ಬೆಂಗಳೂರು: ಯಲಹಂಕ ವಲಯದ ಅಟ್ಟೂರು ಲೇಔಟ್ ಸಮೀಪದ ದೊಡ್ಡಬೆಟ್ಟಹಳ್ಳಿಯಲ್ಲಿ ಕಾವೇರಿ ನೀರು ಕಲುಷಿತಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಣ್ಣು ಮಿಶ್ರಿತ ನೀರು ಮನೆಗಳಿಗೆ ಪೂರೈಕೆಯಾಗಿದ್ದು, ಇದರಿಂದ ನಿವಾಸಿಗಳು BWSSB ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಗ್ಯಾಸ್ ಕಂಪನಿಯ ಪೈಪ್ಲೈನ್ ಕಾಮಗಾರಿ ವೇಳೆ ಕಾವೇರಿ ನೀರು ಸಂಪರ್ಕ ಪೈಪ್ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ ಸಂಪೂರ್ಣ ಮಣ್ಣು ಮಿಶ್ರಿತ ನೀರು ಮನೆಗಳಿಗೆ ಸರಬರಾಜಾಗುತ್ತಿದ್ದು, ಕುಡಿಯಲು ಹಾಗೂ ದೈನಂದಿನ ಬಳಕೆಗೆ ಯೋಗ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
BWSSBಯ ನಿರ್ಲಕ್ಷ್ಯ ಹಾಗೂ ಖಾಸಗಿ ಗ್ಯಾಸ್ ಕಂಪನಿಯ ಅಜಾಗರೂಕ ಕಾಮಗಾರಿಯಿಂದ ಈ ಅವಾಂತರ ಸಂಭವಿಸಿದೆ ಎಂದು ನಾಗರಿಕರು ದೂರಿದ್ದಾರೆ. ಸಮಸ್ಯೆ ಉಂಟಾದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಕಲುಷಿತ ನೀರು ಮನೆಗಳ ಸಂಪ್ ಹಾಗೂ ವಾಟರ್ ಟ್ಯಾಂಕ್ಗಳಿಗೆ ಸೇರಿರುವುದರಿಂದ ನಿವಾಸಿಗಳು ಅವುಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಹೆಚ್ಚುವರಿ ವೆಚ್ಚ ಹಾಗೂ ತೊಂದರೆ ಎದುರಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಶುದ್ಧ ಕಾವೇರಿ ನೀರು ಪೂರೈಸಬೇಕು. ಜೊತೆಗೆ ಹಾನಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬೆಟ್ಟಹಳ್ಳಿ ನಿವಾಸಿಗಳು BWSSBಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮುಂದಿನ 24 ಗಂಟೆಗಳಲ್ಲಿ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ!


















