ಅಖಂಡ ಆಂಧ್ರ ಇಬ್ಬಾಗವಾಗಿದ್ದೂ ಆಯ್ತು ಒಂದು ದಶಕಗಳ ಕಾಲ ಹೈದ್ರಾಬಾದ್ ನ್ನು ಜಂಟಿಯಾಗಿ ರಾಜಧಾನಿ ಅಂತಾ ಹಂಚಿಕೊಂಡಿದ್ದೂ ಆಯ್ತು..ಆದರೆ ಇಂದಿಗೂ ಆಂಧ್ರ ಪ್ರದೇಶಕ್ಕೆ ಅಧಿಕೃತ ರಾಜಧಾನಿ ಕೊರತೆಯಿದೆ. ಇದಕ್ಕೆ ಮೂಲ ಕಾರಣ ರಾಜಕೀಯ ಶೀತಲ ಸಮರ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ಹೊತ್ತಿಗಾಗಲೇ ಭಾರತದ ಮೊದಲ ಪೂರ್ವಯೋಜಿತ,ಸುಸಜ್ಜಿತ, ಅತ್ಯಾಧುನಿಕ, ವಿಶ್ವಕ್ಕೇ ಮಾದರಿಯಾಗಬಲ್ಲಂಥಾ ರಾಜಧಾನಿ ತಲೆ ಎತ್ತಬೇಕಿತ್ತು.
ಆದರೆ ನಾಯ್ಡು ಮತ್ತು ಜಗನ್ ನಡುವಿನ ಕಿತ್ತಾಟದಿಂದಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ಅಹಂಭಾವಕ್ಕೆ ಬಲಿಯಾಗಿತ್ತು. ಆದ್ರೀಗ ಕಾಲ ಬದಲಾಗಿದೆ. ಆಂಧ್ರಕ್ಕೆ ಮತ್ತೆ ನಾಯ್ಡು ಸಾರಥ್ಯ ಸಿಕ್ಕಾಗಿದೆ. ಹೀಗಾಗಿಯೇ ಮಣ್ಣಲ್ಲಿ ಮಣ್ಣಾಗಿದ್ದ ಅಮರಾವತಿ ಯೋಜನೆ ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದಿದೆ.
ನೂತನ ರಾಜಧಾನಿಗೆ ಎರಡನೇ ಬಾರಿ ಮೋದಿ ಶಿಲಾನ್ಯಾಸ
ಸಿಎಂ ಚಂದ್ರಬಾಬು ನಾಯ್ಡುರವರ ಕನಸಿನ ಯೋಜನೆ ಅಮರಾವತಿ. ವಿಶ್ವದಲ್ಲಿ ಬೇರೆಲ್ಲೂ ಇಲ್ಲದಂಥಾ ಅತ್ಯಾಧುನಿಕ ನಗರವನ್ನೇ ಮರು ನಿರ್ಮಿಸಿ ಅದನ್ನೇ ತಮ್ಮ ರಾಜ್ಯದ ರಾಜಧಾನಿಯಾಗಿಸುವ ಗುರಿ ಅವರದ್ದು. ಹೀಗಾಗಿಯೇ 2015ರಲ್ಲೇ ಅಮರಾವತಿ ಕಟ್ಟೋ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿತ್ತು. ಅಂದು ಕೂಡಾ ಪ್ರಧಾನಿ ಮೋದಿಯೇ ಶಿಲಾನ್ಯಾಸ ಮಾಡಿದ್ರು. ಆದ್ರೆ ಮುಂದೆ ಬಂದ ಜಗನ್ ಈ ಯೋಜನೆಯನ್ನೇ ಕೈಬಿಟ್ಟಿದ್ದರು.
ಆದರೀಗ ಮತ್ತೊಮ್ಮೆ ನಾಯ್ಡು ಆಡಳಿತದಲ್ಲಿ ಪಿಎಂ ಮೋದಿ ಎರಡನೇ ಬಾರಿಗೆ ಅಮರಾವತಿ ಕನಸಿಗೆ ನೀರೆಯುತ್ತಿದ್ದಾರೆ. ಬರೋಬ್ಬರಿ 54 ಸಾವಿರ ಎಕರೆ ವ್ಯಾಪ್ತಿ ಭೂಮಿಯನ್ನ ವಶಕ್ಕೆ ಪಡೆಯಲಾಗಿದ್ದು, ರಾಜಧಾನಿ ಕಟ್ಟೋ ಕಾರ್ಯ ಆರಂಭವಾಗಲಿದೆ.
ಕೃಷ್ಣಾ ನದಿ ತಟದಲ್ಲಿ ಜೀವ ತಳಿಯಲಿದೆ ಅಮರಾವತಿ
ಆಂಧ್ರದ ಜೀವನದಿ ಅಂತಲೇ ಕರೆಯಿಸಿಕೊಳ್ಳುವ ಕೃಷ್ಣಾ ತಟದಲ್ಲೇ ನೂತನ ರಾಜಧಾನಿ ನಿರ್ಮಾಣವಾಗುತ್ತಿದೆ. ವಿಜಯವಾಡ-ಮತ್ತು ಗುಂಟೂರು ನಡುವಿನ 54 ಸಾವಿರ ಎಕರೆ ಪ್ರದೇಶವನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ನೂತನ ವಿಧಾನಸೌಧ, ಹೈಕೋರ್ಟ್, ಆಡಳಿತ ಭವನ, 5200 ಜನರಿಗೆ ವಾಸಕ್ಕೆ ಮನೆಗಳು, ಹತ್ತಾರು ಕಚೇರಿಗಳ ನಿರ್ಮಾಣಕ್ಕಿಂದು ಮೋದಿ ಅಡಿಗಲ್ಲು ಹಾಕುತ್ತಿದ್ದಾರೆ. ಅಂದಾಜು 11.240 ಕೋಟಟಿ ವೆಚ್ಚದ ಕಾಮಗಾರಿಗಳಿಗಿಂದು ಪ್ರಧಾನಿ ಚಾಲನೆ ನೀಡ್ತಿದ್ದಾರೆ. ಇನ್ನು ರಾಜಧಾನಿ ನಿರ್ಮಾಣಕ್ಕೆ ಅಂದಾಜು 77,249 ಕೋಟಿ ಖರ್ಚು ಮಾಡಲಾಗುತ್ತಿದೆ.
ಸಿಂಗಾಪುರ ಮಾದರಿಯಲ್ಲಿ ನೂತನ ರಾಜಧಾನಿ
ಅಮರಾವತಿ ನಿರ್ಮಾಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಿಎಂ ಚಂದ್ರಬಾಬು, ಇದರ ನಿರ್ಮಾಣಕ್ಕೆ ಸಿಂಗಾಪುರ ಸರ್ಕಾರದ ನೆರವು ಪಡೆದಿದ್ದಾರೆ. ಭವಿಷ್ಯದ ಸಿಂಗಾಪುರ ಕಲ್ಪನೆಯಲ್ಲಿ ಅಮರಾವತಿಯನ್ನು ಕಟ್ಟಲಾಗುತ್ತಿದೆ. ನೂತನ ನಗರದಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಉತ್ಕೃಷ್ಟ ವ್ಯವಸ್ಥೆ ಕಲ್ಪಿಸಲಾಗ್ತಿದೆ. ಉಳಿದಂತೆ ನೂತನ ರಾಜಧಾನಿಗೆ ಸಮಸ್ತ ರಾಜ್ಯದಿಂದ ಅನುವಾಗುವಂತೆ 320 ಕಿಲೋಮೀಟರ್ ಹೈಟೆಕ್ ಸಾರಿಗೆ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಇಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ 40 ಸಾವಿರ ಎಕರೆ ಭೂಮಿಯನ್ನು ವಶಕ್ಕೆ ಪಡೆದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಳಗೊಂಡ ಮೆಗಾಸಿಟಿ ನಿರ್ಮಾಣದ ಕನಸನ್ನೂ ನಾಯ್ಡು ಹೊಂದಿದ್ದಾರೆ.



















