ಕೋಲ್ಕತ್ತಾ : ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ಮತ್ತು ಮುಂದಿನ ಸಿಎಂ ಎಂದೇ ಪರಿಗಣಿಸಲ್ಪಟ್ಟಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ ತಡರಾತ್ರಿ ಮಧ್ಯಮಗ್ರಾಮದಲ್ಲಿ ಗುಂಡಿಕ್ಕಿ ಅತ್ಯಂತ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಅತ್ಯಂತ ಯೋಜಿತವಾಗಿ ನಡೆದ ಈ ಹತ್ಯೆಯ ಹಿಂದೆ ವೃತ್ತಿಪರ ಹಂತಕರ ತಂಡ ಇರುವ ಶಂಕೆ ವ್ಯಕ್ತವಾಗಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ.
ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿದ ಹಂತಕರು
ಬುಧವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಚಂದ್ರನಾಥ್ ರಥ್ ಅವರು ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ದೋಲತಾಲ ಎಂಬಲ್ಲಿ ಅವರ ವಾಹನವನ್ನು ಹಿಂಬಾಲಿಸಿದ ಹಂತಕರು, ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರೊಂದನ್ನು ಬಳಸಿ ರಸ್ತೆಯ ಮಧ್ಯದಲ್ಲೇ ಚಂದ್ರನಾಥ್ ಅವರ ಕಾರಿಗೆ ಅಡ್ಡ ಹಾಕಿದ್ದಾರೆ. ವಾಹನ ನಿಲ್ಲುತ್ತಿದ್ದಂತೆಯೇ ಬೈಕುಗಳಲ್ಲಿ ಬಂದ ನಾಲ್ವರು ಹಂತಕರು ಪಾಯಿಂಟ್ ಬ್ಲಾಂಕ್ ರೇಂಜ್ನಲ್ಲಿ ಸತತವಾಗಿ ಗುಂಡಿನ ಮಳೆಗರೆದಿದ್ದಾರೆ. ಚಂದ್ರನಾಥ್ ಅವರ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ನಾಲ್ಕು ಗುಂಡುಗಳು ತಗುಲಿದ್ದು, ಆಸ್ಪತ್ರೆಗೆ ಸಾಗಿಸುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ವೃತ್ತಿಪರ ಶೂಟರ್ಗಳ ಕೈವಾಡದ ಶಂಕೆ
ಈ ದಾಳಿಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಹಂತಕರು ಸುಮಾರು 40 ನಿಮಿಷಗಳ ಕಾಲ ಸ್ಥಳದಲ್ಲೇ ಅವಿತಿದ್ದ ಬಗ್ಗೆ ಸಾಕ್ಷಿಗಳು ಮಾಹಿತಿ ನೀಡಿವೆ. ದಾಳಿಗೆ ಬಳಕೆಯಾದ ಕಾರನ್ನು ಹಂತಕರು ಸ್ಥಳದಲ್ಲೇ ಬಿಟ್ಟು ಬೈಕುಗಳಲ್ಲಿ ಪರಾರಿಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿಕೋರರು ಅತ್ಯಾಧುನಿಕ ‘ಗ್ಲಾಕ್ 47X’ (Glock 47X) ಪಿಸ್ತೂಲ್ಗಳನ್ನು ಬಳಸಿರುವ ಸಾಧ್ಯತೆಯಿದೆ. ಈ ರೀತಿಯ ಶಸ್ತ್ರಾಸ್ತ್ರಗಳು ಸಾಮಾನ್ಯವಾಗಿ ವೃತ್ತಿಪರ ಹಂತಕರ ಬಳಿ ಇರುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ದಾಳಿಗೆ ಬಳಸಿದ ಬೈಕುಗಳಿಗೆ ನಂಬರ್ ಪ್ಲೇಟ್ ಇರಲಿಲ್ಲ ಮತ್ತು ಕಾರಿನ ಚಾಸಿಸ್ ನಂಬರ್ ಅನ್ನು ಕೂಡ ಕಿತ್ತುಹಾಕುವ ಪ್ರಯತ್ನ ನಡೆಸಲಾಗಿದೆ.

ರಾಜಕೀಯ ಕೆಸರೆರಚಾಟ ಮತ್ತು ಉದ್ವಿಗ್ನತೆ
ಈ ಕೊಲೆಯನ್ನು “ಕೋಲ್ಡ್ ಬ್ಲಡೆಡ್ ಮರ್ಡರ್” ಎಂದು ಕರೆದಿರುವ ಸುವೇಂದು ಅಧಿಕಾರಿ, ದಾಳಿಗೂ ಮುನ್ನ ಹಂತಕರು ಎರಡು-ಮೂರು ದಿನಗಳ ಕಾಲ ಸಂಚು ರೂಪಿಸಿ ‘ರೆಕ್ಕಿ'(ಸ್ಥಳ ಪರಿಶೀಲನೆ) ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಈ ಕೃತ್ಯದ ಹಿಂದೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಕೈವಾಡವಿದೆ ಎಂದು ದೂರಿದ್ದಾರೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದ್ದು, ಘಟನೆಯನ್ನು ಖಂಡಿಸಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಭುಗಿಲೆದ್ದಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಪ್ರಸ್ತುತ ಬಂಗಾಳದ ಪೊಲೀಸ್ ಮಹಾನಿರ್ದೇಶಕ ಸಿದ್ಧನಾಥ್ ಗುಪ್ತಾ ಅವರು ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದು, ಸ್ಥಳದಿಂದ ಸಜೀವ ಗುಂಡುಗಳು ಮತ್ತು ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 200ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ ; ಧೋನಿ ಶಕೆ ಅಂತ್ಯವಾಗಲಿದೆಯೇ? 2026ರ IPLಗೆ ‘ತಲಾ’ ಮರಳುವಿಕೆ ಅನುಮಾನ ; ಅಶ್ವಿನ್ ನೀಡಿದ ಸುಳಿವೇನು?



















