕರಿಗೆ ಬಾಡಿಗೆಗೆ ನೀಡುತ್ತಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಗುರುಗ್ರಾಮದಲ್ಲಿ ಆವರಿಸಿದ ಸೂತಕದ ಛಾಯೆ
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ವಿವೇಕ್ ಅವರ ಉಳಿದ ಸಂಬಂಧಿಕರು ದಿಲ್ಲಿಗೆ ಧಾವಿಸಿದ್ದಾರೆ. ಮೃತರ ಸಂಬಂಧಿಕರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ ನಂತರವಷ್ಟೇ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಗುರುಗ್ರಾಮದ ಸೆಕ್ಟರ್ 46 ರಲ್ಲಿರುವ ವಿವೇಕ್ ಅವರ ಮನೆ ಬುಧವಾರ ಸಂಪೂರ್ಣ ನಿರ್ಜನವಾಗಿದ್ದು, ನಗುನಗುತ್ತಾ ಇದ್ದ ಒಂದಿಡೀ ಕುಟುಂಬ ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಇಲ್ಲದಂತಾಗಿರುವುದನ್ನು ಕಂಡು ಇಡೀ ಕಾಲೋನಿಯೇ ಕಣ್ಣೀರಿನಲ್ಲಿ ಮುಳುಗಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ದಾರುಣ ಘಟನೆ – ಕಾರಿನ ಡಿಕ್ಕಿಯಲ್ಲಿ ಸಿಲುಕಿ 3 ವರ್ಷದ ಮಗು ಸಾವು!



















